ಧರ್ಮಸ್ಥಳದಲ್ಲಿ ಮಾನವ ಅಸ್ಥಿ ಪಂಜರಗಳ ನಡುವೆ ಸಿಕ್ಕ ಐಡಿ ಕಾರ್ಡ್‌ ನಿಂದ ಕೊಡಗಿನಿಂದ ನಾಪತ್ತೆ ಆಗಿದ್ದ ವ್ಯಕ್ತಿಯ ಗುರುತು ಪತ್ತೆ

Sep 19, 2025 - 08:11
Sep 19, 2025 - 08:12
 0  1.4k
ಧರ್ಮಸ್ಥಳದಲ್ಲಿ  ಮಾನವ ಅಸ್ಥಿ ಪಂಜರಗಳ ನಡುವೆ  ಸಿಕ್ಕ ಐಡಿ ಕಾರ್ಡ್‌ ನಿಂದ  ಕೊಡಗಿನಿಂದ ನಾಪತ್ತೆ ಆಗಿದ್ದ ವ್ಯಕ್ತಿಯ ಗುರುತು ಪತ್ತೆ

ಕೋವರ್‌ ಕೊಲ್ಲಿ ಇಂದ್ರೇಶ್‌

ಧರ್ಮಸ್ಥಳ ; ಧರ್ಮಸ್ಥಳದಲ್ಲಿ ಶವಗಳ ಹೂಳುವಿಕೆಗೆ ಸಂಬಂಧಿಸಿದಂತೆ ಸರ್ಕಾರ ತನಿಖೆ ಮಾಡಲು ರಚಿಸಿರುವ ನೆಲ ಅಗೆದು ಮೂರು ಅಸ್ಥಿ ಪಂಜರ ಪತ್ತೆ ಹಚ್ಚಿ ನಂತರ ಸಾಕ್ಷೀದಾರ ಆಗಿದ್ದ ಚಿನ್ನಯ್ಯ ಎಂಬಾತನ ವಿರುದ್ದವೇ ಸುಳ್ಳು ಸಾಕ್ಷಿ ನೀಡಿದ ಆರೋಪದಲ್ಲಿ ಜೈಲಿಗೆ ಕಳಿಸಿದೆ.

ನಂತರ ಮತ್ತೋರ್ವ ಸಾಕ್ಷಿದಾರ ವಿಠಲ ಗೌಡ ಅವರ ಮಾಹಿತಿಯಂತೆ ಬುಧವಾರದಿಂದ ನೇತ್ರಾವತಿ ನದಿ ಪಕ್ಕದ ಬಂಗ್ಲೆ ಗುಡ್ಡೆಯ ಸುಮಾರು 12 ಎಕರೆ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ಕೈಗೆತ್ತಿಕೊಂಡಿದೆ. ಬುಧವಾರದ ಶೋಧದಲ್ಲಿ ಸುಮಾರು ಐದು ತಲೆ ಬುರುಡೆಗಳು ಮತ್ತು ಮೂಳೆಗಳೂ ಪತ್ತೆ ಆಗಿದ್ದವು. ಈ ಅವಶೇಷಗಳೆಲ್ಲ ನೆಲ ಅಗೆಯದೇ ಮೇಲೆಯೇ ಪತ್ತೆ ಆಗಿತ್ತು. ಇದರ ಜತೆಯಲ್ಲಿಯೇ ಒಂದು ಐಡಿ ಕಾರ್ಡ್‌ ಕೂಡ ಪತ್ತೆ ಆಗಿತ್ತು. ಇದೀಗ ಪತ್ತೆ ಆಗಿರುವ ಐಡಿ ಕಾರ್ಡ್‌ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ ಶೆಟ್ಟಿಗೇರಿ ಗ್ರಾಮ ವ್ಯಾಪ್ತಿಯ ನಿವಾಸಿ ಯು ಬಿ ಅಯ್ಯಪ್ಪ(65) ಎನ್ನುವವರದ್ದು ಎಂದು ತಿಳಿದು ಬಂದಿದೆ.

ಇವರು 2017ರಲ್ಲಿ ಕಾಣೆಯಾಗಿದ್ದರು. ಇವರು ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಹೋಗುವುದಾಗಿ ಹೇಳಿ ಹೋಗಿದ್ದ ಅಯ್ಯಪ್ಪ, ಅಂದಿನಿಂದ ಕಾಣೆಯಾಗಿದ್ದರು. ಹೀಗಾಗಿ ಸಿಕ್ಕ ಅಸ್ಥಿಪಂಜರ ಸಹ ಅಯ್ಯಪ್ಪನವರದ್ದೇ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅಯ್ಯಪ್ಪ ಕಾಣೆಯಾಗಿರುವ ಬಗ್ಗೆ ಅವರ ಪುತ್ರ ಉಳುವಂಗಡ ಜೀವನ್ ಎನ್ನುವರು ನೀಡಿದ ದೂರಿನ ಮೇರೆಗೆ 25-6-2017ರಂದು ಶ್ರೀಮಂಗಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ದಿನಾಂಕ 17 ರಂದು ಆಸ್ಪತ್ರೆಗೆಂದು ಬೆಳಗ್ಗೆ 6 ಗಂಟೆಗೆ ಮನೆ ಬಿಟ್ಟಿದ್ದ ಅಯ್ಯಪ್ಪ, ಬೆಳಗ್ಗೆ 11.30ರ ನಂತರ ಅವರ ಮೊಬೈಲ್ ಸ್ವಿಚ್ ಅಫ್ ಮಾಡಿಕೊಂಡಿದ್ದರು.

ಇದಾದ ಬಳಿಕ ಕುಟುಂಬ ನೆಂಟರಿಷ್ಟರ ಮನೆಯಲ್ಲಿ ಒಂದು ವಾರ ಹುಡುಕಾಡಿತ್ತು. ಕೊನೆಗೆ ಅಯ್ಯಪ್ಪ ಸುಳಿವು ಸಿಗದಿದ್ದಾಗ ಜೀವನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದ್ರೆ, ದೂರು ನೀಡಿದರೂ ಸಹ ಅಯ್ಯಪ್ಪ ಸುಳಿವು ಸಹ ಸಿಕ್ಕಿರಲಿಲ್ಲ. ಇದೀಗ ಎಂಟು ವರ್ಷಗಳ ಬಳಿಕ ಬಂಗ್ಲೆ ಗುಡ್ಡೆಯಲ್ಲಿ ಅಯ್ಯಪ್ಪ ಅವರ ಐಡಿ ಕಾರ್ಡ್ ಪತ್ತೆಯಾಗಿದೆ. ಈ ಕುರಿತು ಮಾಹಿತಿ ನೀಡಿದ ಶ್ರೀಮಂಗಲ ಠಾಣೆ ಪೋಲೀಸ್‌ ಅಧಿಕಾರಿ ರವೀಂದ್ರ ಅವರು ಅಯ್ಯಪ್ಪ ನಾಪತ್ತೆ ಆಗಿರುವ ಕುರಿತು ಮಿಸ್ಸಿಂಗ್‌ ದೂರು ದಾಖಲಾಗಿದ್ದು ಎಸ್‌ಐಟಿ ಅಧಿಕಾರಿಗಳು ತಮ್ಮಿಂದ ಇನ್ನೂ ಮಾಹಿತಿ ಕೇಳಿಲ್ಲ , ಕೇಳಿದರೆ ಮಾಹಿತಿ ನೀಡುವುದಾಗಿ ತಿಳಿಸಿದರು.

 ಇನ್ನೂ ಬಂಗ್ಲೆಗುಡ್ಡದಲ್ಲಿ ಪತ್ತೆಯಾದ ಅಸ್ಥಿಪಂಜರಗಳು ಆತ್ಮಹತ್ಯೆಯ ಸ್ಥಿತಿಯಲ್ಲಿತ್ತು ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ತಲೆ ಬುರುಡೆ ಹಾಗು ಅವಶೇಷಗಳು ಹಗ್ಗ, ಬಟ್ಟೆಯಿಂದ ಮರಕ್ಕೆ ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಎಸ್ಐಟಿ ಅಧಿಕಾರಿಯೊಬ್ಬರು ತಿಳಿಸಿದರು. ಶೋಧದ ವೇಳೆ ಎಸ್ಐಟಿ ಅಧಿಕಾರಿಗಳಿಗೆ ಮರದಲ್ಲಿ ಎರಡು ಹಗ್ಗ ಮತ್ತು ಒಂದು ಸೀರೆ ಸಿಕ್ಕಿದೆ. ಹಗ್ಗ ಪತ್ತೆಯಾದ ಮರದ ಕೆಳ ಭಾಗದಲ್ಲೇ ಅಸ್ಥಿಪಂಜರ ಸಿಕ್ಕಿದೆ.

ಐಡಿ ಕಾರ್ಡ್‌ ಕೂಡ ಜತೆಯಲ್ಲೇ ಸಿಕ್ಕಿದೆ. ನೇಣು ಹಾಕಿಕೊಂಡ ಕುಣಿಕೆ ರೀತಿ ಪತ್ತೆಯಾದ ಹಗ್ಗ ಮತ್ತು ಸೀರೆಯನ್ನೂ ವಶಕ್ಕೆ ಪಡೆಯಲಾಗಿದ್ದು, ಎಲ್ಲವನ್ನೂ ಸೀಲ್ ಮಾಡಲಾಗಿದೆ. ಬಂಗ್ಲೆಗುಡ್ಡದಲ್ಲಿ ಶೋಧ ನಡೆಸಿದಾಗ ಇಂದು ಕೂಡ ಎರಡು ಶವದ ಅಸ್ಥಿ ಪಂಜರಗಳು ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಆದರೆ ಎಸ್‌ಐಟಿ ಈ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಈಗ ಪತ್ತೆ ಆಗಿರುವ ಬುರುಡೆ ಮತ್ತು ಮೂಳೆಗಳು ಮತ್ತು ಮಣ್ಣಿನ ಸ್ಯಾಂಪಲ್ ಗಳನ್ನು ಅಧಿಕಾರಿಗಳು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳುಹಿಸಿದ್ದಾರೆ.

ಈಗ ಸಿಕ್ಕಿರುವ ಬುರುಡೆ ಮತ್ತು ಮೂಳೆಯನ್ನ ಪರಿಶೀಲಿಸಿದಾಗ ಇದು ಪುರುಷರದ್ದು ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದು ಇವೆಲ್ಲವೂ 6-7 ವರ್ಷ ಮಾತ್ರ ಹಳೆಯದ್ದೆಂದು ಶಂಕಿಸಲಾಗಿದೆ. ಎಫ್‌ಎಸ್‌ಎಲ್‌ ವರದಿಯ ನಂತರವಷ್ಟೆ ನಿಖರವಾದ ಮಾಹಿತಿ ದೊರೆಯಲಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0