ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ಶುದ್ಧೀಕರಣ : ಕಾನೂನು ಕ್ರಮಕ್ಕೆ ಮಾನವ ಬಂಧುತ್ವ ವೇದಿಕೆ ಮತ್ತು ದಲಿತ ಸಂಘರ್ಷ ಸಮಿತಿ ಒತ್ತಾಯ

Aug 18, 2026 - 19:48
 0  85
ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ಶುದ್ಧೀಕರಣ : ಕಾನೂನು ಕ್ರಮಕ್ಕೆ ಮಾನವ ಬಂಧುತ್ವ ವೇದಿಕೆ ಮತ್ತು ದಲಿತ ಸಂಘರ್ಷ ಸಮಿತಿ ಒತ್ತಾಯ

ಮಡಿಕೇರಿ ಆ.18 : ಉತ್ತರಾಖಂಡದ ಹಲ್ದಾದ್ವಾನಿಯಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಭಾಗವಹಿಸಿದ್ದ ವೇದಿಕೆಯನ್ನು ಹೋಮ-ಹವನದ ಮೂಲಕ ಶುದ್ಧೀಕರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಜೆ.ಎಲ್.ಜನಾರ್ಧನ್ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಂ.ಎಸ್.ವೀರೇಂದ್ರ ಒತ್ತಾಯಿಸಿದ್ದಾರೆ. 

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇಂತಹ ಕೃತ್ಯಗಳು ಖಂಡನೀಯವಾಗಿದ್ದು, ಭಾರತ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ತೋರುವ ಬೆಳವಣಿಗೆಯಾಗಿದೆ. ಜಾತಿವಾದಿ ಹಾಗೂ ಕೋಮುವಾದಿ ಮನಸ್ಥಿತಿಯ ಕೆಲವರು ನಡೆಸಿರುವ ಈ ಕೃತ್ಯ ಜಗತ್ತಿನ ಮುಂದೆ ಭಾರತ ತಲೆತಗ್ಗಿಸುವಂತಾಗಿದೆ ಎಂದು ಆರೋಪಿಸಿದ್ದಾರೆ. 

ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳಾದರೂ ಜಾತಿವಾದಿಗಳಿಂದ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವಂತಹ ಘಟನೆಗಳು ನಡೆಯುತ್ತಿರುವುದು ವಿಷಾದನೀಯ. ಇಂತಹ ಘಟನೆಗಳು ಈ ಹಿಂದೆ ಜನಸಾಮಾನ್ಯರ ಮೇಲೂ ನಡೆದಿದ್ದು, ಇದೀಗ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ವ್ಯಕ್ತಿಯೊಬ್ಬರ ವಿರುದ್ಧ ನಡೆದಿರುವುದು ಖಂಡನೀಯವಾಗಿ. ತಪ್ಪಿತಸ್ಥರ ವಿರುದ್ಧ ಸರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರಾಜಕೀಯ ಕ್ಷೇತ್ರದ ಮೂಲಕ ದೇಶಕ್ಕಾಗಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ವೇದಿಕೆ ಶುದ್ಧೀಕರಣದ ನೆಪದಲ್ಲಿ ಪರೋಕ್ಷವಾಗಿ ಅವಮಾನಿಸಲಾಗಿದೆ. ಸಂವಿಧಾನದಡಿಯಲ್ಲಿ ಇಂತಹ ಕೃತ್ಯಗಳಿಗೆ ಅವಕಾಶವಿಲ್ಲದಿದ್ದರೂ ಪ್ರಕರಣ ನಡೆದಿರುವುದು ಕಳವಳಕಾರಿವಾಗಿದೆ. ಈ ರೀತಿಯ ಮನಸ್ಥಿತಿಗಳನ್ನು ಕಾನೂನು ಕ್ರಮದ ಮೂಲಕ ತಿದ್ದುವ ಅಗತ್ಯವಿದೆ. ಸಂವಿಧಾನದ ಆಶಯಗಳಿಗೆ ಅಪಚಾರ ಮಾಡಿರುವವರ ವಿರುದ್ಧ ಶಿಕ್ಷೆ ವಿಧಿಸದೆ ಇದ್ದರೆ ದೇಶವ್ಯಾಪಿ ದಲಿತ ಸಂಘಟನೆಗಳು ಹೋರಾಟವನ್ನು ರೂಪಿಸಲಿವೆ ಎಂದು ಜೆ.ಎಲ್.ಜನಾರ್ಧನ್ ಹಾಗೂ ಎಂ.ಎಸ್.ವೀರೇಂದ್ರ ಎಚ್ಚರಿಕೆ ನೀಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0