ಮಾಲ್ದಾರೆ: ರಸ್ತೆ ಕಾಮಗಾರಿ ಬಳಿಕ ಸಿಮೆಂಟ್ ಚೀಲಗಳ ತ್ಯಾಜ್ಯ; ಪಂಚಾಯಿತಿ ವಾಹನ ದುರುಪಯೋಗ ಆರೋಪ

Apr 3, 2026 - 09:55
 0  168
ಮಾಲ್ದಾರೆ: ರಸ್ತೆ ಕಾಮಗಾರಿ ಬಳಿಕ ಸಿಮೆಂಟ್ ಚೀಲಗಳ ತ್ಯಾಜ್ಯ;  ಪಂಚಾಯಿತಿ ವಾಹನ ದುರುಪಯೋಗ ಆರೋಪ

ಸಿದ್ದಾಪುರ: ಮಾಲ್ದಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲ್ದಾರೆ–ಗುಡ್ಲೂರು ರಸ್ತೆ ಹಾಗೂ ಮೈಲಾಪುರ–ಗುಡ್ಲೂರು ರಸ್ತೆ ಕಾಮಗಾರಿಗಳು ಪೂರ್ಣಗೊಂಡಿದ್ದರೂ, ಕಾಮಗಾರಿಯಲ್ಲಿ ಬಳಸಿದ ಸಿಮೆಂಟ್ ಕಾಲಿ ಚೀಲಗಳನ್ನು ಎಲ್ಲೆಂದರಲ್ಲಿ ಬಿಸಾಡಿರುವುದು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಸುಮಾರು 2500ಕ್ಕೂ ಅಧಿಕ ಸಿಮೆಂಟ್ ಚೀಲಗಳನ್ನು ರಸ್ತೆ ಬದಿಗಳು, ಹೊಲಗಳ ಅಂಚುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದರಿಂದ ಪರಿಸರ ಹಾನಿಯಾಗುವುದರ ಜೊತೆಗೆ ಗ್ರಾಮ ಸೌಂದರ್ಯಕ್ಕೂ ಧಕ್ಕೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಪುಕಾರು ಸಲ್ಲಿಸಿದ್ದು, ತಕ್ಷಣ ಕ್ರಮ ಕೈಗೊಂಡು ಗುತ್ತಿಗೆದಾರರಿಂದ ಈ ತ್ಯಾಜ್ಯವನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

 ಜೊತೆಗೆ ಭವಿಷ್ಯದಲ್ಲಿ ಇಂತಹ ನಿರ್ಲಕ್ಷ್ಯ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದೀಗ ಈ ವಿಚಾರ ಮತ್ತೊಂದು ವಿವಾದಕ್ಕೂ ಕಾರಣವಾಗಿದೆ. ಪಂಚಾಯಿತಿಗೆ ಸೇರಿದ ಕಸ ವಿಲೇವಾರಿ ವಾಹನವನ್ನು ಸಾರ್ವಜನಿಕ ಸೇವೆಗೆ ಬಳಸದೆ, ಒಂದು ಕಾಂಟ್ರಾಕ್ಟರ್ ರಸ್ತೆ ಕಾಮಗಾರಿಯ ವೇಳೆ ರಸ್ತೆ ಬದಿಯಲ್ಲಿ ಹಾಕಿದ ಸಿಮೆಂಟ್ ಚೀಲಗಳನ್ನು ಸಾಗಿಸಲು ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

 ಸಿದ್ದಾಪುರ–ಪಿರಿಯಾಪಟ್ಟಣ ರಸ್ತೆಯ ಬದಿಯಲ್ಲಿ ಮಾಲ್ದಾರೆ ಸಮೀಪ ಆ ಚೀಲಗಳನ್ನು ಸುರಿಯಲಾಗಿದ್ದು, ಇದನ್ನು ಸ್ಥಳೀಯರು ಪ್ರಶ್ನಿಸಿ ವಿಡಿಯೋ ಚಿತ್ರೀಕರಿಸಿದ್ದಾರೆ. ಘಟನೆ ಬೆಳಕಿಗೆ ಬಂದ ನಂತರ ಪಂಚಾಯಿತಿ ಸಿಬ್ಬಂದಿ ಆ ಚೀಲಗಳನ್ನು ಅಲ್ಲಿಂದ ತೆರವುಗೊಳಿಸಿರುವುದಾಗಿ ತಿಳಿದುಬಂದಿದೆ.

ಪಂಚಾಯಿತಿ ವ್ಯಾಪ್ತಿಯಲ್ಲಿನ ಕಸ ತೆರವುಗೊಳಿಸಲು ಅನುದಾನ ಹಾಗೂ ಸಮಯದ ಕೊರತೆ ಇದೆ ಎಂದು ಹೇಳುತ್ತಿರುವ ಅಭಿವೃದ್ಧಿ ಅಧಿಕಾರಿಯವರು, ಕಾಂಟ್ರಾಕ್ಟರ್ ಸೂಚನೆ ಮೇರೆಗೆ ಕೆಲಸ ಮಾಡುತ್ತಿರುವುದು ದುಃಖಕರ ಎಂದು ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಂಞಣ್ಣ ಹಾಗೂ ಗ್ರಾಮಸ್ಥ ಪ್ರಮೋದ್ ಅಯ್ಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು, ಪರಿಸರ ಸಂರಕ್ಷಣೆಗಾಗಿ ಜವಾಬ್ದಾರಿಯುತ ಕ್ರಮಗಳನ್ನು ಜಾರಿಗೆ ತರಬೇಕು ಹಾಗೂ ಗ್ರಾಮದಲ್ಲಿ ಸಮರ್ಪಕ ಕಸ ವಿಲೇವಾರಿ ವ್ಯವಸ್ಥೆಯನ್ನು ಖಚಿತಪಡಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0