ಮಲೆ ಮಹದೇಶ್ವರ ಅಭಯಾರಣ್ಯದಲ್ಲಿ ಕಾಡುಹಂದಿ ಬೇಟೆಗಾರನಿಗೆ ಗುಂಡು: ಕೊಡಗಿನ ಅನ್ವಿತ್ ಬಂಧನ

Jul 28, 2026 - 10:08
 0  1.3k
ಮಲೆ ಮಹದೇಶ್ವರ ಅಭಯಾರಣ್ಯದಲ್ಲಿ ಕಾಡುಹಂದಿ ಬೇಟೆಗಾರನಿಗೆ ಗುಂಡು: ಕೊಡಗಿನ ಅನ್ವಿತ್ ಬಂಧನ

ಚಾಮರಾಜನಗರ:ಮಲೆ ಮಹದೇಶ್ವರ ವನ್ಯಧಾಮದಲ್ಲಿ ಅಕ್ರಮವಾಗಿ ಕಾಡುಹಂದಿಗಳನ್ನು ಬೇಟೆಯಾಡಿ ಕಾರಿನಲ್ಲಿ ಸಾಗಿಸುತ್ತಿದ್ದ ತಂಡದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮೂವರು ಪರಾರಿಯಾಗಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ಮೂಲದ ಅನ್ವಿತ್ ಬಂಧಿತ ಆರೋಪಿ. ಫೈರಿಂಗ್ ವೇಳೆ ಈತನ ಕಾಲಿಗೆ ಗುಂಡು ತಗುಲಿದೆ. ಜೊತೆಗೆ ಇದ್ದ ದರ್ಶನ್, ಮಂಜು ಮತ್ತು ಕಿರಣ್ ಎಂಬ ಮೂವರು ದುಷ್ಕರ್ಮಿಗಳು ಕತ್ತಲೆಯ ಲಾಭ ಪಡೆದು ಪರಾರಿಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಆಲ್ಟೋ ಕಾರನ್ನು ಸಿಬ್ಬಂದಿ ತಡೆದು ತಪಾಸಣೆ ನಡೆಸಲು ಯತ್ನಿಸಿದರು.

ಈ ವೇಳೆ ಕಾರಿನಲ್ಲಿದ್ದ ನಾಲ್ವರು ಆರೋಪಿಗಳು ವಾಹನದಿಂದ ಇಳಿದು ಓಡಲು ಯತ್ನಿಸಿದ್ದಾರೆ. ಆಗ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಗುಂಡು ತಗುಲಿದ ಅನ್ವಿತ್‌ನನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ವೇಳೆ ಅರಣ್ಯಾಧಿಕಾರಿಗಳು ಸ್ಥಳದಿಂದ ಎರಡು ಕಾಡುಹಂದಿಗಳ ಮೃತದೇಹ, ಒಂದು ಮಚ್ಚು, ಎರಡು ಟಾರ್ಚ್‌ಗಳು, ಒಂದು ಟಾರ್ಪಾಲ್, ಒಂದು ಮೊಬೈಲ್ ಫೋನ್ ಹಾಗೂ ಅಕ್ರಮ ಸಾಗಾಟಕ್ಕೆ ಬಳಸಿದ್ದ ಆಲ್ಟೋ ಕಾರನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 2
Funny Funny 1
Angry Angry 0
Sad Sad 0
Wow Wow 0