15ನೇ ಕೊಡವ ಪುಸ್ತಕ ಪತ್ತಾಯ: ಮಕ್ಕಳು ಪಠ್ಯದ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಿ

Jul 31, 2026 - 18:28
 0  38
15ನೇ ಕೊಡವ ಪುಸ್ತಕ ಪತ್ತಾಯ: ಮಕ್ಕಳು ಪಠ್ಯದ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಿ

ಮಡಿಕೇರಿ ಜು.31:-ಮಕ್ಕಳು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಪಾಠ ಪುಸ್ತಕಕ್ಕೆ ಒತ್ತುಕೊಡುವುದರ ಜೊತೆಯಲ್ಲಿ ಕಥೆ-ಸಾಹಿತ್ಯದ ವಿಚಾರವಾಗಿ ಒಲವು ತೋರುವುದರಿಂದ ಮುಂದಿನ ದಿನಗಳಲ್ಲಿ ಸಾಹಿತ್ಯಪರ ಚಿಂತನೆಗೆ ಅನುಕೂಲವಾಗುವುದು. ಇದರಿಂದ ತಮ್ಮ ವೃತ್ತಿ ಹಾಗೂ ಸೇವಾನುಭವದ ಮೇಲೆ ಬರೆಯುವ ಲೇಖನಗಳಿಗೆ ನಿಖರವಾದ ಮೌಲ್ಯವಿರುತ್ತದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅಭಿಪ್ರಾಯಪಟ್ಟರು. 

ಕೊಡವ ಸಾಹಿತ್ಯ ಅಕಾಡೆಮಿಯ 15 ನೆ ಕೊಡವ ಪುಸ್ತಕ ಪತ್ತಾಯವನ್ನು ಪೊನ್ನಂಪೇಟೆ ಎಂಜಿನಿಯರಿಂಗ್ ಕಾಲೇಜಿನ ಪದವಿ ಪೂರ್ವ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸ್ಥಾಪಿಸಿ ಮಾತನಾಡಿದ ಅವರು, ಪ್ರತಿಯೊಂದು ಪ್ರದೇಶಕ್ಕೆ ಅದರದೇ ಆದ ಸಾಂಸ್ಕೃತಿಕ ಹಿನ್ನಲೆ ಹಾಗೂ ಪ್ರಾದೇಶಿಕ ಭಿನ್ನತೆ ಇದೆ. ಬಹುಸಂಸ್ಕೃತಿಯ ನಮ್ಮ ಭಾರತ ದೇಶದಲ್ಲಿ ಹಲವು ಜಾತಿ-ಜನಾಂಗಗಳು, ಭಾಷೆ-ಸಂಸ್ಕೃತಿ ಇದ್ದು ಶಾಂತಿ-ಸೌಹಾರ್ದತೆ, ಸಹೋದರತೆಯಿಂದ ಬಾಳಿ ಬದುಕುತ್ತಿರುವುದು ಈ ಮಣ್ಣಿನ ಸುಸಂಸ್ಕೃತಿ ಆಗಿದೆ. ಮಕ್ಕಳು ಚಿಕ್ಕಂದಿನಿಂದಲೇ ಆಯಾಯ ಪ್ರದೇಶಗಳ ಸಾಂಸ್ಕೃತಿಕ ಹಿನ್ನಲೆ, ಭಾಷೆಯ ವೈಶಿಷ್ಟ್ಯತೆಗಳನ್ನು ಅರಿತುಕೊಳ್ಳಬೇಕು. ಇದಕ್ಕೆ ಅನುಕೂಲವಾಗುವಂತೆ ಕೊಡವ ಅಕಾಡೆಮಿಯಿಂದ ಕೊಡವ ಪುಸ್ತಕ ಪತ್ತಾಯ ಯೋಜನೆಯನ್ನು ಜಾರಿಗೆ ತಂದಿದ್ದು, ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳುವಂತಾಗಬೇಕು ಎಂದರು.  

ಕೊಡಗಿನಲ್ಲಿ ಕೊಡವ ಎಜುಕೇಶನ್ ಸೊಸೈಟಿ ಸ್ಥಾಪಿಸಿರುವ ತಾಂತ್ರಿಕ ವಿದ್ಯಾಲಯದ ಜೊತೆಗೆ ಪದವಿ ಪೂರ್ವ ಶಿಕ್ಷಣ ಸಂಸ್ಥೆಯಿಂದ ಅಸಂಖ್ಯಾತ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಲಭಿಸುವಂತಾಗಿದೆ. ಇಂತಹ ಸಂಸ್ಥೆಯಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸುವುದರ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಆಡಳಿತ ಮಂಡಳಿಯ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ದಾನಿ ಡಾ.ಮಚ್ಚರಂಡ ಮಾದಪ್ಪ ಉತ್ತಪ್ಪ, ಪುಸ್ತಕಗಳು ನಮ್ಮೆಲ್ಲರ ಗೆಳೆಯನಿದ್ದಂತೆ. ಅವುಗಳು ನಮ್ಮ ಅಜ್ಞಾನಕ್ಕೆ ಸ್ಪಷ್ಟವಾದ ಉತ್ತರಗಳನ್ನು ಕೊಡುತ್ತದೆ ಹೊರತು ಹೀಯಾಳಿಸುವುದಿಲ್ಲ. ನಮ್ಮೆಲ್ಲ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುವವನೇ ಮಿತ್ರನಾದ ಪುಸ್ತಕ. ಮಕ್ಕಳು ಪುಸ್ತಕಗಳನ್ನು ತಮ್ಮ ಬಾಲ್ಯದ ಗೆಳೆಯನಾಗಿಸಿಕೊಂಡಲ್ಲಿ ಜ್ಞಾನದ ಸಂಪತ್ತು ತುಂಬಿ ಬರುವುದು. 

ಕೊಡಗಿನ ಸಾಂಸ್ಕøತಿಕ ಅಸ್ಮಿತೆಯನ್ನು ತಿಳಿದುಕೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಾರಂಭಿಸಿರುವ ‘ಪುಸ್ತಕ ಪತ್ತಾಯ’ ಒಂದು ಒಳ್ಳೆಯ ಯೋಜನೆಯಾಗಿದೆ. ಮಕ್ಕಳು ಇದರ ಪ್ರಯೋಜನ ಪಡೆದುಕೊಂಡು ವಿದ್ಯಾಸಂಸ್ಥೆಗೆ ಒಳ್ಳೆಯ ಹೆಸರು ತರುವಂತಾಗಬೇಕೆಂದು ಹಾರೈಸಿದರು.

ಕೊಡವ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ.ಮುಕ್ಕಾಟಿರ ಸಿ.ಕಾರ್ಯಪ್ಪ ಮಾತನಾಡಿ, ಕೊಡವ ಸಂಸ್ಕøತಿ ಎಂಬುವುದು ಕೇವಲ ಉಡುಗೆ ತೊಡುಗೆಗಳಿಗೆ ಸೀಮಿತವಾದಂತದಲ್ಲ. ಹಿರಿಯರಿಗೆ, ಗುರುಗಳಿಗೆ, ತಂದೆ-ತಾಯಂದಿರಿಗೆ ಗೌರವ ಕೊಟ್ಟು ನಡೆಯುವುದು, ಕಷ್ಟದಲ್ಲಿರುವ ಯಾರೇ ಇರಲಿ ಸಹಾಯ ಮಾಡುವುದು, ವಿದ್ಯಾವಂತನಾಗಿ ಸಮಾಜಕ್ಕೆ ಒಳಿತನ್ನು ಮಾಡುವುದು ನಿಜವಾದ ಕೊಡವ ಸಂಸ್ಕøತಿ ಆಗಿದೆ ಎಂದು ಅಭಿಪ್ರಾಯಪಟ್ಟರು.

ಮಕ್ಕಳು ಅಂಕಗಳ ಲೆಕ್ಕಾಚಾರದಲ್ಲಿ ಪಾಠ ಪುಸ್ತಕದ ಕಡೆಗೆ ಮಾತ್ರ ಕೇಂದ್ರೀಕರಿಸಿದರೆ ಸಾಲದು, ಬಿಡುವು ಮಾಡಿಕೊಂಡು ಕಾದಂಬರಿಗಳ ಓದಿಗೆ ಸಮಯ ಮೀಸಲಿಡುವುದರಿಂದ ಬದುಕಿನ ಅರ್ಥ ತಿಳಿಯಲು ಅನುಕೂಲ ಆಗುತ್ತದೆ.

ಮಕ್ಕಳಲ್ಲಿ ಪಠ್ಯೇತರವಾಗಿ ಸಾಹಿತ್ಯದ ಬಗ್ಗೆ ಒಲವು ತೋರುವಂತೆ ಮಾಡಲು ಶಿಕ್ಷಕರು ಸಹಕರಿಸುವಂತಾಗಬೇಕು ಎಂದು ಸಲಹೆ ನೀಡಿದರು. ಕೊಡವ ಅಕಾಡೆಮಿಯ ಪುಸ್ತಕ ಪತ್ತಾಯ ವಿದ್ಯಾಸಂಸ್ಥೆಗಳಲ್ಲಿ ಅನಾವರಣಗೊಳ್ಳುತ್ತಿರುವುದು ಒಳ್ಳೆಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ವೇದಿಕೆಯಲ್ಲಿ ಕೂರ್ಗ್ ಇನ್‍ಸ್ಟಿಟ್ಯೂಟ್ ಆಫ್ ಪ್ರಿ ಯೂನಿವರ್ಸಿಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಣ್ಣುವಂಡ ರೋಜಿಣಿ ತಿಮ್ಮಯ್ಯ ಉಪಸ್ಥಿತರಿದ್ದರು. 

ಕಾರ್ಯಕ್ರಮ ಉಪನ್ಯಾಸಕಿ ಕಳ್ಳೆಂಗಡ ಸ್ಪೂರ್ತಿ ಕಾವೇರಮ್ಮ ಸ್ವಾಗತಿಸಿ, ವಂದಿಸಿದರು. ಈ ವೇಳೆ ಸಂಸ್ಥೆಗೆ ಪುಸ್ತಕ ಪತ್ತಾಯದ ನೋಂದಣಿ ಪತ್ರವನ್ನು ನೀಡಲಾಯಿತು. ಸಂಸ್ಥೆಯ ಪರವಾಗಿ ದಾನಿ ಮಚ್ಚರಂಡ ಉತ್ತಪ್ಪರವರು ಅಕಾಡೆಮಿಗೆ ರೂ. ಹತ್ತು ಸಾವಿರದ ಚೆಕ್ ನೀಡಿದರು. ಪ್ರಥಮ ಪಿ.ಯು.ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

ಸಾಹಿತ್ಯಾಭಿಮಾನಿ ಅಪ್ಪನೆರವಂಡ ಮನೋಜ್ ಮಂದಪ್ಪ, ಅಕಾಡೆಮಿಯ ಸದಸ್ಯರುಗಳಾದ ಪೊನ್ನಿರ ಗಗನ್, ಕಂಬೆಯಂಡ ಡೀನ ಬೋಜಣ್ಣ, ನಾಯಂದಿರ ಶಿವಾಜಿ, ಚೊಟ್ಟೆಯಂಡ ಸಂಜು ಕಾವೇರಪ್ಪ, ಚೆಪ್ಪುಡಿರ ಉತ್ತಪ್ಪ, ಸಂಸ್ಥೆಯ ಉಪನ್ಯಾಸಕ ವೃಂದದವರು, ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0