CRIME

ಇಬ್ಬರೂ ಸಾಯೋಣ ಎಂದ ಪ್ರಿಯಕರ;ಮುಂದೇನಾಯ್ತು ಗೊತ್ತಾ!

admincoorgdaily

ಇಬ್ಬರೂ ಸಾಯೋಣ ಎಂದ ಪ್ರಿಯಕರ;ಮುಂದೇನಾಯ್ತು ಗೊತ್ತಾ!

ಕೋಝಿಕೋಡ್, ಜ27: ಕೇರಳದಲ್ಲಿ ಆರಂಭದಲ್ಲಿ ಆತ್ಮಹತ್ಯೆ ಎಂದು ಭಾವಿಸಲಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಇಂದು ಪೊಲೀಸರು 36 ವರ್ಷದ ವ್ಯಕ್ತಿಯನ್ನು ತನ್ನ ಸಂಬಂಧಿಯ ಕೊಲೆಗೆ (Murder) ಸಂಬಂಧಿಸಿದಂತೆ ಬಂಧಿಸಿದ್ದಾರೆ.

ಜನವರಿ 24ರಂದು ಯುವತಿಯ ಸಾವು ಸಂಭವಿಸಿದಾಗ ಅದನ್ನು ಆತ್ಮಹತ್ಯೆ ಎಂದು ಭಾವಿಸಲಾಗಿತ್ತು. ಆದರೆ, ತನ್ನ ಅಕ್ರಮ ಸಂಬಂಧವನ್ನು ಮರೆಮಾಡಲು ವ್ಯಕ್ತಿಯೊಬ್ಬ ಆಕೆಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ನಂಬಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

 ಕಳೆದ ಶನಿವಾರ ಎಲತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಆರೋಪಿಯ ಒಡೆತನದ ಕೈಗಾರಿಕಾ ಘಟಕದಲ್ಲಿ 26 ವರ್ಷದ ಯುವತಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆ ಯುವತಿಯ ಸಂಬಂಧಿಯಾಗಿರುವ ವೈಶಾಖ್, ಆಕೆ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ನೋಡಿ ನನ್ನ ಪತ್ನಿಯ ಸಹಾಯದಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದೆ ಎಂದು ಹೇಳಿಕೊಂಡಿದ್ದ.

ಆದರೆ, ತನಿಖೆಯ ವೇಳೆ ಭಯಾನಕ ಸಂಗತಿಗಳು ಬಯಲಾಯಿತು. ವೈಶಾಖ್ ಆ ಯುವತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಆದರೆ, ತಮ್ಮ ಸಂಬಂಧವನ್ನು ಯಾರೂ ಒಪ್ಪದ ಕಾರಣದಿಂದ ಆಕೆಯ ಮನವೊಲಿಸಿ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಒಪ್ಪಿಸಿದ್ದ. ಆತನ ಮಾತು ನಂಬಿ ಆಕೆ ನೇಣು ಹಾಕಿಕೊಂಡಿದ್ದಳು. ಆಕೆಯನ್ನು ನಂಬಿಸಲು ಆತ ಆಕೆಯ ಪಕ್ಕದಲ್ಲೇ ಇನ್ನೊಂದು ಕುಣಿಕೆಯನ್ನು ಕೂಡ ಹಾಕಿದ್ದ.

ನಂತರ ತಾನೇ ಆಕೆಯ ಸ್ಟೂಲ್ ಒದ್ದು ಆಕೆಯನ್ನು ಸಾಯಿಸಿದ್ದ. ನಂತರ ಆತ ಆಕೆ ಸತ್ತಿರುವುದನ್ನು ಕನ್ಫರ್ಮ್ ಮಾಡಿಕೊಂಡು ಆಸ್ಪತ್ರೆಗೆ ಸೇರಿಸುವ ನಾಟಕವಾಡಿದ್ದ.

 ವೈಶಾಖ್‌ ತನ್ನ ಪ್ಲಾನ್ ಪೊಲೀಸರಿಗೆ ಗೊತ್ತಾಗುವುದಿಲ್ಲ ಎಂದುಕೊಂಡಿದ್ದ. ಆದರೆ, ವಿಧಿವಿಜ್ಞಾನ ವರದಿಗಳು ಆ ಯುವತಿ ನೇಣು ಹಾಕಿಕೊಳ್ಳುವಾಗ ಮತ್ತು ಅವಳನ್ನು ಕೆಳಗೆ ಇಳಿಸಿದ ನಂತರವೂ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾಳೆ ಎಂದು ಸೂಚಿಸಿದಾಗ ಪೊಲೀಸರು ತನಿಖೆಯನ್ನು ಹೆಚ್ಚಿಸಿದರು.

ಆ ರಾತ್ರಿ ಅಲ್ಲಿಂದ ಹಿಂತಿರುಗಿ ಸಿಸಿಟಿವಿ ಹಾರ್ಡ್ ಡ್ರೈವ್ ಅನ್ನು ನಾಶಮಾಡಿ ಸಾಕ್ಷ್ಯವನ್ನು ಅಳಿಸಿಹಾಕುವುದು ಅವನ ಕೊನೆಯ ಪ್ಲಾನ್ ಆಗಿತ್ತು. ಆದರೆ, ಪೊಲೀಸರಿಗೆ ವೈಶಾಖ್ ನಡವಳಿಕೆಯಲ್ಲಿ ಅನುಮಾನ ಬಂದ ಕಾರಣದಿಂದ ಆತನ ಬಗ್ಗೆ ಒಂದು ಕಣ್ಣಿಟ್ಟಿದ್ದರು.

ಪೊಲೀಸರ ವಿಚಾರಣೆಯಲ್ಲಿ, ವೈಶಾಖ್ ಕೊನೆಗೂ ತಪ್ಪೊಪ್ಪಿಕೊಂಡಿದ್ದಾನೆ. ತಾನು ಹಾಗೂ ಆ ಯುವತಿ ಅಕ್ರಮ ಸಂಬಂಧದಲ್ಲಿದ್ದಾಗಿಯೂ, ಆಕೆ ನಿರಂತರವಾಗಿ ತನ್ನನ್ನು ಮದುವೆಯಾಗಬೇಕೆಂದು ಒತ್ತಾಯಿಸುತ್ತಿದ್ದರಿಂದ ತಾನು ಒತ್ತಡಕ್ಕೊಳಗಾಗಿದ್ದೆ. ಹೀಗಾಗಿ, ಆಕೆಯನ್ನು ಕೊಲ್ಲಲು ಪ್ಲಾನ್ ಮಾಡಿದ್ದಾಗಿ ಹೇಳಿದ್ದಾನೆ. ಇದರಿಂದಾಗಿ ಆತ್ಮಹತ್ಯೆಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.