State News

ವಿದ್ಯುತ್ ತಂತಿ ತಗುಲಿ ಮಗ ಮೃತ್ಯು; ರಕ್ಷಿಸಲು ಹೋದ ತಾಯಿಯೂ ಬಲಿ | ಹುಣಸೂರು ತಾಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ದಾರುಣ ಘಟನೆ

admincoorgdaily

ಹುಣಸೂರು: ತಮ್ಮ ಮಗನನ್ನು ರಕ್ಷಿಸಲು ಧಾವಿಸಿದ ತಾಯಿಯೂ ವಿದ್ಯುತ್ ತಗುಲಿ ಬಲಿಯಾದ ಹೃದಯವಿದ್ರಾವಕ ಘಟನೆ ಹುಣಸೂರು ತಾಲೂಕಿನ ಕಪ್ಪನಾಯನ ಕಾಲೋನಿ–ಎಮ್ಮೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ನೀಲಮ್ಮ (42) ಮತ್ತು ಅವರ ಮಗ ಹರೀಶ್ (24) ಎಂದು ಗುರುತಿಸಲಾಗಿದೆ.

ಮಂಗಳವಾರ ಬೆಳಿಗ್ಗೆ ಜಮೀನಿನಲ್ಲಿದ್ದ ಜೋಳದ ಬೆಳೆಯನ್ನು ನೋಡಲು ತೆರಳಿದ ಹರೀಶ್, ಬೇಲಿಯ ಬಳಿಯ ಕೆಳಗೆ ಬಿದ್ದಿದ್ದ ವಿದ್ಯುತ್ ತಂತಿಗೆ ಸ್ಪರ್ಶಿಸಿ ಸ್ಥಳದಲ್ಲೇ ಕುಸಿದು ಬಿದ್ದ ಎನ್ನಲಾಗಿದೆ. ಮಗನನ್ನು ರಕ್ಷಿಸಲು ತೆರಳಿದ ತಾಯಿ ನೀಲಮ್ಮ ಅವರಿಗೂ ವಿದ್ಯುತ್ ಶಾಕ್ ತಗುಲಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದಿಂದಲೇ ಈ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ ತಕ್ಷಣ ಪರಿಹಾರ ನೀಡಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.

ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.