ಭಾರತ್ ಜೋಡೋ ಯುವ ಸಂಘ ಸ್ಥಾಪನೆಗೆ ಜಿಲ್ಲಾಧಿಕಾರಿ ಸೋಮಶೇಖರ್ ಸೂಚನೆ

Aug 4, 2026 - 16:19
 0  66
ಭಾರತ್ ಜೋಡೋ ಯುವ ಸಂಘ ಸ್ಥಾಪನೆಗೆ ಜಿಲ್ಲಾಧಿಕಾರಿ ಸೋಮಶೇಖರ್ ಸೂಚನೆ

ಮಡಿಕೇರಿ:-ಭಾರತ್ ಜೋಡೋ ಯುವ ಸಂಘ ಸ್ಥಾಪನೆಗೆ ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ನಿರ್ದೇಶನ ನೀಡಿದ್ದಾರೆ. 

       ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಭಾರತ್ ಜೋಡೋ ಯುವ ಸಂಘ ಸ್ಥಾಪನೆ ಸಂಬಂಧ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

       ಯುವ ಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಮುದಾಯಿಕ, ಸಾಮಾಜಿಕ ಸಾಮರಸ್ಯವನ್ನು-ಉತ್ತೇಜಿಸುವಲ್ಲಿ ಸರ್ಕಾರ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಆ ನಿಟ್ಟಿನಲ್ಲಿ ಪಂಚಾಯತ್ ರಾಜ್ ಹಾಗೂ ನಗರಾಭಿವೃದ್ಧಿ, ಪೌರಾಡಳಿತ ಇಲಾಖೆ ಅಧಿಕಾರಿಗಳು ತುರ್ತು ಕ್ರಮವಹಿಸುವಂತೆ ಸೂಚಿಸಿದರು. 

       ಜಿಲ್ಲೆಯಲ್ಲಿ ಪ್ರತೀ ಗ್ರಾ.ಪಂ.ವ್ಯಾಪ್ತಿಯಲ್ಲಿ ತಲಾ ಒಂದು ಭಾರತ್ ಜೋಡೋ ಯುವ ಸಂಘ ಸ್ಥಾಪಿಸಬೇಕಿದೆ. ಪ್ರತೀ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಾಸರಿ 4 ಸಾವಿರ ಜನಸಂಖ್ಯೆಗೆ ಒಂದು ಸಂಘ, ಪ್ರತೀ ಪುರಸಭೆಯಲ್ಲಿ ಸರಾಸರಿ 6 ಸಾವಿರ ಜನಸಂಖ್ಯೆಗೆ ಒಂದು ಸಂಘ, ನಗರಸಭೆ ವ್ಯಾಪ್ತಿಯಲ್ಲಿ ಸರಾಸರಿ 8 ಸಾವಿರ ಜನಸಂಖ್ಯೆಗೆ ಒಂದು ಸಂಘ ಸ್ಥಾಪಿಸಬೇಕಿದೆ ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ವಿವರಿಸಿದರು.  

        ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಜಿಲ್ಲೆಯಲ್ಲಿ 102 ಗ್ರಾಮ ಪಂಚಾಯಿತಿಗಳಿದ್ದು, ಪ್ರತೀ ಗ್ರಾ.ಪಂ.ಯಲ್ಲೂ ತಲಾ ಒಂದು ಭಾರತ್ ಜೋಡೋ ಯುವ ಸಂಘ ಸ್ಥಾಪನೆಗೆ ಮುಂದಾಗಲಾಗುವುದು ಎಂದರು. 

        ಸ್ಥಳೀಯ ಸಮುದಾಯದ ಅಭಿವೃದ್ಧಿ, ಸಾಮಾಜಿಕ ಸಾಮರಸ್ಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ಯುವಕರನ್ನು ನೇರ ಪಾಲುದಾರರನ್ನಾಗಿ ಮಾಡುವುದು. ಹಾಗೆಯೇ ಕ್ರೀಡೆ, ಪಿಟ್ನೆಸ್ ಮತ್ತು ಕೌಶಲ್ಯಾಭಿವೃದ್ಧಿ ಮೂಲಕ ಯುವಜನರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣ ಸಾಧಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ಆನಂದ್ ಪ್ರಕಾಶ್ ಮೀನಾ ಅವರು ತಿಳಿಸಿದರು. 

        ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಮಂಜುನಾಥ ರಾಮಣ್ಣ ಅವರು ಮಾತನಾಡಿ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ 4, ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ 5, ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ 4, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2. ಸೋಮವಾರಪೇಟೆ ಪಟ್ಟಣ ಪಂಚಾಯಿತಿ 1 ಭಾರತ್ ಜೋಡೋ ಸಂಘ ಸ್ಥಾಪಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.  

        ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸೋಮಶೇಖರ್ ಅವರು ಭಾರತ್ ಜೋಡೋ ಯುವ ಸಂಘಕ್ಕೆ ಪ್ರತೀ ಸಂಘಕ್ಕೆ ವರ್ಷಕ್ಕೆ ತಲಾ 10 ಲಕ್ಷ ರೂ. ಸರ್ಕಾರದಿಂದ ಅನುದಾನ ಬಿಡುಗಡೆಯಾಗಲಿದೆ ಎಂದು ಅವರು ಹೇಳಿದರು.  

        ಪ್ರತೀ ಸಂಘಕ್ಕೆ ಒಬ್ಬ ತರಬೇತಿದಾರರ ಗೌರವಧನಕ್ಕೆ ವಾರ್ಷಿಕ 24 ಸಾವಿರ ರೂ. ಭರಿಸಲಾಗುತ್ತದೆ. ಆ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. 

        ವಿಕಾಸಶೀಲ ಮತ್ತು ಸೌಹಾರ್ದಶೀಲ ಕರ್ನಾಟಕ ನಿರ್ಮಾಣಕ್ಕಾಗಿ ಪ್ರತೀ ಗ್ರಾ.ಪಂ.ಮತ್ತು ನಗರ ವಾರ್ಡ್ಗಳಲ್ಲಿ ಯುವ ವೇದಿಕೆಯನ್ನು ಸ್ಥಾಪಿಸುವುದು, ಯುವಜನರಲ್ಲಿ ನಾಯಕತ್ವ ಗುಣಗಳು, ಸಾಮಾಜಿಕ ಹೊಣೆಗಾರಿಕೆ ಮತ್ತು ನಾಗರಿಕ ಪ್ರಜ್ಞೆ ಮೂಡಿಸುವುದು ಯೋಜನೆಯ ದೂರದೃಷ್ಟಿ ಉದ್ದೇಶವಾಗಿದೆ ಎಂದರು. 

        ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಅವರು ಮಾತನಾಡಿ ಭಾರತ್ ಜೋಡೋ ಯುವ ಸಂಘ ಸ್ಥಾಪಿಸುವಲ್ಲಿ ಪೋರ್ಟಲ್, ಮೊಬೈಲ್ ಆಪ್ ಮೂಲಕ ಅಥವಾ ಗ್ರಾಮ ಪಂಚಾಯಿತಿ ಹಾಗೂ ನಗರ ಪ್ರದೇಶದಲ್ಲಿ ಗ್ರಾಮ ಒನ್, ಕರ್ನಾಟಕ ಒನ್, ನಾಗರಿಕ ಸೇವಾ ಕೇಂದ್ರಗಳ ಸಹಾಯದಿಂದ ಅರ್ಜಿ ಸಲ್ಲಿಸಬೇಕಿದೆ ಎಂದು ತಿಳಿಸಿದರು. 

       ‘ಪ್ರತಿಯೊಬ್ಬ ಸದಸ್ಯರ ನೋಂದಣಿಗೆ ಆಧಾರ್ ಕಡ್ಡಾಯವಾಗಿದ್ದು, ಭಾರತ್ ಜೋಡೋ ಯುವ ಸಂಘದಲ್ಲಿ 16 ರಿಂದ 35 ವರ್ಷದ ಯುವಕರಿಗೆ ಸಂಘದ ನೋಂದಣಿಯಾಗಲು ಅವಕಾಶವಿದೆ ಎಂದು ಮಾಹಿತಿ ನೀಡಿದರು. 

        ಘಟಕ ರಚನೆಗೆ ಕನಿಷ್ಠ 100 ಯುವ ಜನರು ಸದಸ್ಯರಾಗಿರಬೇಕು. ಪ್ರತೀ ಸದಸ್ಯರು ಗುರುತಿನ ಚೀಟಿಗಾಗಿ 10 ರೂ. ನೋಂದಣಿ ಶುಲ್ಕ ಭರಿಸಬೇಕು. ಪ್ರತಿಯೊಂದು ಸಂಘವು ಕರ್ನಾಟಕ ಸೊಸೈಟೀಸ್ ರಿಜಿಸ್ಟ್ರೇಷನ್ ಆಕ್ಟ್ 1960 ರಡಿಯಲ್ಲಿ ನೋಂದಾಯಿಸಿರಬೇಕು. ಅರ್ಜಿದಾರರು ಅದೇ ಗ್ರಾಮ ಪಂಚಾಯಿತಿ/ವಾರ್ಡಿನ ಆರ್ಡಿನರಿ ರೆಸಿಡೆಂಟ್ ಆಗಿರಬೇಕು. ಒಬ್ಬರು ಒಂದು ಸಂಘದಲ್ಲಿ ಮಾತ್ರ ಸದಸ್ಯತ್ವ ಪಡೆಯಲು ಅರ್ಹರಾಗಿರುತ್ತಾರೆ ಎಂದು ವಿವರಿಸಿದರು. 

         ಘಟಕದ ಆಡಳಿತ ಮತ್ತು ಕಾರ್ಯಕಾರಿ ಸಮಿತಿ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು ಪ್ರತೀ ಘಟಕವು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ 15 ಜನ ಸದಸ್ಯರ ಆಂತರಿಕ ಕಾರ್ಯಕಾರಿ ಸಮಿತಿಯನ್ನು ಹೊಂದಿರಬೇಕು. ಒಬ್ಬ ಅಧ್ಯಕ್ಷರು. ಒಬ್ಬ ಉಪಾಧ್ಯಕ್ಷರು, ಒಬ್ಬ ಖಜಾಂಚಿ ಹಾಗೂ 12 ಜನ ಕಾರ್ಯಕಾರಿ ಸದಸ್ಯರು ಇರಬೇಕು. ಅಧ್ಯಕ್ಷರು ಅಥವಾ ಉಪಾಧ್ಯಕ್ಷರಲ್ಲಿ ಒಬ್ಬ ಮಹಿಳೆಯರು ಕಡ್ಡಾಯವಾಗಿ ಇರಬೇಕು ಎಂದು ಹೇಳಿದರು. 

        ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿಯು ಸಂಘದ ಅರ್ಹ ಸದಸ್ಯರ ಪೈಕಿ ಕಾರ್ಯಕಾರಿ ಸಮಿತಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಿದೆ. ಕಾರ್ಯಕಾರಿ ಸಮಿತಿಯ ಇತರೆ ಪದಾಧಿಕಾರಿಗಳು ಮತ್ತು ಎಲ್ಲಾ ಸದಸ್ಯರು ಆಯ್ಕೆಗೆ ಅರ್ಜಿ ಸಲ್ಲಿಸಿದ ಅರ್ಹ ಸದಸ್ಯರ ಪೈಕಿ ಯಾದೃಚಿಕ ಚೀಟಿ ಎತ್ತುವಿಕೆ ವಿಧಾನದಿಂದ ಆಯ್ಕೆ ಮಾಡಬೇಕು ಎಂದರು. 

        ಕಾರ್ಯಕಾರಿ ಸಮಿತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೂವರು ಸದಸ್ಯರು, ಇದರಲ್ಲಿ ಒಬ್ಬ ಮಹಿಳೆ ಕಡ್ಡಾಯ, ಒಬಿಸಿ ಮತ್ತು ಅಲ್ಪಸಂಖ್ಯಾತರು 4 ಸದಸ್ಯರು, ಒಬ್ಬ ಮಹಿಳೆ ಕಡ್ಡಾಯ, ಸಾಮಾನ್ಯ 8 ಸದಸ್ಯರು, ಇವರಲ್ಲಿ ಮೂವರು ಮಹಿಳೆಯರು ಕಾರ್ಯಕಾರಿ ಸಮಿತಿಯಲ್ಲಿ ಇರಬೇಕು. ಕಾರ್ಯಕಾರಿ ಸಮಿತಿ ಎರಡು ವರ್ಷ ಆಗಿದ್ದು, ಪುನರಾವರ್ತನೆಗೆ ಅವಕಾಶವಿರುವುದಿಲ್ಲ ಎಂದರು. 

        ಸಂಘದ ಕಾರ್ಯಕಾರಿ ಸಮಿತಿಯು ಆಯಾಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳನ್ನು ಸಮವಾಗಿ ಪ್ರತಿನಿಧಿಸುವುದಾಗಿದೆ. ಪ್ರತೀ ಭಾರತ್ ಜೋಡೋ ಯುವ ಸಂಘ ಪದಾಧಿಕಾರಿಗಳಲ್ಲಿ ಮತ್ತು ಅದರ ಸದಸ್ಯರಲ್ಲಿ ಆಯಾಯ ವ್ಯಾಪ್ತಿಯಲ್ಲಿ ವಾಸವಿರುವ ಎಲ್ಲಾ ಜಾತಿ, ಧರ್ಮದವರನ್ನು ಕಡ್ಡಾಯವಾಗಿ ಒಳಗೊಂಡಿರಬೇಕು ಎಂದು ತಿಳಿಸಿದರು. 

        ಸಂಘವು ಸಂಘದ ಚಟುವಟಿಕೆಗೆ ಸಿಎಸ್‌ಆರ್ ಹಣ ಪಡೆದು ಬಳಸಲು ಅವಕಾಶವಿದೆ. ಅನುಮೋದಿತ ಚಟುವಟಿಕೆಗಳಿಗೆ ಮಾತ್ರ ಬಳಸುವುದು. ಎಲ್ಲಾ ಪಾವತಿಯನ್ನು ಬ್ಯಾಂಕ್ ಮೂಲಕ ಮಾಡಬೇಕು. ಕಂತಿನ ಬಿಡುಗಡೆಗೆ ಬಳಕೆ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದ್ದು, ಭಾರತ್ ಜೋಡೋ ಯುವ ಸಂಘ ಸಾಫ್ಟ್ವೇರ್ ಮೂಲಕ ವೆಚ್ಚ ಪರಿಶೀಲನೆ ನಡೆಯಲಿದೆ ಎಂದರು. 

        ಭಾರತ್ ಜೋಡೋ ಯುವ ಸಂಘವನ್ನು ಕಾಲಮಿತಿಯಲ್ಲಿ ನಿರ್ವಹಿಸಬೇಕಿದ್ದು, ಆ ದಿಸೆಯಲ್ಲಿ ಯೋಜನೆಯ ಮಾರ್ಗಸೂಚಿ ಅಂತಿಮಗೊಳಿಸುವಿಕೆ, ಘಟಕಗಳ ನೋಂದಣಿ ಮತ್ತು ಸಾಫ್ಟ್ವೇರ್ ಸಜ್ಜುಗೊಳಿಸುವಿಕೆ ಮತ್ತಿತರವನ್ನು ಶೀಘ್ರ ನಿರ್ವಹಿಸಬೇಕು. ಆ ನಿಟ್ಟಿನಲ್ಲಿ ಎಲ್ಲಾ ಹಂತದ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆ ವಿ.ಟಿ.ವಿಸ್ಮಯಿ ಅವರು ಕೋರಿದರು. 

        ಜಿ.ಪಂ.ಉಪ ಕಾರ್ಯದರ್ಶಿ ಅಬ್ದುಲ್ ನಭೀ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶೇಖರ್, ತಾ.ಪಂ.ಇಒಗಳಾದ ಪರಮೇಶ್, ಅಪ್ಪಣ್ಣ, ರಾಜೇಶ್, ನಗರಸಭೆ ಪೌರಾಯುಕ್ತರಾದ ಎಚ್.ಆರ್.ರಮೇಶ್, ಪುರಸಭೆ ಮುಖ್ಯಾಧಿಕಾರಿಗಳಾದ ಕೃಷ್ಣಪ್ರಸಾದ್, ನಾಚಪ್ಪ, ಗೋಪಿ, ಇತರರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0