ಹಾರಂಗಿ : ಕ್ರೀಡಾಂಗಣಕ್ಕೆ ಹುತಾತ್ಮ ಯೋಧ ಕೆ.ರಾಘವೇಂದ್ರ ಹೆಸರು ನಾಮಕರಣ

Jul 13, 2026 - 11:21
 0  198
ಹಾರಂಗಿ : ಕ್ರೀಡಾಂಗಣಕ್ಕೆ ಹುತಾತ್ಮ ಯೋಧ ಕೆ.ರಾಘವೇಂದ್ರ ಹೆಸರು ನಾಮಕರಣ

ಕುಶಾಲನಗರ : ಕಳೆದ ಮೂರು ದಶಕಗಳ ಹಿಂದೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ.(ಸಿಎಸ್ಎಫ್ಐ )ಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಮಾವೋವಾದಿ ಉಗ್ರರ ದಾಳಿಗೆ ಬಲಿಯಾದ ಹಾರಂಗಿ ನಿವಾಸಿ ವೀರ ಯೋಧ ಕೆ.ರಾಘವೇಂದ್ರ ಅವರ ಹೆಸರನ್ನು ಚಿರಸ್ಥಾಯಿಯಾಗಿಸುವ ಉದ್ದೇಶದಿಂದ ಹಾರಂಗಿ ಕ್ರೀಡಾಂಗಣಕ್ಕೆ ಭಾನುವಾರ ನಾಮಕರಣ ಮಾಡಲಾಯಿತು.

ಹಾರಂಗಿ ನೀರಾವರಿ ಇಲಾಖೆ, ಕೂಡುಮಂಗಳೂರು ಗ್ರಾಮ ಪಂಚಾಯತಿ ಹಾಗೂ ಭಾರತ ಸರ್ಕಾರ ,ಕೇಂದ್ರ ಗೃಹ ಸಚಿವಾಲಯ,ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಐ) ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕ್ರೀಡಾಂಗಣಕ್ಕೆ ಧೀರ ಹೃದಯಿ ರಾಘವೇಂದ್ರ ಕೆ.ಕ್ರೀಡಾಂಗಣ ಎಂದು ನಾಮಕರಣ ಮಾಡಿದ್ದು, ನಾಮಫಲಕವನ್ನು ಶಾಸಕ ಡಾ‌‌.ಮಂತರ್ ಗೌಡ ಹಾಗೂ ಸಿಐಎಸ್ಎಫ್ ಡಿಐಜಿ ನೆಲ್ಲೂರು ಪೆರುಮಾಳ್ ಅವರು ಉದ್ಘಾಟಿಸಿದರು.

 ನಂತರ ವೀರಯೋಧ ಭಾವಚಿತ್ರಕ್ಜೆ ಪುಷ್ಪ ಗುಚ್ಛವನ್ನು ಅರ್ಪಿಸುವ ಮೂಲಕ ಶಾಸಕರು ಹಾಗೂ ಅಧಿಕಾರಿಗಳು ಗೌರವ ಸಲ್ಲಿಸಿದರು. ಮೈದಾನದ ಅಂಚಿನಲ್ಲಿ ಶಾಸಕರು ಗಿಡನೆಟ್ಟು ನೀರು ಹಾಕಿದರು. ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಶಾಸಕ ಮಂತರ್ ಗೌಡ ಅವರು, ಸ್ವಾತಂತ್ರ್ಯ ಹೋರಾಟಗಾರ ಕುಟುಂಬದಿಂದ ಬಂದ ರಾಘವೇಂದ್ರ ಅವರ ದೇಶಸೇವೆ ಶ್ಲಾಘನೀಯ.

ಹುತಾತ್ಮರಾದ ಯೋಧರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು.ಈ ಹಿನ್ನೆಲೆಯಲ್ಲಿ ಕ್ರೀಡಾಂಗಣಕ್ಕೆ ರಾಘವೇಂದ್ರ ಅವರ ಹೆಸರು ನಾಮಕರಣ ಮಾಡಲಾಗಿದೆ. ಇದು ಇತರೆ ಯುವ ಜನರಿಗೆ ಸ್ಪೂರ್ತಿ ಹಾಗೂ ಪ್ರೇರಣೆಯಾಗಬೇಕು ಎಂದರು.

ಮೈದಾನಕ್ಕೆ ಹುತಾತ್ಮ ಯೋಧ ಹೆಸರನ್ನು ನಾಮಕರಣ ಮಾಡಿರುವ‌ ಕಾರ್ಯ ಶ್ಲಾಘನೀಯ ಎಂದರು. ಕ್ರೀಡಾಗಂಣ ಅಭಿವೃದ್ಧಿಗೆ ಶಾಸಕ ನಿಧಿಯಿಂದ ರೂ.15 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಹಾರಂಗಿ ಬಸ್ ನಿಲ್ದಾಣಕ್ಕೂ ಕೂಡ ಯೋಧ ರಾಘವೇಂದ್ರ ಹೆಸರಿಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.ಮೈದಾನ ಅಭಿವೃದ್ಧಿ ಹಾಗೂ ಗ್ಯಾಲರಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.ಮೈದಾನದ ಅಂಚಿನಲ್ಲಿ ಗಿಡನೆಡಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರ ಸೂಚನೆ ನೀಡಿದರು.

ಸಿಐಎಸ್ಎಫ್ ಡಿಐಜಿ ನೆಲ್ಲೂರು ಪೆರುಮಾಳ್ ಮಾತನಾಡಿ, ರಾಘವೇಂದ್ರ ಅವರ ದೇಶ ಸೇವೆ ಶ್ಲಾಘನೀಯ ಎಂದರು.ಅಸ್ಸಾಂ ನಲ್ಲಿ ಕರ್ತವ್ಯ ಮುಗಿಸಿ ಬರುತ್ತಿರುವ ಸಂದರ್ಭ ಉಗ್ರರು ದಾಳಿ ನಡೆಸಿದರು. ಈ ವೇಳೆ ಒಂಬತ್ತು ಯೋಧರು ಹುತಾತ್ಮರಾದರು ಎಂದು ಹೇಳಿದರು. ಹುತಾತ್ಮ ಯೋಧನ ಹೆಸರನ್ನು ಚಿರಸ್ಥಾಯಿಯಾಗಿಡಲು ಮೈದಾನಕ್ಕೆ ನಾಮಕರಣ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಇಲಾಖೆ ಶ್ಲಾಘಿಸುತ್ತದೆ ಎಂದರು.

ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ದೇಶ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಸಿಐಎಸ್ಎಫ್ ಸೇರಿದ ರಾಘವೇಂದ್ರ ಅವರು ಒಂಬತ್ತು ವರ್ಷ ಸೇವೆ ಸಲ್ಲಿಸಿದರು. ಉಗ್ರರ ದಾಳಿಗೆ ಬಲಿಯಾಗದೆ ಹೋಗಿದ್ದರೆ ರಾಘವೇಂದ್ರ ಅವರು ಉನ್ನತ ಹುದ್ದೆ ಅಲಂಕರಿಸಿ ಗ್ರಾಮಕ್ಕೆ ಬರುತ್ತಿದ್ದರು ಎಂದು ಸ್ಮರಿಸಿಕೊಂಡರು.ಯೋಧರ ಹೆಸರನ್ನು ಕ್ರೀಡಾಂಗಣಕ್ಕೆ ನಾಮಕರಣ ಮಾಡಿರುವ‌ ಕ್ರಮ ಯುವಜನಾಂಕ್ಕೆ ಪ್ರೇರಣೆಯಾಗಲಿದೆ ಎಂದರು.

 ರಾಘವೇಂದ್ರ ಸಹೋದರ ಸುರೇಶ್ ಬಾಬು ಮಾತನಾಡಿ, ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರು.ಈ ಹಿನ್ನೆಲೆಯಲ್ಲಿ ನನ್ನ ಸಹೋದರ ದೇಶ ಸೇವೆಗಾಗಿ ಸೈನ್ಯ ಸೇರಿ ಒಂಬತ್ತು ವರ್ಷಗಳ ಕರ್ತವ್ಯ ನಿರ್ವಹಿಸಿ ಹಿರಿಯ ಅಧಿಕಾರಿಗಳ‌ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ಸ್ಮರಿಸಿದರು. ಇದೇ ಸಂದರ್ಭ ಹುತಾತ್ಮ ಯೋಧ ರಾಘವೇಂದ್ರ ಅವರ ತಾಯಿ‌ ಕಮಲಮ್ಮ ಅವರನ್ನು ಹಾಗೂ ಸಿಐಎಸ್ಎಫ್ ಅಧಿಕಾರಿಗಳನ್ನು ಶಾಸಕ ಮಂತರ್ ಗೌಡ ಸನ್ಮಾನಿಸಿ ಗೌರವಿಸಿದರು.

 ಈ ಸಂದರ್ಭ ಹಾರಂಗಿ ಅಣೆಕಟ್ಟೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ, ಕಿರಿಯ ಎಂಜಿನಿಯರ್ ‌ಕಿರಣ್,ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಸಿಐಎಸ್ಎಫ್ ಮೈಸೂರು ಆರ್.ಎಂ.ಸಿ ವಿಭಾಗದ ಅಸಿಸ್ಟೆಂಟ್ ಕಮಾಂಡರ್ ಯೋಗೇಶ್ ಚಂದ್ರಮಿಶ್ರ, ಇನ್ಸ್‌ಪೆಕ್ಟರ್ ಆರ್.ಕೆ.ಗೌತಮ್ ,ಪಿಎಸ್ಐ ಗಳಾದ ರಾಹುಲ್, ಹರಿಕೃಷ್ಣ,ತರಬೇತಿ ಕೇಂದ್ರದ ಹೆಡ್ ಕಾನ್ಸ್‌ಟೇಬಲ್ ಬಿ.ಕೆ.ಗುರುಮೂರ್ತಿ ಹಾಗೂ 25 ಸಿಬ್ಬಂದಿ ಹಾಗೂ ಕೂಡ್ಲೂರು ಗ್ರಾಮಾಒ ಪೊಲೀಸ್ ಠಾಣೆಯ ಪಿಎಸ್ಐ ಎನ್.ರಾಮಚಂದ್ರ,ಹುತಾತ್ಮ ಯೋದರ ಕುಟುಂಬಸ್ಥರಾದ ಕಮಲಮ್ಮ,ಸುರೇಶ್ ಬಾಬು,ವಾಣಿ, ಅಶ್ವಥ್,ಮುಖಂಡರಾದ ಎಚ್.ಕೆ.ನಟೇಶ್ ಗೌಡ,ರಂಜನ್, ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

 ಕುಶಾಲನಗರ ಸಮೀಪದ ಹಾರಂಗಿಯಲ್ಲಿ ನೀರಾವರಿ ಇಲಾಖೆ, ಕೂಡುಮಂಗಳೂರು ಗ್ರಾಮ ಪಂಚಾಯತಿ ಹಾಗೂ ಭಾರತ ಸರ್ಕಾರ ,ಕೇಂದ್ರ ಗೃಹ ಸಚಿವಾಲಯ,ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಐ) ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಾರಂಗಿ ಕ್ರೀಡಾಂಗಣಕ್ಕೆ ಧೀರ ಹೃದಯಿ ರಾಘವೇಂದ್ರ ಕೆ.ಕ್ರೀಡಾಂಗಣ ಎಂದು ನಾಮಕರಣ ಮಾಡಿದ್ದು, ನಾಮಫಲಕವನ್ನು ಶಾಸಕ ಡಾ‌‌.ಮಂತರ್ ಗೌಡ ಹಾಗೂ ಸಿಐಎಸ್ಎಫ್ ಡಿಐಜಿ ನೆಲ್ಲೂರು ಪೆರುಮಾಳ್ ಉದ್ಘಾಟಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0