ಎಡಗಾಲಿನಲ್ಲಿ ಅಳವಡಿಸಿದ್ದ ರಾಡ್! ಬಲಗಾಲು ಸರ್ಜರಿ ಮಾಡಿದ ವೈದ್ಯರು!

ಹಾಸನ: ಎಡಗಾಲಿನಲ್ಲಿ ಅಳವಡಿಸಿದ್ದ ರಾಡ್ ತೆಗೆಯಬೇಕಿದ್ದ ವೈದ್ಯರು, ತಪ್ಪಾಗಿ ಬಲಗಾಲು ಕುಯ್ದ ಘಟನೆ ನಗರದ ಹಿಮ್ಸ್ ನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಬೂಚನಹಳ್ಳಿ ಕಾವಲು ಗ್ರಾಮದ ಜ್ಯೋತಿ ಎಂಬುವವರು, ಸುಮಾರು ಎರಡು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ತೀವ್ರವಾಗಿ
ಗಾಯಗೊಂಡು ಎಡಗಾಲಿಗೆ ರಾಡ್ ಅಳವಡಿಸಿದ್ದರು. ಇತ್ತೀಚಿನ ದಿನಗಳಲ್ಲಿ ಆ ಕಾಲಿನಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಎಡಗಾಲಿನಲ್ಲಿ ಅಳವಡಿಸಿದ್ದ ರಾಡ್ ತೆಗೆದ ಬದಲು, ವೈದ್ಯ ಡಾ. ಸಂತೋಷ್ ತಪ್ಪಾಗಿ ಬಲಗಾಲು ಕುಯ್ದಿದ್ದಾರೆ. ನಂತರ ತಮ್ಮ ತಪ್ಪು ಅರಿತು, ಎಡಗಾಲಿನಲ್ಲಿದ್ದ ರಾಡ್ ಕೂಡ ತೆಗೆದಿದ್ದಾರೆ. ಪರಿಣಾಮವಾಗಿ, ಜ್ಯೋತಿ ಈಗ ಎರಡು ಕಾಲುಗಳಲ್ಲಿ ಬ್ಯಾಂಡೇಜ್ ಹಾಕಿಸಿಕೊಂಡು ಹಾಸಿಗೆಯಲ್ಲೇ ಮಲಗಬೇಕಾದ ಪರಿಸ್ಥಿತಿ ಎದುರಾಗಿದೆ.
ಈ ಘಟನೆಯಿಂದ ಜ್ಯೋತಿ ಹಾಗೂ ಅವರ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವೈದ್ಯರ ನಿರ್ಲಕ್ಷ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಪ್ರಸ್ತುತ ಜ್ಯೋತಿ ಹಾಸನದ ಹಿಮ್ಸ್ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಜಿಲ್ಲೆಯ ವೈದ್ಯಕೀಯ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆ ಎಬ್ಬಿಸಿದೆ.