ವಾಷಿಂಗ್ ಮೆಷಿನ್ ಬಳಸುವಾಗ ವಿದ್ಯುತ್ ಸ್ಪರ್ಶಿಸಿ ಮಹಿಳೆ ಬಲಿ

Apr 28, 2026 - 12:25
 0  2k
ವಾಷಿಂಗ್ ಮೆಷಿನ್ ಬಳಸುವಾಗ ವಿದ್ಯುತ್ ಸ್ಪರ್ಶಿಸಿ ಮಹಿಳೆ ಬಲಿ
ಸುಜಾತ

ಬೆಂಗಳೂರು, ಏ.27: ರಾಜ್ಯ ರಾಜಧಾನಿಯಲ್ಲಿ ಒಂದು ವಿಚಿತ್ರ ಘಟನೆಯೊಂದು ನಡೆದಿದೆ. ಇದು ಕೊಲೆಯೋ ಅಥವಾ ಆಕಸ್ಮಿಕವೋ ಎಂಬ ಅನುಮಾನಗಳು ಉಂಟಾಗಿದೆ. ಇದೀಗ ಈ ಸಾವಿನ ಸುತ್ತ ಹಲವು ಊಹಪೋಹಗಳು ಉಂಟಾಗಿದೆ. ವಾಷಿಂಗ್ ಮೆಷಿನ್ ಬಳಸುವಾಗ ವಿದ್ಯುತ್ ಸ್ಪರ್ಶಿಸಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗೌಡಹಳ್ಳಿಯಲ್ಲಿ ನಡೆದಿದೆ.

ಆದರೆ, ಮಗಳ ಸಾವಿನ ಹಿಂದೆ ಅಳಿಯನ ಕೈವಾಡವಿದೆ ಎಂದು ಪೋಷಕರು ಗಂಭೀರ ಶಂಕೆ ವ್ಯಕ್ತಪಡಿಸಿದ್ದಾರೆ. ಮೃತ ಮಹಿಳೆಯನ್ನು ಸುಜಾತ (30) ಎಂದು ಗುರುತಿಸಲಾಗಿದೆ. ತುಮಕೂರಿನ ಹೆಗ್ಗೆರೆ ನಿವಾಸಿಗಳಾದ ಪಾಂಡುರಂಗಯ್ಯ ಮತ್ತು ಭಾಗ್ಯಮ್ಮ ದಂಪತಿಯ ನಾಲ್ಕನೇ ಮಗಳಾದ ಸುಜಾತ, 10 ವರ್ಷಗಳ ಹಿಂದೆ ರಿಯಲ್ ಎಸ್ಟೇಟ್ ಉದ್ಯಮಿ ಚೇತನ್ ಎಂಬುವವರನ್ನು ವಿವಾಹವಾಗಿದ್ದರು.

 ಸೋಮವಾರ ಬೆಳಗ್ಗೆ 7:30ರ ಸುಮಾರಿಗೆ ವಾಷಿಂಗ್ ಮೆಷಿನ್ ಹಾಕಲು ಹೋದಾಗ ಕರೆಂಟ್ ಶಾಕ್ ತಗುಲಿ ಸುಜಾತ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಪೋಷಕರ ಅನುಮಾನಕ್ಕೆ ಕಾರಣವೇನು? ಸುಜಾತ ಅವರ ಸಾವು ಕೇವಲ ಆಕಸ್ಮಿಕವಲ್ಲ, ಇದರ ಹಿಂದೆ ಅವರ ಪತಿ ಚೇತನ್ ಸಂಚು ಇರಬಹುದು ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಅದಕ್ಕೆ ಕೆಲವೊಂದು ಕಾರಣಗಳನ್ನು ನೀಡಿದ್ದಾರೆ.

ಮೊದಲಾಗಿ ಮದುವೆಯಾದಾಗಿನಿಂದಲೂ ದಂಪತಿಗಳ ನಡುವೆ ಜಗಳ ನಡೆಯುತ್ತಿತ್ತು. ಗಂಡನ ಕಿರುಕುಳ ತಾಳಲಾರದೆ ಸುಜಾತ ಒಂದು ತಿಂಗಳ ಹಿಂದೆ ತವರು ಮನೆಗೆ ಹೋಗಿದ್ದರು ಎಂದು ಹೇಳಲಾಗಿದೆ. ಚೇತನ್ ಮತ್ತು ಆತನ ತಾಯಿ ಸುಜಾತಳ ಮನವೊಲಿಸಿ ಕೇವಲ ಒಂದು ವಾರದ ಹಿಂದಷ್ಟೇ ಗೌಡಹಳ್ಳಿಗೆ ಕರೆಕೊಂಡು ಬಂದಿದ್ದರು. ಮನೆಗೆ ಬಂದ ಎಂಟೇ ದಿನದಲ್ಲಿ ಸುಜಾತ ಶವವಾಗಿರುವುದು ಪೋಷಕರಲ್ಲಿ ಭಾರಿ ಅನುಮಾನ ಮೂಡಿಸಿದೆ ಎಂದು ಆರೋಪಿಸಿದ್ದಾರೆ.

 ಘಟನೆ ನಡೆದ ತಕ್ಷಣ ಸುಜಾತ ಅವರನ್ನು ವಿಪಿ ಮಾಗ್ನಸ್ ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ. ಸದ್ಯ ಮೃತದೇಹವನ್ನು ಹೆಚ್ಚಿನ ತನಿಖೆ ಮತ್ತು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಇದು ಆಕಸ್ಮಿಕವೋ ಅಥವಾ ವ್ಯವಸ್ಥಿತ ಕೊಲೆಯೋ ಎಂಬುದು ತಿಳಿದುಬರಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 1
Angry Angry 0
Sad Sad 0
Wow Wow 0