ಗುಡ್ಡೆಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಇನ್ಮುಂದೆ 'ಅಬಾಕಸ್' ಗಣಿತ

Aug 3, 2026 - 17:47
 0  48
ಗುಡ್ಡೆಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಇನ್ಮುಂದೆ 'ಅಬಾಕಸ್' ಗಣಿತ

ಕುಶಾಲನಗರ, ಆ.3 : ಖಾಸಗಿ ಶಾಲೆಗಳ ಮಕ್ಕಳಿಗೆ ಮಾತ್ರ ಮೀಸಲಿದ್ದ ಹೈ-ಟೆಕ್ ಕಲಿಕೆ ಈಗ ಗ್ರಾಮೀಣ ಸರ್ಕಾರಿ ಶಾಲೆಗಳಿಗೂ ವಿಸ್ತರಿಸಿದೆ. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಮತ್ತು ದಾನಿಗಳ ಸಹಯೋಗದಲ್ಲಿ 'ಸ್ಮಾರ್ಟ್ ಬ್ರೈನ್' ಶಿಕ್ಷಣ ಸಂಸ್ಥೆ ವತಿಯಿಂದ ಉಚಿತ ಅಬಾಕಸ್ ಶಿಕ್ಷಣಕ್ಕೆ ಚಾಲನೆ ನೀಡಲಾಗಿದೆ.

ಗ್ರಾಮೀಣ ಭಾಗದ ಮಕ್ಕಳಿಗೆ ಗಣಿತದ ಮೇಲಿನ ಭೀತಿ ಹೋಗಲಾಡಿಸಿ, ಅವರಲ್ಲಿ ಲೆಕ್ಕಾಚಾರದ ಚುರುಕುತನ ಮೂಡಿಸುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ವಾರಕ್ಕೆ 6 ತರಗತಿ, 85ಕ್ಕೂ ಅಧಿಕ ಮಕ್ಕಳಿಗೆ ಅನುಕೂಲ

ಶಾಲೆಯಲ್ಲಿ ಒಟ್ಟು 85 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಎಲ್ಲರಿಗೂ ಅಬಾಕಸ್ ತರಗತಿಗಳನ್ನು ಕಡ್ಡಾಯಗೊಳಿಸಲಾಗಿದೆ. ಸ್ಮಾರ್ಟ್ ಬ್ರೈನ್ ಸಂಸ್ಥೆಯ ವತಿಯಿಂದ ಪ್ರತಿ ವಾರ 3 ಬ್ಯಾಚ್‌ಗಳಲ್ಲಿ ಒಟ್ಟು 6 ತರಗತಿಗಳನ್ನು ನಡೆಸಲಾಗುತ್ತದೆ. ಕಾರ್ಯಕ್ರಮದ ಭಾಗವಾಗಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಬಾಕಸ್ ಪುಸ್ತಕ ಹಾಗೂ ಕಲಿಕೋಪಕರಣಗಳನ್ನು ವಿತರಿಸಲಾಯಿತು.

ಗಿಡಕ್ಕೆ ನೀರೆರೆದು, ಸ್ಲೇಟಿನ ಮಣಿ ಎಣಿಸುವ ಮೂಲಕ ಚಾಲನೆ

ಕಾರ್ಯಕ್ರಮವನ್ನು ದಾನಿ ಹಾಗೂ ನೀರಾವರಿ ಇಲಾಖೆಯ ಅಭಿಯಂತರ ಸೈಜನ್ ಪೀಟರ್ ಅವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ನಂತರ ಅಬಾಕಸ್ ಸ್ಲೇಟ್‌ನ ಮಣಿಗಳನ್ನು ಎಣಿಸುವ ಮುಖಾಂತರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮೇಶ್ ಎಂ.ಆರ್. ತರಗತಿಗಳಿಗೆ ಅಧಿಕೃತ ಚಾಲನೆ ನೀಡಿದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಮಕ್ಕಳಿಗೆ ಗಣಿತ ಇನ್ಮುಂದೆ 'ಕಬ್ಬಿಣದ ಕಡಲೆ' ಅಲ್ಲ:

ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಮಾರ್ಟ್ ಬ್ರೈನ್ ಸಂಸ್ಥೆಯ ಮುಖ್ಯಸ್ಥೆ ಕುಸುಮಾ ಸುಕೇಶ್ ರಾಜ್, "ಆಧುನಿಕ ಯುಗದಲ್ಲಿ ಮಕ್ಕಳಿಗೆ ಗಣಿತವೆಂದರೆ ಕಬ್ಬಿಣದ ಕಡಲೆಯಂತೆ ಭಾಸವಾಗುತ್ತದೆ. ಆದರೆ ಅಬಾಕಸ್ ಕಲಿಕೆಯಿಂದ ಗಣಿತ ಅತ್ಯಂತ ಸರಳ, ವೇಗ ಹಾಗೂ ಖುಷಿಯಾದ ವಿಷಯವಾಗಿ ಬದಲಾಗುತ್ತದೆ" ಎಂದರು.

ಗ್ರಾಮ ಪಂಚಾಯಿತಿಯಿಂದಲೇ ಶಿಕ್ಷಕರ ಗೌರವಧನ:

ಈ ಬಗ್ಗೆ ಮಾಹಿತಿ ನೀಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮೇಶ್ ಎಂ.ಆರ್., "ಗ್ರಾಮ ಪಂಚಾಯತ್ ವತಿಯಿಂದಲೇ ಶಿಕ್ಷಕರನ್ನು ನೇಮಿಸಲಾಗಿದ್ದು, ಅವರ ಗೌರವಧನವನ್ನು ಪಂಚಾಯಿತಿಯಿಂದ ಭರಿಸಲಾಗುತ್ತದೆ. ಕಳೆದ 3-4 ವರ್ಷಗಳಿಂದ ದಾನಿಗಳ ನೆರವಿನಿಂದ ಮುಳ್ಳುಸೋಗೆ, ಗುಮ್ಮನಕೊಲ್ಲಿ ಹಾಗೂ ಕೂಡ್ಲೂರು ಶಾಲೆಗಳಲ್ಲಿ ಈ ಸೌಲಭ್ಯ ನೀಡಲಾಗಿತ್ತು. ಈಗ ನಮ್ಮ ಗುಡ್ಡೆಹೊಸೂರಿನ ಮಕ್ಕಳೂ ವಂಚಿತರಾಗಬಾರದು ಎಂಬ ಉದ್ದೇಶದಿಂದ ದಾನಿಗಳ ನೆರವಿನಿಂದ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗಿದೆ. ಪ್ರತಿಯೊಂದು ಮಗು ಇದರ ಸದುಪಯೋಗ ಪಡೆದುಕೊಳ್ಳಬೇಕು" ಎಂದು ಕರೆ ನೀಡಿದರು.

ಗಣ್ಯರಿಗೆ ಸನ್ಮಾನ:

ಕಾರ್ಯಕ್ರಮದ ಅಂಗವಾಗಿ ಎಸ್‌ಡಿಎಂಸಿ (SDMC) ಅಧ್ಯಕ್ಷರಾದ ನಾಗೇಂದ್ರ ಅವರು ಆಗಮಿಸಿದ್ದ ದಾನಿಗಳು ಹಾಗೂ ಗಣ್ಯರಿಗೆ ಗೌರವಪೂರ್ವಕವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ದಾನಿಗಳಾದ ಸೈಜನ್ ಪೀಟರ್, ಸುಮೇಶ್ ಎಂ.ಆರ್., ನಿತ್ಯಾನಂದ, ಕುಸುಮಾ ಸುಕೇಶ್ ರಾಜ್, ಎಸ್‌ಡಿಎಂಸಿ ಅಧ್ಯಕ್ಷ ನಾಗೇಂದ್ರ, ಶಾಲಾ ಮುಖ್ಯೋಪಾಧ್ಯಾಯರಾದ ಭಾಗ್ಯ ಹಾಗೂ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0