ಕಸ್ತೂರಿ ರಂಗನ್ ವರದಿಯಲ್ಲಿ ಕುಂದಚೇರಿ-ಕೋಪಟ್ಟಿ ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸಿರುವುದರಿಂದ ಸಾವಿರಾರು ಕೃಷಿಕರ ಬದುಕು ಅತಂತ್ರ
admincoorgdaily

ಮಡಿಕೇರಿ: ಕಸ್ತೂರಿ ರಂಗನ್ ವರದಿಯಲ್ಲಿ ಕೊಡಗಿನ ಕುಂದಚೇರಿ-ಕೋಪಟ್ಟಿ ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸಿರುವುದರಿಂದ ಸಾವಿರಾರು ಕೃಷಿಕರ ಬದುಕು ಅತಂತ್ರವಾಗಿದೆ ಎಂದು ಕುಂದಚೇರಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಕೆ.ಯು.ಹ್ಯಾರಿಸ್ ಆತಂಕ ವ್ಯಕ್ತಪಡಿಸಿದರು.
ಜು.೨೭ಕ್ಕೆ ೭ನೇ ಬಾರಿ ಬಿಡುಗಡೆಯಾದ ವರದಿಯಲ್ಲಿ ಜಿಲ್ಲೆಯ ೫೫ ಗ್ರಾಮಗಳೊಂದಿಗೆ ಈ ಎರಡು ಗ್ರಾಮಗಳೂ ಸೇರಿವೆ. ಪಂಚಾಯಿತಿ ವ್ಯಾಪ್ತಿಯ ೪೦೦೦ ಜನರಲ್ಲಿ ಶೇ.೮೫ರಷ್ಟು ಬಡ ಕೃಷಿಕರಿದ್ದಾರೆ. ತಲೆತಲಾಂತರದಿಂದ ಭತ್ತ, ಕಾಫಿ, ಮೆಣಸು, ಏಲಕ್ಕಿ ಕೃಷಿ ಮಾಡುತ್ತಿರುವ ಇವರಿಗೆ ನಿರ್ಬಂಧಗಳು ದೊಡ್ಡ ಹೊಡೆತ ನೀಡಲಿವೆ ಎಂದು ಹೇಳಿದರು. ೨೦೧೩ರಲ್ಲಿ ಶೇ.೩೭ ಇದ್ದ ಪರಿಸರ ಸೂಕ್ಷ್ಮ ಪ್ರದೇಶ ಈಗ ಶೇ.೫೬.೨೫ಕ್ಕೆ ಏರಿರುವುದು ಅವೈಜ್ಞಾನಿಕ ಎಂದು ಚೆಟ್ಟಿಮಾನಿ ಸಂಘದ ಕೆದಂಬಾಡಿ ಕೀರ್ತಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಕುಂದಚೇರಿ ಮಾಜಿ ಅಧ್ಯಕ್ಷ ಪಿ.ಬಿ.ದಿನೇಶ್ ಮಾತನಾಡಿ, ಸ್ಥಳೀಯರ ಒಪ್ಪಿಗೆ ಇಲ್ಲದೆ ವರದಿ ಜಾರಿ ಬೇಡ. ತಕ್ಷಣ ಎರಡೂ ಗ್ರಾಮಗಳನ್ನು ಪಟ್ಟಿಯಿಂದ ಕೈಬಿಡುವಂತೆ ಜಿಲ್ಲಾಧಿಕಾರಿ ಮೂಲಕ ಕೇಂದ್ರ-ರಾಜ್ಯ ಸರ್ಕಾರಕ್ಕೆ ಆಕ್ಷೇಪ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮದ ಪ್ರಮುಖರಾದ ಕೋಡಿ ಹಂಸ, ಕೀರ್ತಿ ಉತ್ತಪ್ಪ, ಪ್ರಸನ್ನ ಕುಮಾರ್ ಇದ್ದರು.