ಅಪ್ರಾಪ್ತ ಹುಡುಗರಿಂದ 17 ವರ್ಷದ ಬಾಲಕನ ಕಗ್ಗೊಲೆ
admincoorgdaily

ನವದೆಹಲಿ, ಫೆ12: ಉತ್ತರ ದೆಹಲಿಯ ಬವಾನಾ ಪ್ರದೇಶದಲ್ಲಿ 17 ವರ್ಷದ ಬಾಲಕನನ್ನು ಇರಿದು ಕೊಲೆ (Death) ಮಾಡಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಬಾಲಾಪರಾಧಿಗಳು ಸೇರಿದಂತೆ 7 ಜನರನ್ನು ಬಂಧಿಸಲಾಗಿದೆ. ಬುಧವಾರ ರಾತ್ರಿ 9.36ರ ಸುಮಾರಿಗೆ ಚಾಕುವಿನಿಂದ ಇರಿದು ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೆಜೆ ಕಾಲೋನಿಯ ನಿವಾಸಿ ಸಲೀಂ ಎಂಬ ಬಾಲಕನಿಗೆ ಚಾಕುವಿನಿಂದ ಇರಿದು ಕೊಲ್ಲಲಾಗಿದೆ. ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದರು.
ವೈದ್ಯಕೀಯ ಪರೀಕ್ಷೆಯಲ್ಲಿ ಆತನ ಎದೆ ಮತ್ತು ದೇಹದ ಇತರ ಭಾಗಗಳಲ್ಲಿ ಅನೇಕ ಇರಿತದ ಗಾಯಗಳು ಕಂಡುಬಂದಿವೆ. ದೂರುದಾರರ ಪ್ರಕಾರ ಆರೋಪಿಗಳು ರಾತ್ರಿ 8.30ರ ಸುಮಾರಿಗೆ ಸಲೀಂನನ್ನು ತಡೆದು ಹಳೆಯ ಗಲಾಟೆಯ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದ್ದಾರೆ.
ಅವರಲ್ಲಿ ಕೆಲವರು ಆತನಿಗೆ ಮುಷ್ಟಿಯಿಂದ ಹೊಡೆದು, ಕಾಲಿನಲ್ಲಿ ಒದ್ದು ಹಿಂಸೆ ನೀಡಿದ್ದಾರೆ, ಇತರರು ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನರೇಲಾ ಕೈಗಾರಿಕಾ ಪ್ರದೇಶ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆ ಬಾಲಕ ಮತ್ತು ಆರೋಪಿಗಳ ನಡುವೆ ಹಳೆಯ ದ್ವೇಷವಿತ್ತು ಎಂದು ತಿಳಿದುಬಂದಿದೆ.
ಬಂಧಿತರಲ್ಲಿ 16 ರಿಂದ 17 ವರ್ಷದೊಳಗಿನ ನಾಲ್ವರು ಅಪ್ರಾಪ್ತ ವಯಸ್ಕರು ಕೂಡ ಸೇರಿದ್ದಾರೆ. ಬಾಲಾಪರಾಧಿಗಳಲ್ಲಿ ಒಬ್ಬ ಈ ಹಿಂದೆ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.