Kodagu

ಅಧಿಕಾರಿಗಳು ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿ: ದಿನಕರ ಶೆಟ್ಟಿ

admincoorgdaily

ಅಧಿಕಾರಿಗಳು ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿ: ದಿನಕರ ಶೆಟ್ಟಿ
ಮಡಿಕೇರಿ:-ಕರ್ನಾಟಕ ಲೋಕಾಯುಕ್ತದ ಮಡಿಕೇರಿ ಡಿವೈಎಸ್‍ಪಿ ಅವರಿಂದ ನಗರದ ತಾಲ್ಲೂಕು ತಹಶೀಲ್ದಾರರ ಕಚೇರಿಯಲ್ಲಿ ಬುಧವಾರ ದೂರು ಅರ್ಜಿ ಸ್ವೀಕಾರ ಸಂದರ್ಭದಲ್ಲಿ 4 ಅರ್ಜಿಗಳು ಸಲ್ಲಿಕೆಯಾದವು.
     ಈ ಸಂದರ್ಭದಲ್ಲಿ ಮನವಿದಾರರಲ್ಲಿ ಒಬ್ಬರಾದ ಬಾಲಕೃಷ್ಣ ಅವರು ಕಳೆದ ಮೂರು ವರ್ಷಗಳಿಂದ ಭೂಮಿ ದುರಸ್ತಿಗಾಗಿ ಕಚೇರಿಗೆ ಅಲೆಯುತ್ತಿದ್ದು, ಇನ್ನೂ ಸಹ ಭೂಮಿ ದುರಸ್ತಿಯಾಗಿಲ್ಲ ಎಂದು ಅವಲತ್ತುಕೊಂಡರು.   
     ಮತ್ತೊಬ್ಬರು ಭೂಮಿ ಒತ್ತುವರಿಯಾಗಿದ್ದು, ಸರ್ವೆ ಮಾಡಿ ಸರಿಪಡಿಸುವಂತೆ ಮನವಿ ಮಾಡಿದ್ದು, ಇದುವರೆಗೆ ಈ ಕಾರ್ಯ ಆಗಿಲ್ಲ ಎಂದು ದೂರಿದರು. 

     ಮತ್ತೊಬ್ಬರು ಜಮೀನು ಖಾತೆ ಮಾಡಿಕೊಡುವಂತೆ ಹಲವು ಬಾರಿ ಮನವಿ ಮಾಡಿದರೂ ಸಹ ಇದುವರೆಗೆ ಯಾವುದೇ ಕೆಲಸ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

      ಭೂಮಿ ದುರಸ್ತಿಯಾದಲ್ಲಿ ಕುಟುಂಬದವರಿಗೆ ಪಾಲು ಮಾಡಲು ಸಹಕಾರಿಯಾಗಲಿದೆ. ಸಣ್ಣ ಪುಟ್ಟ ಭೂಮಿ ಹೊಂದಿರುವವರು ಭೂಮಿ ವಿಭಜನೆಗೆ ದುರಸ್ತಿಯಿಂದ ಅನುಕೂಲವಾಗಲಿದೆ. ಇದನ್ನು ಮಾಡದೆ ಕುಟುಂಬದವರಿಗೆ ಭಾಗ ಮಾಡುವುದು ಕಷ್ಟವಾಗಲಿದೆ ಎಂದು ಮನವಿದಾರರು ಡಿವೈಎಸ್‍ಪಿ ಅವರ ಗಮನಕ್ಕೆ ತಂದರು. 
      ದೂರುದಾರರ ಮನವಿಯನ್ನು ತಾಳ್ಮೆಯಿಂದ ಆಲಿಸಿದ ಲೋಕಾಯುಕ್ತ ಡಿವೈಎಸ್‍ಪಿ ದಿನಕರಶೆಟ್ಟಿ ಅವರು ಕಳೆದ ಮೂರು ವರ್ಷಗಳಿಂದ ಭೂಮಿ ದುರಸ್ತಿ ಮಾಡದೆ ಕಚೇರಿಗೆ ಅಲೆಸುವುದು ಏಕೆ ಎಂದು ಪ್ರಶ್ನಿಸಿದರು. 

      ಸಾರ್ವಜನಿಕರನ್ನು ಅಲೆಸುವುದಾಗಲಿ ಅಥವಾ ಸತಾಯಿಸುವುದಾಗಲಿ ಸರಿಯಲ್ಲ. ಮಾನವೀಯತೆ ದೃಷ್ಟಿಯಿಂದ ಕೆಲಸ ನಿರ್ವಹಿಸಬೇಕು. 15 ದಿನದಲ್ಲಿ ಭೂಮಿ ದುರಸ್ತಿ ಕೆಲಸ ಆಗದಿದ್ದಲ್ಲಿ ಮತ್ತೊಮ್ಮೆ ಗಮನಕ್ಕೆ ತರುವಂತೆ ಲೋಕಾಯುಕ್ತ ಡಿವೈಎಸ್‍ಪಿ ಅವರು ಮನವಿದಾರರಿಗೆ ಸಲಹೆ ಮಾಡಿದರು.  

      ಖಾಲಿ ನಿವೇಶನದಲ್ಲಿನ ಉದ್ಯಾನವನ ಜಾಗವನ್ನು ಸಹ ಖಾತೆ ಮಾಡಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅಧಿಕಾರಿಗಳು ಇಂತಹ ಕೆಲಸಗಳಿಗೆ ಇಳಿಯಬಾರದು. ಸಾರ್ವಜನಿಕರ ದೂರು ಬಂದಾಗ ಸ್ಪಂದಿಸುವುದು ಅಧಿಕಾರಿಗಳ ಕೆಲಸವಾಗಿದೆ ಎಂದು ಸೂಚಿಸಿದರು.  

      ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಇವರಿಗೆ  ಸಮಯಕ್ಕೆ ಸರಿಯಾಗಿ ಬಿಸಿನೀರು ಒದಗಿಸುವಂತೆ ನಿರ್ದೇಶನ ನೀಡಿದರು.  

      ಕೆಲವು ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ಬಿಸಿ ನೀರು ಇಲ್ಲದೆ, ವಿದ್ಯಾರ್ಥಿಗಳು ಪರಿತಪಿಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ಮಾಡಿದರು. 
     ರಾಜಾಸೀಟ್ ಬಳಿಯ ಕೂರ್ಗ್ ವಿಲೇಜ್ ಬಗ್ಗೆಯೂ ಸಹ ಲೋಕಾಯುಕ್ತ ಡಿವೈಎಸ್‍ಪಿ ಅವರು ಮಾಹಿತಿ ಪಡೆದರು. ಕೂರ್ಗ್ ವಿಲೇಜ್ ಜಾಗವು ಸಾರ್ವಜನಿಕ ಉಪಯೋಗಕ್ಕೆ ಬಾರದಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.   

     ವಿವಿಧ ಕಚೇರಿಗಳಲ್ಲಿ ಲೋಕಾಯುಕ್ತ ನಾಮಫಲಕದಲ್ಲಿ ಸಂಚಾರಿ ದೂರವಾಣಿ ಸಂಖ್ಯೆಯನ್ನು ಸರಿಯಾಗಿ ಕಾಣುವಂತೆ ಬರೆಯಬೇಕು. ಕೆಲವು ಕಡೆಗಳಲ್ಲಿ ಸರಿಯಾಗಿ ಕಾಣದೆ ಸಣ್ಣದಾಗಿ ಬರೆದಿರುವ ಬಗ್ಗೆ ದೂರುಗಳು ಬರುತ್ತಿವೆ ಎಂದು ಹೇಳಿದರು. 

      ಲೋಕಾಯುಕ್ತ ಪೊಲೀಸ್ ಇನ್ಸ್‍ಪೆಕ್ಟರ್ ವೀಣಾ ನಾಯಕ್ ಅವರು ಮಾತನಾಡಿದರು. ಕಡಗದಾಳುವಿನ ಶಿವಶಂಕರ, ಯವಕಪಾಡಿಯ ಕೆ.ಬಿ.ಪೊಣ್ಣಪ್ಪ, ಮೇಕೇರಿಯ ಕೆ.ಎಸ್.ಮೊಣ್ಣಪ್ಪ ಅವರು ಲೋಕಾಯುಕ್ತ ದೂರು ಅರ್ಜಿ ಸಂದರ್ಭದಲ್ಲಿ ಭೂಮಿ ವಿಲೇವಾರಿ ಸಂಬಂಧಿಸಿದಂತೆ ಮನವಿ ಮಾಡಿದರು. 

      ತಾ.ಪಂ.ಇಒ ಶೇಖರ್ ಕಳೆದ ಬಾರಿ ನಡೆದ ಸಭಾ ನಡಾವಳಿಯನ್ನು ಓದಿದರು. ಶಿರಸ್ತೇದಾರ್‍ರಾದ ದೇವರಾಜು ಅವರು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.  
   ಭೂದಾಖೆಗಳ ಸಹಾಯಕ ನಿರ್ದೇಶಕರಾದ ಮಹೇಶ್ ಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು ಹಲವು ಮಾಹಿತಿ ನೀಡಿದರು.