ಕೇವಲ 29 ಗಂಟೆಗಳಲ್ಲಿ 2 ಸಾವಿರ ಕಿ.ಮೀ ಪಯಣದ ದಾಖಲೆ ನಿಮಿ೯ಸಿದ ಕೇಶವಪ್ರಸಾದ್ ಮುಳಿಯ ಜೋಡಿ; ರಾಜಧಾನಿ ಎಕ್ಸ್ ಪ್ರೆಸ್ ರೈಲಿಗಿಂತಲೂ ವೇಗವಾಗಿ ದೆಹಲಿಯಿಂದ ಬೆಂಗಳೂರಿಗೆ ಬಂದ ಸಾಹಸಿಗರು
admincoorgdaily

ಅನಿಲ್ ಹೆಚ್.ಟಿ.
ಅದು ಅಂತಿಂಥ ಪಯಣ ಅಲ್ಲ. ಅತೀ ದೂರದ ಪಯಣವನ್ನು ಸಲೀಸಾಗಿ, ಸುರಕ್ಷಿತವಾಗಿ ನಿಭಾಯಿಸಲು ಸಾಧ್ಯವಿದೆ ದೂರದ ಪಯಣವನ್ನು ಸಲೀಸಾಗಿ ನಿವ೯ಹಿಸಲಾಗುತ್ತದೆ ಎಂದು ನಿರೂಪಿಸಿದ ಪಯಣ ಅದು.
ಆ ಪಯಣದ ವೇಗ ಹೇಗಿತ್ತು ಎಂದರೆ, ಈ ದೇಶದ ಸೂಪರ್ ಫಾಸ್ಟ್ ರೈಲುಗಳಲ್ಲೊಂದು ಎಂಬ ಹಿರಿಮೆಯ ರಾಜಧಾನಿ ಎಕ್ಸ್ ಪ್ರೆಸ್ ನ್ನೂ ಮೀರಿಸಿದ ವೇಗದ ಪಯಣ ಅದು.
ಇಂಥ ಪಯಣವನ್ನು ಯಶಸ್ವಿಯಾಗಿ ದಾಖಲಿಸಿ ವಿಶ್ವದಾಖಲೆಯ ರೆಕಾಡ್೯ ಮಾಡಿದ ಕೀತಿ೯ಗೆ ಕೇಶವ ಪ್ರಸಾದ್ ಮುಳಿಯ ಮತ್ತು ಡಾ. ಅನಿಲ್ ಎಸ್. ಬೈಪಾಡಿತ್ತಾಯ ಪಾತ್ರರಾಗಿದ್ದಾರೆ.
ಅಂದಂತೆ, ಈ ಇಬ್ಬರೂ ಪ್ರಯಾಣಿಸಿದ್ದು ದೆಹಲಿಯಿಂದ ಬೆಂಗಳೂರಿಗೆ. ಒಟ್ಟು 2,075 ಕಿಲೋಮೀಟರ್ ಅಂತರದ ಪ್ರಯಾಣ ಅದು. ಈ ದೂರವನ್ನು ಈವ೯ರೂ ಚಾಲಕರು ಕೇವಲ 29 ಗಂಟೆಗಳಲ್ಲಿ ಕ್ರಮಿಸಿದ್ದು ನಿಬ್ಬೆರಗಾಗುವ ದಾಖಲೆಯೇ ಹೌದು.
ಒಂದು ದೇಶದಲ್ಲಿ ಕಾರಿನಲ್ಲಿ ಅತೀ ದೀಘ೯ದ ನಿರಂತರ ಪ್ರಯಾಣಕ್ಕಾಗಿ ಕೇಶವಪ್ರಸಾದ್ ಮುಳಿಯ ಮತ್ತು ಡಾ. ಅನಿಲ್ ಬೈಪಾಡಿತ್ತಾಯ ಅವರಿಗೆ ಜಂಟಿಯಾಗಿ ವಿಶ್ವದಾಖಲೆಯ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಪ್ರಧಾನ ಮಾಡಲಾಯಿತು.
ಈ ದಾಖಲೆಯ ಪಯಣ ಪ್ರಾರಂಭವಾದದ್ದು ಹೀಗೆ;
ಸೆಪ್ಟೆಂಬರ್ 7ರಂದು ಬೆಳಿಗ್ಗೆ 5:50ಕ್ಕೆ ದೆಹಲಿಯ ಇಂಡಿಯಾ ಗೇಟ್ನಿಂದ ಆರಂಭವಾದ ಈ ಸಾಹಸದ ಕಾರ್ ಯಾತ್ರೆಯು ಸೆಪ್ಟೆಂಬರ್ 8ರಂದು ಬೆಳಿಗ್ಗೆ 10:51ಕ್ಕೆ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಈ ಸಾಧನೆಯನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅಧಿಕೃತವಾಗಿ ಪ್ರಮಾಣೀಕರಿಸಿದ್ದು, ಸಂಸ್ಥೆಯ ಏಷ್ಯಾ ಮುಖ್ಯಸ್ಥ ಡಾ. ಮನೀಶ್ ವಿಷ್ಣೋಯಿ ಅವರು ವಿಶ್ವದಾಖಲೆಯ ಮಾನ್ಯತೆಯನ್ನು ದೃಢಪಡಿಸಿದರು.
ರಾಜಧಾನಿ ಎಕ್ಸಪ್ರೆಸ್ ಗಿಂತ ವೇಗ :
ಸಮಯದ ದೃಷ್ಟಿಯಿಂದ ಹೋಲಿಕೆ ಮಾಡುವುದಾದರೆ, ದೆಹಲಿಯಿಂದ ಬೆಂಗಳೂರಿಗೆ ರಾಜಧಾನಿ ಎಕ್ಸ್ಪ್ರೆಸ್ ರೈಲಿನ ಪ್ರಯಾಣಕ್ಕೆ ಸಾಮಾನ್ಯವಾಗಿ ಸುಮಾರು 36 ಗಂಟೆಗಳು ಬೇಕಾಗುತ್ತದೆ. ವಿಭಿನ್ನ ಮಾರ್ಗ ಮತ್ತು ಪ್ರಯಾಣದ ಪರಿಸ್ಥಿತಿಗಳ ನಡುವೆಯೂ, ಈ ಹೋಲಿಕೆಯೇ ಕೇಶವಪ್ರಸಾದ್ ಮುಳಿಯ ಮತ್ತು ಡಾ. ಅನಿಲ್ ಅವರ ವಿಶ್ವ ದಾಖಲೆ ಪ್ರಯತ್ನದ ಅವಧಿ ಹಾಗೂ ಸವಾಲಿನ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.
ಕೇಶವ ಪ್ರಸಾದ್ ಮುಳಿಯ ಅವರು ನೊಂದಿಗೆ ಪ್ರತಿಕ್ರಿಯಿಸಿ, “ಕಾರು ಚಾಲನೆ ನನ್ನ ಬಹುಕಾಲದ ಆಸಕ್ತಿ. ಈ ಆಸಕ್ತಿಯನ್ನು ಒಂದು ಸವಾಲಿನ ಮತ್ತು ಸ್ಮರಣೀಯ ಸಾಧನೆಯಾಗಿ ರೂಪಿಸಬೇಕೆಂಬ ಕನಸಿನಿಂದ ಈ ಪ್ರಯಾಣವನ್ನು ಕೈಗೊಂಡೆವು. ಪ್ರಯಾಣದುದ್ದಕ್ಕೂ ಏಕಾಗ್ರತೆ, ಸಹನೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದೆವು. ಈ ವಿಶ್ವದಾಖಲೆ ನಮ್ಮ ತಂಡದ ಸಹಕಾರ ಹಾಗೂ ನಮ್ಮನ್ನು ಪ್ರೋತ್ಸಾಹಿಸಿದ ಎಲ್ಲರ ಬೆಂಬಲದ ಫಲವಾಗಿದೆ,” ಎಂದರು. ತನ್ನ ತಂದೆ ಶ್ಯಾಮ್ ಭಟ್ ಅವರೇ ಈ ಪಯಣಕ್ಕೆ ಪ್ರೇರಣೆ. ಅವರು ಕೆಲವಾರು ವಷ೯ಗಳ ಹಿಂದೆ ರೋಟರಿ ಸಂಸ್ಥೆಯ ಸಭೆಗಳಿಗಾಗಿ ಪುತ್ತೂರಿನಿಂದ ಮಡಿಕೇರಿಗೆ ತಲುಪಲು ವೇಗದ ಪಯಣ ಮಾಡುತ್ತಿದ್ದರು. ಚಾಲನಾ ಸಾಮಥ್ಯ೯ವನ್ನು ಸುರಕ್ಷಿತವಾಗಿ ಮಾಡುವುದೂ ಅವರಿಂದ ಕಲಿತ ಎಂದು ಸ್ಮರಿಸಿಕೊಂಡ ಕೇಶವಪ್ರಸಾದ್, ತನ್ನ ಕಿರಿಯ ಸಹೋದರ ಕೃಷ್ಣ ನಾರಾಯಣ ಮುಳಿಯ ಈ ಹಿಂದೆ 32 ಗಂಟೆಗಳಲ್ಲಿ ಕಾರ್ ಮೂಲಕ ಬೆಂಗಳೂರಿನಿಂದ ದೆಹಲಿಗೆ ನಿರಂತರವಾಗಿ ಕ್ರಮಿಸಿದ್ದನ್ನು ಸ್ಮರಿಸಿಕೊಂಡರು
ಜಂಟಿ ದಾಖಲೆದಾರ ಡಾ. ಅನಿಲ್ ಎಸ್. ಬೈಪಾಡಿತ್ತಾಯ ಅವರು ಅನುಭವ ಹಂಚಿಕೊಂಡು, “ಈ ಸವಾಲಿನ ಪ್ರಯಾಣವನ್ನು ಕೇಶವ ಪ್ರಸಾದ್ ಅವರೊಂದಿಗೆ ಪೂರ್ಣಗೊಳಿಸಿ, ಜಂಟಿಯಾಗಿ ವಿಶ್ವದಾಖಲೆ ನಿರ್ಮಿಸಿರುವುದು ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಸಂಗತಿ. ದೀರ್ಘ ಪ್ರಯಾಣದ ಪ್ರತಿಯೊಂದು ಹಂತದಲ್ಲಿಯೂ ಶಿಸ್ತು, ಸಮನ್ವಯ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿತ್ತು. ಈ ಐತಿಹಾಸಿಕ ಸಾಧನೆ ನಮ್ಮಿಬ್ಬರಿಗೂ ಸದಾ ಸ್ಮರಣೀಯವಾಗಿರಲಿದೆ,” ಎಂದರು.
2 ಸಾವಿರ ಕಿ.ಮೀ ಗಳನ್ನು 29 ಗಂಟೆಗಳಲ್ಲಿಯೇ ಈ ಜೋಡಿ ಲ್ಯಾಂಡ್ ರೋವರ್ ಡಿಫೆಂಡರ್ ಕಾರ್ ಮೂಲಕ ಪೂರೈಸಿತ್ತು. ದಾರಿಯುದ್ದಕ್ಕೂ ಎಲ್ಲಿಯೂ ಕಾಫಿ,ತಿಂಡಿ, ಊಟಕ್ಕೆಂದು ವಿರಮಿಸದೇ ಪ್ರಯಾಣ ಬೆಳೆಸಲಾಗಿತ್ತು. ಆಹಾರವನ್ನೆಲ್ಲಾ ಕಾರ್ ನಲ್ಲಿಯೇ ಸಂಗ್ರಹಿಸಿ ಹಸಿವಾದಾಗಲೆಲ್ಲಾ ಸೇವಿಸಲಾಗಿತ್ತು. ಇಂಧನ ಭತಿ೯ ಮಾಡಿಕೊಳ್ಳಲು ಫ್ಯೂಯಲ್ ಬಂಕ್ ನಲ್ಲಿ ಕಾರ್ ನಿಲ್ಲಿಸಿದ ಸಂದಭ೯ ಕೊಂಚ ವಿರಾಮ ಪಡೆಯಲಾಗಿತ್ತು. ಬಹುತೇಕ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಈ ಪಯಣ ಸಾಗಿತ್ತು. ದಾರಿಯಲ್ಲಿನ ಪ್ರಾಕೖತ್ತಿಕ ಸೌಂದಯ೯ವನ್ನೂ ಈ ಜೋಡಿ ಸವಿಯಲು ಮರೆಯಲಿಲ್ಲ.!
ಕೇಶವ್ ಅವರ ಹಿರಿಯ ಪುತ್ರಿ ಆದ್ಯಾ ಕೂಡ ಮೋಟಾರ್ ರ್ಯಾಲಿಯಲ್ಲಿ ಪರಿಣಿತರಾಗಿದ್ದಾರೆ. ಈ ರೀತಿ ಮುಳಿಯ ಕುಟುಂಬದಲ್ಲಿ ಹಿರಿಯಜೀವಿಗಳಿಂದ ಕಿರಿಯ ತಲೆಮಾರಿನವರೆಗೂ ಸಾಹಸಮಯ ಮೋಟಾರ್ ಡ್ವೈವಿಂಗ್ ನಲ್ಲಿ ಆಸಕ್ತಿ ವ್ಯಕ್ತವಾಗಿರುವುದು ಗಮನಾಹ೯.
ಬೈಕ್ ರೈಡ್, ಕಾರ್ ಡ್ರೈವಿಂಗ್ ನಲ್ಲಿಯೂ ಈಗಾಗಲೇ ದೇಶವ್ಯಾಪಿ ಅನೇಕ ಸಾಧನೆ ಮಾಡಿರುವ ಮುಳಿಯ ಸಂಸ್ಥೆಯ ವ್ಯವಸ್ಥಾಪಕ ನಿದೇ೯ಶಕರಾದ ಕೇಶವಪ್ರಸಾದ್ ಮುಳಿಯ ಈ ಬಾರಿ ಹೊಸದ್ದೊಂದು ಪ್ರಯತ್ನಕ್ಕೆ ಮುಂದಾಗಿ, ಈ ವಿನೂತನ ಪ್ರಯೋಗದಲ್ಲಿಯೂ ಯಶಸ್ಸು ಸಾಧಿಸಿದ್ದು ಶ್ಲಾಘನೀಯ.