ಕೊಡ್ಲಿಪೇಟೆಯಲ್ಲಿ ಮನೆಯಂಗಳದಲ್ಲಿ ಶರಣ ಸಾಹಿತ್ಯ ಕಾರ್ಯಕ್ರಮಕ್ಕೆ ಚಾಲನೆ

Aug 11, 2026 - 14:56
 0  36
ಕೊಡ್ಲಿಪೇಟೆಯಲ್ಲಿ  ಮನೆಯಂಗಳದಲ್ಲಿ ಶರಣ ಸಾಹಿತ್ಯ ಕಾರ್ಯಕ್ರಮಕ್ಕೆ ಚಾಲನೆ

ಕೊಡ್ಲಿಪೇಟೆ : ಇಂದಿನ ವಿದ್ಯಾರ್ಥಿಗಳನ್ನು ಸಾತ್ವಿಕರಾಗಿ ಹಾಗೂ ಸಂಸ್ಕಾರವಂತರಾಗಿ ಬೆಳೆಸಬೇಕಾದ ತುರ್ತು ಅಗತ್ಯ ಇದೆ. ಸಾತ್ವಿಕ ಬದುಕಿಗೆ ಶರಣರ ವಚನಗಳು ದಾರಿ ದೀಪ. ತಾಯಂದಿರು ಎಳೆಯ ಹಂತದಲ್ಲಿಯೇ ವಚನಗಳ ಸಾರವನ್ನು ಹೇಳಿಕೊಡುವ ಮೂಲಕ ಬೆಳೆಸಿದರೆ ಮುಂದೆ ಆ ಮಗು ಹೆತ್ತವರು ಹಾಗೂ ಹಿರಿಯರ ಬಗ್ಗೆ ಎಂದೂ ತಿರಸ್ಕಾರ ಮನೋಭಾವ ಹೊಂದುವುದಿಲ್ಲ ಎಂದು ಕೊಡ್ಲಿಪೇಟೆ ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಕರೆಕೊಟ್ಟರು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕೊಡ್ಲಿಪೇಟೆಯ ಗಂಗಾ ವೀರಶೈವ ಮಹಿಳಾ ಸಮಾಜದ ವತಿಯಿಂದ ಕೊಡ್ಲಿಪೇಟೆಯ ಸಮಾಜ ಸೇವಕರಾದ ಮಂಜುಳಾ ಸುರೇಶ್ ಅವರ ಮನೆಯಂಗಳದಲ್ಲಿ ಹಮ್ಮಿಕೊಂಡಿದ್ದ " ಮನೆಯಂಗಳದತ್ತ ಶರಣ ಸಾಹಿತ್ಯ " ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,

 ನಾವುಗಳು ಮಣ್ಣು ಹಾಗೂ ಜಲಮೂಲಗಳನ್ನು ಮನಬಂದಂತೆ ದುರ್ಬಳಕೆ ಮಾಡಿಕೊಂಡ ಪರಿಣಾಮ ಗಾಳಿಯೊಂದಿಗೆ ಎಲ್ಲವೂ ವಿಷಮಯವಾಗುತ್ತಿವೆ. ಹಿಂದಿನ ನಮ್ಮ ಪೂರ್ವಜರು ಮನೆತುಂಬಾ ಮಕ್ಕಳು ಹಡೆದಿದ್ದರು. ರಸಾಯನಿಕ ಮುಕ್ತ ದವಸಗಳನ್ನು ಬೆಳೆದು ತಿನ್ನುತ್ತಾ ಆರೋಗ್ಯವಾಗಿ ನೂರು ಕಾಲ ಬಾಳಿದರು. ಆದರೆ ಇಂದು ಇಡೀ ಪರಿಸರ ವಿಷಮಯ ವಾಗಿದ್ದು ಇಂದಿನ ಯುವ ಜನಾಂಗ ಪುರುಷತ್ವ ಕಳೆದುಕೊಳ್ಳುತ್ತಿದ್ದು ಮಕ್ಕಳನ್ನು ಹಡೆಯದಂತಹ ಅನಾರೋಗ್ಯ ಪರಿಸ್ಥಿತಿಯಲ್ಲಿ ಪೋಷಕರಿದ್ದಾರೆ. ಮುಂದಿನ 50 ವರ್ಷಗಳಲ್ಲಿ ಮಕ್ಕಳೇ ಜನಿಸದಂತಹ ಅಪಾಯಕಾರಿ ವರ್ತುಲ ನಿರ್ಮಾಣವಾಗಲಿದ್ದು ಇಡೀ ಭೂಮಿ ಜನರಿಲ್ಲದೇ ಬಿಕೋ ಎನ್ನಲಿದೆ ಎಂಬುದು ಸಂಶೋಧನೆ ಹೇಳುತ್ತಿದೆ ಎಂದು ಅಭಿನವ ಶ್ರೀಗಳು ವಿಷಾದಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಭಕ್ತಿ ಹಾಗೂ ಶ್ರದ್ದೆಯ ಲಿಂಗಾಯಿತ ಸಮಾಜ ಇಷ್ಟಲಿಂಗವನ್ನು ಪೂಜಿಸುವ ಮೂಲಕ ಸಮಾಜ ಹಿತ ಬಯಸುವ ಸಮಾಜವಾಗಿದೆ. ಅಧುನಿಕ ಕಾಲಘಟ್ಟದ ವಿಜ್ಞಾನದ ಬೆಳವಣಿಗೆ ಮನುಷ್ಯನ ಜೀವನಕ್ಕೆ ಮಾರಕವಾಗುತ್ತಿರುವ ಈ ಹೊತ್ತಿನಲ್ಲಿ ಶರಣರ ವಚನಗಳ ಸಾರ ಸಾತ್ವಿಕ ಜೀವನಕ್ಕೆ ಮನುಷ್ಯರನ್ನು ಒಯ್ಯುತ್ತದೆ. ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿರುವ ಮನೆಯಂಗಳಕ್ಕೆ ಶರಣ ಸಾಹಿತ್ಯ ಕಾರ್ಯಕ್ರಮ ಅನನ್ಯವಾದುದು ಎಂದರು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಅನೇಕ ವರ್ಷಗಳಿಂದ ನಿತ್ಯ ಚಟುವಟಿಕೆಗಳಲ್ಲಿ ಇರುವ ಶರಣ ಸಾಹಿತ್ಯ ಪರಿಷತ್ತು ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದೀಗ ಹಳ್ಳಿ ನಗರ ಪ್ರದೇಶಗಳ ಮನೆಯಂಗಳದತ್ತ ಶರಣ ಸಾಹಿತ್ಯ ಪರಿಷತ್ತಿನ ಆಶಯಗಳನ್ನು ಜನಮಾನಸಕ್ಕೆ ಬಿತ್ತನೆ ಮಾಡಲಗುತ್ತಿದೆ ಎಂದರು.

ಕೊಡ್ಲಿಪೇಟೆ ಗಂಗಾ ವೀರಶೈವ ಮಹಿಳಾ ಸಮಾಜದ ಅಧ್ಯಕ್ಷೆ ಮಂಜುಳಾ ಸುರೇಶ್ ಮಾತನಾಡಿ, ಜಗತ್ತಿನಲ್ಲಿ ಶ್ರೇಷ್ಠ ಧರ್ಮವಾದ ವೀರಶೈವ ಧರ್ಮದ ಸಾರಗಳೊಂದಿಗೆ ಶರಣ ಸಾಹಿತ್ಯದ ಆಶಯಗಳನ್ನು ಜನರತ್ತ ಒಯ್ಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಕೊಡ್ಲಿಪೇಟೆ ಯಲ್ಲಿ ರೂ 80 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ವೀರಶೈವ ಮಹಿಳಾ ಸಮಾಜದ ಕಟ್ಟಡ ಕಾಮಗಾರಿಗೆ ಸಾರ್ವಜನಿಕರ ಆರ್ಥಿಕ ಸಹಕಾರ ಕೋರಿದರು.

ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಬಿ.ನಟರಾಜು, ಮಹಡಿಮನೆ ಸುರೇಶ್, ಗಂಗಾ ವೀರಶೈವ ಮಹಿಳಾ ಸಮಾಜದ ಉಪಾಧ್ಯಕ್ಷೆ ಗೀತಾ ದಯಾಶಂಕರ್, ಕಾರ್ಯದರ್ಶಿ ತ್ರಿವೇಣಿ ಚಂದ್ರಶೇಖರ್, ನಿರ್ದೇಶಕ ರಾದ ಮಮತಾ ಸತೀಶ್, ಸುಶೀಲಾ, ದೀಪಿಕಾ, ಜ್ಞಾನೇಶ್ವರಿ, ಚಂದ್ರಾವತಿ, ಭವ್ಯ ವಸಂತ್, ದೀಪಿಕಾ ವಿನಾಯಕ, ಲಲಿತ ಪ್ರಸನ್ನ, ಕೊಡ್ಲಿಪೇಟೆಯ ಜ್ಯೋತಿ, ರಶ್ಮಿ,ಉಷಾ, ಲತಾ ಲೋಕೇಶ್, ಶಾರದಾ, ರಾಜಮಣಿ, ರೂಪ ಮೊದಲಾದವರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0