Kodagu

ಸೋಮವಾರಪೇಟೆ: ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರು ಹಾಗೂ ಶಿಶುಗಳಿಗೆ ಥರ್ಮೋಫ್ಲಾಸ್ಕ್, ಕಂಬಳಿ ವಿತರಣೆ

admincoorgdaily

ಸೋಮವಾರಪೇಟೆ: ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರು ಹಾಗೂ ಶಿಶುಗಳಿಗೆ ಥರ್ಮೋಫ್ಲಾಸ್ಕ್, ಕಂಬಳಿ ವಿತರಣೆ

ಸೋಮವಾರಪೇಟೆ: ತಾಯ್ತನವು ಮಹಿಳೆಯರ ಜೀವನದ ಪ್ರಮುಖ ಘಟ್ಟವಾಗಿದ್ದು, ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸ್ತನ್ಯಪಾನ ಅತ್ಯಂತ ಅಗತ್ಯವಾಗಿದೆ ಎಂದು ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಅಧ್ಯಕ್ಷೆ ಲತಾ ಮಂಜು ಹೇಳಿದರು.

ಸೋಮವಾರಪೇಟೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರೋಗ್ಯವಂತ ಮಗು ಹಾಗೂ ತಾಯಿ ಸಮಾಜಕ್ಕೆ ಅಗತ್ಯ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ವತಿಯಿಂದ ಪ್ರತಿವರ್ಷ ಆಗಸ್ಟ್ ಮೊದಲ ವಾರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಿಸುವ ಮೂಲಕ ತಾಯಂದಿರು ಹಾಗೂ ಗರ್ಭಿಣಿಯರಲ್ಲಿ ತಾಯಿ-ಮಗುವಿನ ಆರೋಗ್ಯದ ಮಹತ್ವದ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.

 ಆಸ್ಪತ್ರೆಯ ಮಹಿಳಾ ತಜ್ಞೆ ಡಾ. ಅಶ್ವಿನಿ ಮಾತನಾಡಿ, ಮಗು ಜನಿಸಿದ ಅರ್ಧ ಗಂಟೆಯೊಳಗೆ ತಾಯಿಯ ಎದೆಹಾಲು ನೀಡುವುದು ಅಗತ್ಯ. ಇದರಿಂದ ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಎದೆಹಾಲು ನೀಡುವ ಸಂದರ್ಭದಲ್ಲಿ ತಾಯಿ ಮಗುವಿನ ಚಲನವಲನಗಳನ್ನೂ ಗಮನಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ ಬಾಣಂತಿಯರು ಹಾಗೂ ಶಿಶುಗಳ ಬಳಕೆಗೆ ಥರ್ಮೋಫ್ಲಾಸ್ಕ್ ಮತ್ತು ಕಂಬಳಿಗಳನ್ನು ವಿತರಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷೆ ಅಮೃತಾ ಕಿರಣ್, ಖಜಾಂಚಿ ಲತಾ ನಾಗೇಶ್ ಹಾಗೂ ಅಂಗನವಾಡಿ ಶಿಕ್ಷಕರು ಇದ್ದರು.