ಬೀದಿನಾಯಿಗಳ ಹಾವಳಿ ಮತ್ತು ಹದಗೆಟ್ಟ ರಸ್ತೆಗಳ ಬಗ್ಗೆ ಗಮನಹರಿಸದ ನಗರಸಭೆ ಆಡಳಿತದ ವಿರುದ್ಧ ಎಸ್ಡಿಪಿಐ ಪ್ರತಿಭಟನೆ
ಮಡಿಕೇರಿ: ಬೀದಿನಾಯಿಗಳ ಹಾವಳಿ ಮತ್ತು ಹದಗೆಟ್ಟ ರಸ್ತೆಗಳ ಬಗ್ಗೆ ಗಮನಹರಿಸದ ನಗರಸಭೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಎಸ್ಡಿಪಿಐ ಮಡಿಕೇರಿ ನಗರ ಸಮಿತಿ ಕಾರ್ಯಕರ್ತರು ಬುಧವಾರ ಇಂದಿರಾಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೋಯಿಸಿನ್, ನಗರಸಭೆಯ ಆಡಳಿತ ವೈಫಲ್ಯದಿಂದ ಮಡಿಕೇರಿಯಲ್ಲಿ ಸಮಸ್ಯೆಗಳು ಹೆಚ್ಚುತ್ತಿವೆ. ಅಭಿವೃದ್ಧಿಗೆ ಆದ್ಯತೆ ನೀಡಬೇಕಿದ್ದ ಆಡಳಿತ ಪಕ್ಷವು ರಾಜಕೀಯ ಕಿತ್ತಾಟದಲ್ಲೇ ತೊಡಗಿದೆ. ಇದರಿಂದ ಜನರ ಸಮಸ್ಯೆಗೆ ಪರಿಹಾರವೇ ಸಿಗುತ್ತಿಲ್ಲ ಎಂದು ಆರೋಪಿಸಿದರು. ಜಿಲ್ಲಾ ಕೇಂದ್ರದ ರಸ್ತೆಗಳೆಲ್ಲವೂ ಹಾಳಾಗಿವೆ. ಆದರೂ ಯಾವುದೇ ಮುನ್ನೆಚ್ಚರಿಕೆ ಯೋಜನೆ ರೂಪಿಸಿಲ್ಲ. ತಿಂಗಳಿಗೊಮ್ಮೆ ಸಭೆ ಮಾಡಿ ನಿರ್ಣಯಗಳನ್ನು ಜಾರಿಗೊಳಿಸದೆ ನೆಪ ಹೇಳುತ್ತಿದ್ದಾರೆ. ಇಂಥವರಿಗೆ ಆಡಳಿತದ ಅರ್ಹತೆಯೇ ಇಲ್ಲ ಎಂದರು.
ಸುಪ್ರೀಂಕೋರ್ಟ್ ಆದೇಶವಿದ್ದರೂ ಬೀದಿನಾಯಿ ನಿಯಂತ್ರಣಕ್ಕೆ ಕ್ರಮವಿಲ್ಲ. ಕಸ ವಿಲೇವಾರಿ ಘಟಕ ಬಳಿ ನಿರ್ಮಿಸಿರುವ ನಾಯಿ ಕೇಜ್ನ ಉದ್ದೇಶವೇನು ಎಂದು ಕೇಳಿದ ಅವರು, ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ನಗರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಮೇರಿ ವೇಗಸ್, ಮನ್ಸೂರ್ ಆಲಿ, ಮೊಹಮ್ಮದ್ ಆಲಿ, ಅಬ್ದುಲ್ ಅಡ್ಕರ್ ಸೇರಿದಂತೆ ಎಸ್ಡಿಪಿಐ ಕಾರ್ಯಕರ್ತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
