ಕೊಡಗಿನಲ್ಲಿ ಮಾನವ–ಆನೆ ಸಂಘರ್ಷ ನಿವಾರಣೆಗೆ ಕೇಂದ್ರ ಸರ್ಕಾರದಿಂದ ಮಹತ್ವದ ಭರವಸೆ: ಸಂಸದ ಯದುವೀರ್ ಒಡೆಯರ್ ಮನವಿಗೆ ಸ್ಪಂದನೆ

Jul 3, 2026 - 13:28
 0  230
ಕೊಡಗಿನಲ್ಲಿ ಮಾನವ–ಆನೆ ಸಂಘರ್ಷ ನಿವಾರಣೆಗೆ ಕೇಂದ್ರ ಸರ್ಕಾರದಿಂದ ಮಹತ್ವದ ಭರವಸೆ: ಸಂಸದ  ಯದುವೀರ್ ಒಡೆಯರ್ ಮನವಿಗೆ ಸ್ಪಂದನೆ

ಮಡಿಕೇರಿ, ಜುಲೈ 2026:ಕೊಡಗು ಜಿಲ್ಲೆಯಲ್ಲಿನ ಮಾನವ–ಆನೆ ಸಂಘರ್ಷ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಮನವಿಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ.

2026ರ ಜೂನ್ 11ರಂದು ಸಂಸದ ಶ್ರೀ ಯದುವೀರ್ ಒಡೆಯರ್ ರವರು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಶ್ರೀ ಭೂಪೇಂದ್ರ ಯಾದವ್ ರವರನ್ನು ಬೇಟಿ ಯಾಗಿ ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯಿಸಿದ ಸಚಿವರು ಕೊಡಗಿನ ಅರಣ್ಯ ಅಂಚಿನ ಪ್ರದೇಶಗಳಲ್ಲಿ ರೈತರು, ತೋಟಗಾರರು ಮತ್ತು ಸ್ಥಳೀಯ ನಿವಾಸಿಗಳನ್ನು ಕಾಡುತ್ತಿರುವ ಮಾನವ–ಆನೆ ಸಂಘರ್ಷ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಕೇಂದ್ರ ಸಚಿವಾಲಯವು ವನ್ಯಜೀವಿ ವಾಸಸ್ಥಳಗಳ ಅಭಿವೃದ್ಧಿ (Development of Wildlife Habitats) ಹಾಗೂ ಪ್ರಾಜೆಕ್ಟ್ ಟೈಗರ್ & ಎಲೆಫೆಂಟ್ (Project Tiger & Elephant) ಸೇರಿದಂತೆ ಕೇಂದ್ರ ಪ್ರಾಯೋಜಿತ ಯೋಜನೆಗಳಡಿ ರಾಜ್ಯ ಸರ್ಕಾರಗಳಿಗೆ ಆರ್ಥಿಕ ನೆರವು ನೀಡುತ್ತಿರುವುದಾಗಿ ತಿಳಿಸಿದೆ.

ಇದಲ್ಲದೆ, ದಕ್ಷಿಣ ಭಾರತದ ಮಾನವ–ಆನೆ ಸಂಘರ್ಷವನ್ನು ಎದುರಿಸಲು ಪ್ರಾದೇಶಿಕ ಕಾರ್ಯಯೋಜನೆ (Regional Action Plan - RAP) ಸಿದ್ಧಪಡಿಸಲಾಗುತ್ತಿದ್ದು, ಕೊಡಗು ಪ್ರಮುಖ ಸಂಘರ್ಷ ಪ್ರದೇಶಗಳಲ್ಲಿ ಒಂದಾಗಿ ಗುರುತಿಸಲಾಗಿದೆ. ಈ ಕಾರ್ಯಯೋಜನೆ ಕೆಳಗಿನ ವಿಷಯಗಳ ಮೇಲೆ ಕೇಂದ್ರೀಕರಿಸಲಿದೆ:

* ಆನೆಗಳ ವಾಸಸ್ಥಳ ಸುಧಾರಣೆ

* ಆನೆ ಕಾರಿಡಾರ್‌ಗಳ ಸಂರಕ್ಷಣೆ ಮತ್ತು ನಿರ್ವಹಣೆ

* ಮುನ್ನೆಚ್ಚರಿಕಾ ಎಚ್ಚರಿಕೆ ವ್ಯವಸ್ಥೆ

* ತ್ವರಿತ ಪ್ರತಿಕ್ರಿಯೆ ವ್ಯವಸ್ಥೆ

* ಸಮುದಾಯದ ಸಕ್ರಿಯ ಭಾಗವಹಿಸುವಿಕೆ

ಕರ್ನಾಟಕ ರಾಜ್ಯಕ್ಕಾಗಿ ರೂಪಿಸಲಾದ ಈ ಐದು ವರ್ಷದ ಕಾರ್ಯಯೋಜನೆಗೆ ಸುಮಾರು ₹350 ಕೋಟಿ ವೆಚ್ಚ ನಿರೀಕ್ಷಿಸಲಾಗಿದ್ದು, ಆನೆಗಳ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ, ಮಾನವ ವಾಸಸ್ಥಳ ಮತ್ತು ಕೃಷಿ ಪ್ರದೇಶಗಳಿಗೆ ಆನೆಗಳ ನುಗ್ಗುವಿಕೆ ಕಡಿಮೆ ಮಾಡುವಂತೆ ಹಾಗೂ ಜೀವಹಾನಿ ಮತ್ತು ಆಸ್ತಿ ನಷ್ಟ ತಡೆಯುವಂತೆ ಯೋಜಿಸಲಾಗಿದೆ.

ಇದಲ್ಲದೆ, ಭಾರತೀಯ ವನ್ಯಜೀವಿ ಸಂಸ್ಥೆ (Wildlife Institute of India) ದಕ್ಷಿಣ ಭಾರತದ ಮಾನವ–ಆನೆ ಸಹಬಾಳ್ವೆಗೆ ಸಂಬಂಧಿಸಿದಂತೆ ಉಪಗ್ರಹ ಟೆಲಿಮೆಟ್ರಿ ಮತ್ತು ಸಮೂಹ ಸಂವಹನ ಆಧಾರಿತ ಮುನ್ನೆಚ್ಚರಿಕಾ ವ್ಯವಸ್ಥೆ ಕುರಿತ ಅಧ್ಯಯನ ಕೈಗೊಳ್ಳಲು ಮುಂದಾಗಿದೆ. ಇದರ ಶಿಫಾರಸುಗಳ ಆಧಾರದ ಮೇಲೆ ಕೊಡಗು ಪ್ರದೇಶದಲ್ಲಿ ವಿಶೇಷ ಮುನ್ನೆಚ್ಚರಿಕಾ ವ್ಯವಸ್ಥೆ ಜಾರಿಗೊಳ್ಳುವ ಸಾಧ್ಯತೆ ಇದೆ.

ಈ ಕುರಿತು ಸಂಸದ ಶ್ರೀ ಯದುವೀರ್ ಒಡೆಯರ್ ಅವರು ಕೇಂದ್ರ ಸರ್ಕಾರದ ಸ್ಪಂದನೆಯನ್ನು ಸ್ವಾಗತಿಸಿ, ಮಾನವ ಜೀವ ಮತ್ತು ವನ್ಯಜೀವಿಗಳ ರಕ್ಷಣೆ ಎರಡನ್ನೂ ಸಮತೋಲನದಲ್ಲಿ ಉಳಿಸುವ ದೀರ್ಘಕಾಲಿಕ ಪರಿಹಾರಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸಮುದಾಯಗಳ ಸಮನ್ವಯ ಅಗತ್ಯವೆಂದು ತಿಳಿಸಿದ್ದಾರೆ.

ಕೊಡಗಿನ ರೈತರು ಮತ್ತು ನಿವಾಸಿಗಳ ಸಮಸ್ಯೆಗಳಿಗೆ ಆದ್ಯತೆ ನೀಡಿ ಪರಿಹಾರ ಕಲ್ಪಿಸಲು ತಾವು ನಿರಂತರವಾಗಿ ಶ್ರಮಿಸುತ್ತಿರುವುದಾಗಿ ಅವರು ಪುನರುಚ್ಚರಿಸಿದರು.

What's Your Reaction?

Like Like 1
Dislike Dislike 0
Love Love 2
Funny Funny 0
Angry Angry 1
Sad Sad 0
Wow Wow 0