ಕಾಡಾನೆ ಕಾರ್ಯಾಚರಣೆ ಕಣ್ಣೊರೆಸುವ ತಂತ್ರವಾಗಬಾರದು : ಶಾಶ್ವತ ಪರಿಹಾರ ಬೇಕು:ಕಂಠಿ ಕಾರ್ಯಪ್ಪ

Aug 18, 2026 - 18:56
 0  57
ಕಾಡಾನೆ ಕಾರ್ಯಾಚರಣೆ ಕಣ್ಣೊರೆಸುವ ತಂತ್ರವಾಗಬಾರದು : ಶಾಶ್ವತ ಪರಿಹಾರ ಬೇಕು:ಕಂಠಿ ಕಾರ್ಯಪ್ಪ

ಮಡಿಕೇರಿ ಆ.18 : ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಕಾಡಾನೆಗಳ ದಾಳಿ ಮಿತಿ ಮೀರಿದ್ದು, ಅಮಾಯಕ ಜೀವಗಳು ಬಲಿಯಾಗುತ್ತಿವೆ. ಅರಣ್ಯ ಇಲಾಖೆಯಿಂದ ಕಾಡಾನೆಗಳನ್ನು ಸೆರೆ ಹಿಡಿಯುವ ಕಣ್ಣೊರೆಸುವ ತಂತ್ರಗಾರಿಕೆ ನಡೆಯುತ್ತಿದೆಯೇ ಹೊರತು ಶಾಶ್ವತ ಪರಿಹಾರದ ಯಾವುದೇ ಆಸಕ್ತಿ ಕಂಡು ಬರುತ್ತಿಲ್ಲವೆಂದು ಸೋಮವಾರಪೇಟೆ ಬಿಜೆಪಿ ಮಂಡಲದ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳ ದಾಳಿಯಾಗುತ್ತಿದ್ದು, ಇಡೀ ಕೊಡಗು ಜಿಲ್ಲೆಯೇ ಆತಂಕದಲ್ಲಿದೆ. ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರೂ ರಾಜ್ಯ ಸರಕಾರ ಮಾತ್ರ ನಿದ್ರಾವಸ್ಥೆಯಲ್ಲಿದೆ ಎಂದು ಟೀಕಿಸಿದ್ದಾರೆ.

ಕಾಡಾನೆಗಳು ಎಲ್ಲಿ, ಯಾವಾಗ ಬೇಕಾದರೂ ದಾಳಿ ಮಾಡಬಹುದಾಗಿದೆ. ಜನನಿಬಿಡ ಪ್ರದೇಶದಲ್ಲಿ, ಹೆದ್ದಾರಿಗಳಲ್ಲಿ ರಾತ್ರಿ ಹಗಲೆನ್ನದೆ ಆನೆಗಳು ಸಂಚರಿಸುತ್ತಿದ್ದು, ಯಾವಾಗ ಬೇಕಾದರೂ ದಾಳಿ ಮಾಡಬಹುದಾಗಿದೆ. ಯಾರೂ ಸುರಕ್ಷಿತವಾಗಿಲ್ಲ ಎನ್ನುವ ಭಯ ಆವರಿಸಿದೆ. ಹಿಂಡು ಹಿಂಡಾಗಿ ತೋಟಗಳಲ್ಲಿ ಆಶ್ರಯ ಪಡೆದಿರುವ ಕಾಡಾನೆಗಳ ದಾಳಿಯಿಂದ ಇತ್ತೀಚೆಗೆ ಅನೇಕ ಜೀವಗಳು ಬಲಿಯಾಗಿವೆ. ಅಮಾಯಕರು ಮೃತಪಟ್ಟಾಗ ಪ್ರತಿಭಟನೆಗೆ ಮಣಿಯುವ ಅರಣ್ಯ ಇಲಾಖೆ ಪುಂಡಾನೆಯನ್ನು ಸೆರೆ ಹಿಡಿಯುವ ನಾಟಕವಾಡುತ್ತಿದೆಯೇ ಹೊರತು ಶಾಶ್ವತ ಪರಿಹಾರದ ವೈಜ್ಞಾನಿಕ ರೂಪು ರೇಷೆಗಳನ್ನು ಸಿದ್ಧಪಡಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. 

ಒಂದೆರಡು ಆನೆಗಳನ್ನು ಸೆರೆ ಹಿಡಿದಾಕ್ಷಣ ಸಮಸ್ಯೆ ಬಗೆಹರಿಯಿತು ಎಂದು ಭಾವಿಸುವ ಸರಕಾರದ ನಡೆ ಹಾಸ್ಯಾಸ್ಪದವಾಗಿದೆ. ನೂರಾರು ಕಾಡಾನೆಗಳು ಕೃಷಿ ಪ್ರದೇಶದಲ್ಲಿ ಆಶ್ರಯ ಪಡೆದಿರುವಾಗ ಇವುಗಳಲ್ಲಿ ಪುಂಡಾನೆ ಯಾವುದು ಎಂದು ಗುರುತಿಸುವುದಾರೂ ಹೇಗೆ, ಮಾನವ ಜೀವ ಬಲಿ ಪಡೆದ ನಂತರವಷ್ಟೇ ಇದು ಪುಂಡಾನೆ ಎಂದು ಗುರುತಿಸುವ ಕಾರ್ಯದಲ್ಲಿ ಅರಣ್ಯ ಇಲಾಖೆ ತೊಡಗಿದೆಯೇ, ಅರಣ್ಯ ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಯಿಂದ ಹೊರ ಬರಬೇಕಾದರೆ ಮಾನವ ಜೀವಹಾನಿಯಾಗಲೇ ಬೇಕೆ ಎಂದು ಕಂಠಿ ಕಾರ್ಯಪ್ಪ ಪ್ರಶ್ನಿಸಿದ್ದಾರೆ.

ಕಾಡಾನೆಗಳ ಸೆರೆ ಕಾರ್ಯಾಚರಣೆಗೆ ಲಕ್ಷಾಂತರ ಹಣವನ್ನು ಅರಣ್ಯ ಇಲಾಖೆ ವ್ಯಯಿಸುತ್ತಿದ್ದು, ಇದು ಜನರ ತೆರಿಗೆ ಹಣವಾಗಿದೆ. ಈ ರೀತಿಯ ಕಣ್ಣೊರೆಸುವ ತಂತ್ರಗಾರಿಕೆಯ ಕಾರ್ಯಾಚರಣೆಯ ಮೂಲಕ ಜನರ ಹಣ ದುಂದುವೆಚ್ಚ ಮಾಡದೆ ಶಾಶ್ವತ ಪರಿಹಾರ ರೂಪಿಸಲು ಅರಣ್ಯ ಇಲಾಖೆ ಮುಂದಾಗಬೇಕು. ಜಿಲ್ಲೆಯ ಇಬ್ಬರು ಶಾಸಕರುಗಳಿಗೆ ಜಿಲ್ಲೆ ಮತ್ತು ಇಲ್ಲಿನ ಜನರ ಬಗ್ಗೆ ನೈಜ ಕಾಳಜಿ ಇದ್ದರೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕೊಡಗಿನಲ್ಲೇ ಅರಣ್ಯ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಲಿ ಎಂದು ಒತ್ತಾಯಿಸಿದ್ದಾರೆ.

ಕಾಡಾನೆಗಳ ದಾಳಿಯಂತಹ ಘಟನೆಗಳು ಪ್ರವಾಸೋದ್ಯಮದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಬಹುದು. ಅಲ್ಲದೆ, ತೋಟಗಳಿಗೆ ಕಾರ್ಮಿಕರು ಬಾರದೆ ಕೃಷಿ ಚಟುವಟಿಕೆಗೂ ಹಿನ್ನಡೆಯಾಗಬಹುದು. ಪರಿಸ್ಥಿತಿ ಕೈಮೀರುವ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಕಂಠಿ ಕಾರ್ಯಪ್ಪ ಆಗ್ರಹಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0