ಸೋಮವಾರಪೇಟೆ ಇಂದಿರಾ ಕ್ಯಾಂಟೀನ್‌ನಲ್ಲಿ ಅಕ್ರಮ: ಕರವೇ ಘೇರಾವ್, ನಿರ್ವಾಹಕನಿಂದ ತಪ್ಪೊಪ್ಪಿಗೆ"

Jul 29, 2026 - 18:57
 0  128
ಸೋಮವಾರಪೇಟೆ ಇಂದಿರಾ ಕ್ಯಾಂಟೀನ್‌ನಲ್ಲಿ ಅಕ್ರಮ: ಕರವೇ ಘೇರಾವ್, ನಿರ್ವಾಹಕನಿಂದ ತಪ್ಪೊಪ್ಪಿಗೆ"

ಸೋಮವಾರಪೇಟೆ: ಬಡವರಿಗೆ ವರವಾಗಬೇಕಿದ್ದ ಇಂದಿರಾ ಕ್ಯಾಂಟೀನ್ ನಲ್ಲಿ ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟವನ್ನು ಸರ್ಕಾರಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಪಾರ್ಸಲ್ ಮಾಡಿ ಕಳಿಸುತ್ತಿದ್ದ ಅಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ - ಕರವೇ ಕಾರ್ಯಕರ್ತರು ಬಯಲು ಮಾಡಿದ್ದಾರೆ.

ಕರವೇ ತಾಲೂಕು ಅಧ್ಯಕ್ಷ ಸಂತೋಷ್ ನೇತೃತ್ವದ ತಂಡವು ಇಂದು ಕ್ಯಾಂಟೀನ್‌ಗೆ ದಿಢೀರ್ ದಾಳಿ ನಡೆಸಿತು. ಪ್ರತಿದಿನ ಸರ್ಕಾರಿ ಕಚೇರಿಗಳಿಗೆ 5 ರಿಂದ 10 ಪ್ಲಾಸ್ಟಿಕ್ ಕೈಚೀಲಗಳಲ್ಲಿ ಪಾರ್ಸಲ್ ಕಳಿಸುತ್ತಿದ್ದ ವೇಳೆ ಕಾರ್ಯಕರ್ತರು ಸಾಕ್ಷಿ ಸಮೇತ ನಿರ್ವಾಹಕರನ್ನು ಹಿಡಿದರು.

ಈ ಹಿಂದೆ ಕೂಡಾ ಎಚ್ಚರಿಕೆ ನೀಡಿದ್ದರೂ ಹಳೇ ಚಾಳಿ ಮುಂದುವರಿಸಿದ್ದ ಹಿನ್ನೆಲೆಯಲ್ಲಿ ಘೇರಾವ್ ಹಾಕಲಾಯಿತು. ಬೀದಿ ವ್ಯಾಪಾರಿಗಳು, ಸ್ವಚ್ಛತಾ ಕಾರ್ಮಿಕರು, ಟ್ಯಾಕ್ಸಿ ಡ್ರೈವರ್‌ಗಳು, ಬ್ಯಾಂಕ್ ಕೆಲಸಕ್ಕೆ ಬಂದ ರೈತರು ಈ ಸೌಲಭ್ಯದಿಂದ ವಂಚಿತರಾಗುತ್ತಿದ್ದರು ಎಂದು ಕರವೇ ಆರೋಪಿಸಿತು. ಕೆಲ ಕ್ಷಣಗಳ ಬಳಿಕ ತಪ್ಪು ಒಪ್ಪಿಕೊಂಡ ನಿರ್ವಾಹಕರಿಗೆ ಕರವೇ ಮುಖಂಡರು ಬುದ್ಧಿ ಹೇಳಿದರು.

ಇನ್ನು ಮುಂದೆ ಪಾರ್ಸೆಲ್ ಕಳಿಸಬಾರದು. ಖುದ್ದಾಗಿ ಬಂದು ಊಟ ಮಾಡುವವರಿಗೆ ಮಾತ್ರ ಊಟ ಬಡಿಸಬೇಕು. ಊಟ ತಿಂಡಿಯನ್ನು ಶುಚಿಯಾಗಿ ಹಾಗೂ ರುಚಿಯಾಗಿ ಮಾಡಬೇಕು. ಸರ್ಕಾರದ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಷರತ್ತು ವಿಧಿಸಿ ಕ್ಯಾಂಟೀನ್ ಅನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಯಿತು. 

ಈ ವೇಳೆ ಕರವೇ ಜಿಲ್ಲಾ ಕಾರ್ಯದರ್ಶಿ ನಾಗರಾಜ್, ಮಂಜುನಾಥ್, ಬೋಪಯ್ಯ, ಜಗದೇಶ್, ದೀಪಕ್, ತಮ್ಮಯ್ಯ, ಹರ್ಷಿತ್, ಸಂದೀಪ್, ತಿಮ್ಮಯ್ಯ ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0