State News

ಅಣ್ಣನ ಮೇಲಿನ ಕೋಪಕ್ಕೆ ಆತ ಸಾಕಿದ್ದ ನಾಯಿಗೆ ಗುಂಡಿಟ್ಟು ಕೊಂದ ಸಹೋದರ

admincoorgdaily

AI image

ದೇವನಹಳ್ಳಿ, ಏಪ್ರಿಲ್​​ 03: ಅಣ್ಣನ ಮೇಲಿನ ಕೋಪಕ್ಕೆ ಆತ ಸಾಕಿದ್ದ ನಾಯಿಗೆ ಗುಂಡಿಟ್ಟು ವ್ಯಕ್ತಿಯೋರ್ವ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ರೆಡ್ಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

 ಸಹೋದರ ವೆಂಕಟೇಶ್ ಮೇಲೆ ಇದ್ದ ಕೋಪಕ್ಕೆ ತಮ್ಮ ನಾರಾಯಣಸ್ವಾಮಿ ಈ ಕೃತ್ಯ ಎಸಗಿದ್ದು, ಆಸ್ತಿ ವಿಚಾರವಾಗಿ ಸಹೋದರರ ನಡುವೆ ಬಹು ಸಮಯದಿಂದ ಜಗಳ ನಡೆಯುತ್ತಿತ್ತು. ಈ ನಡುವೆ ತಾನು ಹೂಕೋಸು ಬೆಳೆದಿದ್ದ ಜಮೀನಿನಲ್ಲಿ ವೆಂಕಟೇಶ್​​ ಸಾಕಿದ್ದ ನಾಯಿ ಯಾವಾಗಲೂ ಸುತ್ತಾಡುತ್ತೆ ಎಂದು ಆರೋಪಿಸಿ ಸಹೋದರನ ಮನೆ ಬಳಿ ಬಂದ ನಾರಾಯಣಸ್ವಾಮಿ ಬಂದೂಕಿನಿಂದ ನಾಯಿಗೆ ಶೂಟ್​​ ಮಾಡಿದ್ದಾನೆ ಎನ್ನಲಾಗಿದೆ.

ಅಂದಹಾಗೆ ಇವರಿಬ್ಬರೂ ಮಲತಾಯಿ ಮಕ್ಕಳಾಗಿದ್ದು, ಇಬ್ಬರ ನಡುವೆ ಹಳೆಯ ದ್ವೇಷವಿತ್ತು. ನಾರಾಯಣಸ್ವಾಮಿ ಯಾವಾಗಲೂ ಅಣ್ಣ ವೆಂಕಟೇಶ್ ಕುಟುಂಬವನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನಂತೆ. ಮೊನ್ನೆಯೂ ಬೇಕು ಅಂತಾ ರಸ್ತೆಯಲ್ಲಿ ಹೋಗ್ತಿದ್ದ ನಾಯಿಗೆ ನಾರಾಯಣಸ್ವಾಮಿ ಕಲ್ಲು ಹೊಡೆದು ಓಡಿಸಿದ್ದಲ್ಲದೆ, ಅದರ ಮೇಲೆ ಫೈರಿಂಗ್ ಮಾಡಿದ್ದಾನೆ.

ಪರಿಣಾಮ ಗುಂಡೇಟು ತಿಂದ ಸಾಕು ನಾಯಿ ಸ್ಥಳದಲ್ಲೇ ಜೀವ ಬಿಟ್ಟಿದೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮೃತ ನಾಯಿಯ ಶವ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ಮಾಡಲಾಗಿದೆ. ಅಲ್ಲದೆ ಘಟನೆ ಬಗ್ಗೆ ವೆಂಕಟೇಶ್ ನೀಡಿದ ದೂರಿನ ಅನ್ವಯ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

 ಇನ್ನು ಕೇಸ್​​ ದಾಖಲಾಗುತ್ತಿದ್ದಂತೆ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ನಾಯಿ ಮೇಲೆ ಶೂಟ್ ಮಾಡಿದ್ದ ಗುಂಡನ್ನ ವಶಕ್ಕೆ ಪಡೆದಿದಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ನಾರಾಯಣಸ್ವಾಮಿ ಹಾಗೂ ಆತನ ಪತ್ನಿ ನಾಗಮ್ಮ ಮೇಲೆ FIR ದಾಖಲಾಗಿದ್ದು, ಸಹೋದರನ ಮೇಲಿನ ಸಿಟ್ಟಿಗೆ ಮೂಖ ಪ್ರಾಣಿಯನ್ನ ಕೊಂದ ಇಂತವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.