Kodagu

ಗೋಣಿಕೊಪ್ಪಲು ಕಾವೇರಿ ಕಾಲೇಜು ವಿಜ್ಞಾನ ಸಂಘದ ಉದ್ಘಾಟನೆ

admincoorgdaily

ಗೋಣಿಕೊಪ್ಪಲು  ಕಾವೇರಿ ಕಾಲೇಜು ವಿಜ್ಞಾನ ಸಂಘದ ಉದ್ಘಾಟನೆ
ಗೋಣಿಕೊಪ್ಪಲು : ಗೋಣಿಕೊಪ್ಪಲು  ಕಾವೇರಿ ಕಾಲೇಜಿನ 2026-27 ನೇ ಸಾಲಿನ ವಿಜ್ಞಾನ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಪ್ರಾಂಶುಪಾಲ ಡಾ. ಎ. ಬಿ. ನರೇಶ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ, ವಿಮರ್ಶಾತ್ಮಕ ಚಿಂತನೆ ಹಾಗೂ ಸಂಶೋಧನಾ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಂಶುಪಾಲೆ ಪ್ರೊ. ಎಂ. ಎಸ್. ಭಾರತಿ ಮಾತನಾಡಿ, ವಿಜ್ಞಾನ ಎಂದರೆ ಕೇವಲ ತಿಳಿದಿರುವ ವಿಷಯಗಳನ್ನು ಕಲಿಯುವುದಲ್ಲ, ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಹುಡುಕುವ ನಿರಂತರ ಪ್ರಕ್ರಿಯೆ. ಜಗತ್ತಿನ ಕುರಿತು ಅನೇಕ ಸಂಗತಿಗಳು ಇನ್ನೂ ಅನ್ವೇಷಣೆಗೆ ಬಾಕಿಯಿದ್ದು, ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ ಹಾಗೂ ಬುದ್ಧಿವಂತಿಕೆಯನ್ನು ಬಳಸಿಕೊಂಡು ಸಮಾಜಕ್ಕೆ ಉಪಯುಕ್ತವಾದ ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ  2025-26 ನೇ ಸಾಲಿನಲ್ಲಿ ವಿಜ್ಞಾನ ವಿಭಾಗದಲ್ಲಿ ಶೈಕ್ಷಣಿಕ ಸಾಧನೆ ಮಾಡಿದ  ವಿದ್ಯಾರ್ಥಿಗಳಾದ ಡಯಾನಾ ಮತ್ತು ಆಫಿಯಾ ಷರೀಫ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕಿ ಡಾ. ನಯನ ತಮ್ಮಯ್ಯ, ವಿಜ್ಞಾನ ವಿಭಾಗದ ಸಂಚಾಲಕ ಡಾ. ಮಾರಣ್ಣ, ಪ್ರಾಧ್ಯಾಪಕರಾದ ಡಾ. ಅಭಿಷೇಕ್, ಅಕ್ಷತಾ, ಭಾವನಾ, ದೇಚಮ್ಮ, ಗ್ರಂಥಪಾಲಕ ಡಾ. ಸಂತೋಷ್ ಚೌಹಾಣ್, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಸಿ. ಚನ್ನಪ್ಪ, ಪ್ರಯೋಗಾಲಯ ಸಹಾಯಕರಾದ ಅಂಬಿಕಾ, ಸರಸ್ವತಿ, ವಸಂತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.