State News

ಮದ್ಯ ಕುಡಿಯಬೇಡಮ್ಮ ಎಂದಿದ್ದಕ್ಕೆ ಹೆತ್ತ ಮಗಳನ್ನೇ ಕತ್ತು ಹಿಸುಕಿ ಕೊಂದ ತಾಯಿ

admincoorgdaily

ಮದ್ಯ ಕುಡಿಯಬೇಡಮ್ಮ ಎಂದಿದ್ದಕ್ಕೆ ಹೆತ್ತ ಮಗಳನ್ನೇ ಕತ್ತು ಹಿಸುಕಿ ಕೊಂದ ತಾಯಿ

ಯಾದಗಿರಿ, ಫೆ10: ಮದ್ಯದ ದಾಸಿಯಾಗಿದ್ದ ಮಹಿಳೆಯೊಬ್ಬಳು ಎಣ್ಣೆ ನಶೆಯಲ್ಲಿ ಹೆತ್ತ ಮಗಳನ್ನೇ ಕೊಂದಿರುವ ಹೃದಯ ವಿದ್ರಾವಕ ಘಟನೆ ಯಾದಗಿರಿ ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿ ನಡೆದಿದೆ. ಪ್ರತಿಭಾ (11) ಮೃತ ಬಾಲಕಿಯಾಗಿದ್ದು, ಆರೋಪಿ ನಿರ್ಮಲಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ತಂದೆಯನ್ನ ಕಳೆದುಕೊಂಡಿದ್ದ ಬಾಲಕಿ ಪಾಲಿಗೆ ತಾಯಿಯೇ ವಿಲನ್ ಆಗಿದ್ದು, ಬಡತನ ಹಿನ್ನೆಲೆ ಆಡಿ ಬೆಳೆಯಬೇಕಾದ ವಯಸ್ಸಲ್ಲೇ ಶಾಲೆ ಬಿಟ್ಟು ದುಡಿಯೋಕೆ ಹೋಗ್ತಿದ್ದ ಪ್ರತಿಭಾ ಕ್ರೂರವಾಗಿ ಹತ್ಯೆಯಾಗಿದ್ದಾಳೆ.

ಮಗಳ ಕೊಂದು ತಾಯಿಯ ನಾಟಕ;

ಇನ್ನು ಕೊಲೆ ಮಾಡಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಿರ್ಮಲಾ ಕತೆ ಕಟ್ಟಿದ್ದಳು. ಜ್ಯೂಸ್ ಕುಡಿಯಲಯ 15 ರೂ. ಕೊಡುವಂತೆ ಮಗಳು ಕೇಳಿದ್ದಳು. ಆದ್ರೆ ನಾನು ಹಣ ಕೊಡದ ಕಾರಣ ನೇರವಾಗಿ ಪಕ್ಕದ ಮನೆಗೆ ಹೋಗಿ ಕುರ್ಚಿ ತೆಗೆದುಕೊಂಡು ಬಂದು ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರ ಮುಂದೆ ಹೇಳಿದ್ದಳು.

ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ್ರೆ ಕುತ್ತಿಗೆ ಭಾಗದಲ್ಲಿ ಗಾಯವಿರುತ್ತೆ. ಆದ್ರೆ ಪ್ರತಿಭಾ ದೇಹದಲ್ಲಿ ಯಾವುದೇ ಗಾಯಗಳಿರಲಿಲ್ಲ. ಹೀಗಾಗಿ ಪೊಲೀಸರು ನಿರ್ಮಲಾಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇದು ಆತ್ಮಹತ್ಯೆ ಅಲ್ಲ, ಬದಲಿಗೆ ಕತ್ತು ಹಿಸುಕಿ ಕೊಲೆ ಮಾಡಿರೋದು ಎಂಬ ವಿಷಯ ರಿವೀಲ್ ಆಗಿದೆ.

ಕಳೆದ ಕೆಲ ವರ್ಷಗಳಿಂದ ಈ ನಿರ್ಮಲಾ ಪತಿ ಜೊತೆಗೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಳು. ಆದ್ರೆ ಕಳೆದ ಮೂರು ವರ್ಷಗಳ ಹಿಂದೆ ಪತಿ ಸಾವನ್ನಪ್ಪಿದ ಬಳಿಕ ತನ್ನ ಮೂರು ಜನ ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗುವಿನ ಜೊತೆಗೆ ಯಾದಗಿರಿ ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ನಗರದಲ್ಲೇ ಮನೆ ಕೆಲಸ ಮಾಡಿಕೊಂಡಿದ್ದ ಈಕೆ, ಸಾಲದ್ದಕ್ಕೆ ತನ್ನ ಮಕ್ಕಳನ್ನೂ ಕೆಲಸಕ್ಕೆ ಕಳುಹಿಸುತ್ತಿದ್ದಳು.

ಗಂಡನನ್ನ ಕಳೆದುಕೊಂಡ ಬಳಿಕ ಮದ್ಯ ವ್ಯಸನಿಯಾಗಿದ್ದ ನಿರ್ಮಲಾ, ದುಡಿದ ಹಣವನ್ನೆಲ್ಲ ಚಟಕ್ಕೇ ಸುರಿಯುತ್ತಿದ್ದಳು. ಹೀಗಾಗಿ ಮಕ್ಕಳ ದುಡಿಮೆಯಲ್ಲಿಯೇ ಸಂಸಾರ ನಡೆಯುತ್ತಿತ್ತು. ಇದೇ ಕಾರಣಕ್ಕೆ ಕುಡಿಯಬೇಡಮ್ಮ, ಈಗಾಗಲೇ ಅಪ್ಪನನ್ನು ಕಳೆದುಕೊಂಡಿದ್ದೇವೆ. ನಿನಗೂ ಏನಾದರೂ ಆದರೆ ಏನು ಮಾಡೋದು ಎಂದು ಗೋಗರೆಯುತ್ತಿದ್ದರು .ನಿನ್ನೆ ಕೂಡ ಪ್ರತಿಭಾ ತಾಯಿಗೆ ಅದೇ ಮಾತು ಹೇಳಿದ್ದಾಳೆ. ಆದ್ರೆ ಕುಡಿದ ನಶೆಯಲ್ಲಿದ್ದ ನಿರ್ಮಲಾ ಸಿಟ್ಟಿನಲ್ಲಿ ಕತ್ತು ಹಿಸುಕಿ ಬುದ್ಧಿ ಹೇಳಿದ ಮಗಳನ್ನೇ ಕೊಲೆ ಮಾಡಿದ್ದಾಳೆ.