ಪದಾಧಿಕಾರಿಗಳ ಗಮನಕ್ಕೆ ತರದೆ ಕೆಲವೇ ಮಂದಿ ಸೇರಿ, ಜೆಡಿಎಸ್ ಹಂಗಾಮಿ ಜಿಲ್ಲಾಧ್ಯಕ್ಷರ ಆಯ್ಕೆ ಮಾಡಿರುವುದು ನಿಯಮಬಾಹಿರ:ಜೆಡಿಎಸ್ ಜಿಲ್ಲಾ ಕಾಟ್ನಮನೆ ವಿಠಲ್‌ಗೌಡ ಆರೋಪ

Jan 8, 2026 - 16:40
Jan 8, 2026 - 17:02
 0  284
ಪದಾಧಿಕಾರಿಗಳ ಗಮನಕ್ಕೆ ತರದೆ ಕೆಲವೇ ಮಂದಿ ಸೇರಿ, ಜೆಡಿಎಸ್ ಹಂಗಾಮಿ ಜಿಲ್ಲಾಧ್ಯಕ್ಷರ ಆಯ್ಕೆ ಮಾಡಿರುವುದು ನಿಯಮಬಾಹಿರ:ಜೆಡಿಎಸ್  ಜಿಲ್ಲಾ ಕಾಟ್ನಮನೆ ವಿಠಲ್‌ಗೌಡ ಆರೋಪ

ಸೋಮವಾರಪೇಟೆ: ಜಿಲ್ಲೆಯ ಪಕ್ಷದ ಬಹುತೇಕ ಪದಾಧಿಕಾರಿಗಳ ಗಮನಕ್ಕೆ ತರದೆ ಕೆಲವೇ ಮಂದಿ ಸೇರಿ, ಜೆಡಿಎಸ್ ಹಂಗಾಮಿ ಜಿಲ್ಲಾಧ್ಯಕ್ಷರ ಅಯ್ಕೆ ಮಾಡಿರುವುದು ನಿಯಮಬಾಹಿರವಾಗಿದೆ ಎಂದು ಪಕ್ಷದ ಜಿಲ್ಲಾ ವಕ್ತಾರ ಕಾಟ್ನಮನೆ ವಿಠಲ್‌ಗೌಡ ಅರೋಪಿಸಿದ್ದಾರೆ.

ಜ.5ರಂದು ಕುಶಾಲನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಕೆಲವೇ ಮಂದಿಯ ಸಮ್ಮುಖದಲ್ಲಿ ಕಾರ್ಮಾಡು ಸುಬ್ಬಣ್ಣ ಅವರನ್ನು ಜೆಡಿಎಸ್ ಹಂಗಾಮಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಆಯ್ಕೆಯನ್ನು ಪಕ್ಷದ ಮುಂಚೂಣಿ ಕಾರ್ಯಕರ್ತರು ಒಪ್ಪುವುದಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಹಿಂದೆ ಜಿಲ್ಲಾಧ್ಯಕ್ಷರು ರಾಜೀನಾಮೆ ನೀಡಿರುವುದರಿಂದ, ಜಿಲ್ಲಾಧ್ಯಕ್ಷ ಸ್ಥಾನ ಖಾಲಿಯಿತ್ತು. ಆದರೆ ಉಳಿದ ಪದಾಧಿಕಾರಿಗಳು ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಅನೇಕ ಪದಾಧಿಕಾರಿಗಳಿಗೆ ಮಾಹಿತಿಯನ್ನು ನೀಡದೆ, ಸಭೆ ಕರೆದಿದ್ದಾರೆ. ಸೋಮವಾರಪೇಟೆಯ ಸ್ವಯಂಘೋಷಿತ ನಾಯಕನೋರ್ವನ ಚಿತಾವಣೆಯಿಂದ ಇಂತಹ ಆಭಾಸಗಳು ನಡೆಯುತ್ತಿವೆ ಎಂದು ದೂರಿದರು.

ಬೂತ್ ಮಟ್ಟದ ಕಾರ್ಯಕರ್ತರು ಹಾಗು ಪದಾಧಿಕಾರಿಗಳ ಸಮ್ಮುಖದಲ್ಲಿ ಸೋಮವಾರಪೇಟೆಯ ಪಟ್ಟಣದಲ್ಲಿ ಮುಂದಿನ ದಿನಗಳಲ್ಲಿ ಸಭೆ ಕರೆದು, ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ, ಜೆಡಿಎಸ್ ಹೈಕಮಾಂಡ್‌ಗೆ ಕಳುಹಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ಹೇಳಿದರು.

ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಕೆ.ಟಿ.ಪರಮೇಶ್ ಮಾತನಾಡಿ, ಪಕ್ಷದ ಸಂಘಟನೆಯಲ್ಲಿ ಮುಂದಾಗದ ಕೆಲ ನಾಯಕರುಗಳು ಚುನಾವಣೆ ಸಂದರ್ಭ ಮಾತ್ರ ಕಾರ್ಯಚರಣೆಗೆ ಇಳಿಯುತ್ತಾರೆ. ನಂತರ ಪಕ್ಷವನ್ನು ಮರೆಯುತ್ತಾರೆ. ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಪ್ರಾರಂಭವಾಗುವ ಲಕ್ಷಣಗಳು ಗೋಚರಿಸುತ್ತಿರುವುದರಿಂದ ಸಭೆ ನಡೆಸಿ, ನಿಯಮ ಬಾಹಿರ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವುದು ಪಕ್ಷದ ಸಂಘಟನೆಗೆ ಹಾನಿಯಾಗುತ್ತಿದೆ. ಹಂಗಾಮಿ ಅಧ್ಯಕ್ಷರ ಆಯ್ಕೆಯನ್ನು ಒಪ್ಪುವುದಿಲ್ಲ ಎಂದು ಹೇಳಿದರು.

ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂದಣ್ಣ, ಸಂಘಟನಾ ಕಾರ್ಯದರ್ಶಿ ಆನಂದ್, ಹಿರಿಯ ಮುಖಂಡ ಹೊಸಬೀಡು ಹೂವಯ್ಯ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0