ಕರಾಟೆ ಚಾಂಪಿಯನ್ಶಿಪ್ನಲ್ಲಿ ಸಿದ್ದಾಪುರದ ವಿದ್ಯಾರ್ಥಿಗಳ ಅಮೋಘ ಸಾಧನೆ
admincoorgdaily

ಸಿದ್ದಾಪುರ:-
ಚೆನ್ನೈನಲ್ಲಿ ನಡೆದ 28ನೇ ಎಂಜಿ ನ್ಯಾಷನಲ್ ಹಾಗೂ ಇಂಡಿಯಾ–ಶ್ರೀಲಂಕಾ ಇಂಟರ್ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಸಿದ್ದಾಪುರದ
ಸೇಂಟ್ ಆನ್ಸ್ ಕಾನ್ವೆಂಟ್ ಸಿಬಿಎಸ್ಇ ಶಾಲೆಯ ವಿದ್ಯಾರ್ಥಿಗಳಾದ ಭವಿತ್ ಹಾಗೂ
ದುವಿನ್ ಅಯ್ಯಪ್ಪ ಪ್ರಥಮ ಸ್ಥಾನ ಪಡೆದು ಚಾಂಪಿಯನ್ಗಳಾಗಿ ಹೊರಹೊಮ್ಮಿದ್ದಾರೆ.
ಆಗಸ್ಟ್ 30ರಂದು ಚೆನ್ನೈನ ಐಸಿಎಫ್ ಎ. ಪಳನಿಸಾಮಿ ಮಲ್ಟಿಪರ್ಪಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳು ಹಾಗೂ ದೇಶಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. 9ನೇ ತರಗತಿಯ ಭವಿತ್ ತಮ್ಮಯ್ಯ ಹಾಗೂ 5ನೇ ತರಗತಿಯ ದುವಿನ್ ಅಯ್ಯಪ್ಪ ಅವರು ತಮ್ಮ ಅತ್ಯುತ್ತಮ ಕ್ರೀಡಾ ಕೌಶಲ್ಯ, ಶಿಸ್ತು ಹಾಗೂ ಪ್ರತಿಭೆಯನ್ನು ಪ್ರದರ್ಶಿಸಿ ಪ್ರಥಮ ಸ್ಥಾನ ಗಳಿಸುವ ಮೂಲಕ ಗಮನ ಸೆಳೆದರು.
ವಿದ್ಯಾರ್ಥಿಗಳ ಈ ಸಾಧನೆಯಿಂದ ಸೇಂಟ್ ಆನ್ಸ್ ಕಾನ್ವೆಂಟ್ ಸಿಬಿಎಸ್ಇ ಶಾಲೆ ಹಾಗೂ ಸಿದ್ದಾಪುರಕ್ಕೆ ಹೆಮ್ಮೆ ತಂದಿದೆ. ಸಾಧಕ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು, ತರಬೇತುದಾರರು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲೂ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.