ಲಾಕರ್ ನಲ್ಲಿಟ್ಟಿದ್ದ ಚಿನ್ನವನ್ನೇ ಎಗರಿಸಿ ನಕಲಿ ಚಿನ್ನವಿಟ್ಟ ಬ್ಯಾಂಕ್ ಸಿಬ್ಬಂದಿ; 4.5 ಕೋಟಿ ರೂಪಾಯಿ ಮೌಲ್ಯದ ಚಿನ್ನ ಗುಳುಂ!

ಲಾಕರ್ ನಲ್ಲಿಟ್ಟಿದ್ದ ಚಿನ್ನವನ್ನೇ ಎಗರಿಸಿ ನಕಲಿ ಚಿನ್ನವಿಟ್ಟ ಬ್ಯಾಂಕ್ ಸಿಬ್ಬಂದಿ; 4.5 ಕೋಟಿ ರೂಪಾಯಿ ಮೌಲ್ಯದ ಚಿನ್ನ ಗುಳುಂ!
Photo credit: Free press journal

ಗ್ವಾಲಿಯರ್ (ಮ.ಪ್ರ.): ಗ್ವಾಲಿಯರ್ ಜಿಲ್ಲೆಯ ದಾಬ್ರಾ ಶಾಖೆಯ ಮಣಪ್ಪುರಂ ಫೈನಾನ್ಸ್ ಲಿಮಿಟೆಡ್‌ನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನದ ಹಗರಣ ಬೆಳಕಿಗೆ ಬಂದಿದೆ. ಗ್ರಾಹಕರಿಗೆ ಸೇರಿದ 4.5 ಕೋಟಿ ರೂಪಾಯಿ ಮೌಲ್ಯದ 4.38 ಕೆ.ಜಿ. ಚಿನ್ನವನ್ನು ನಕಲಿ ಚಿನ್ನದಾಂದ ಬದಲಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಹಗರಣವು ಕಂಪೆನಿಯ ಆಂತರಿಕ ಲೆಕ್ಕಪರಿಶೋಧನೆ ವೇಳೆ ಬೆಳಕಿಗೆ ಬಂದಿದ್ದು, ನಂತರ ಒಬ್ಬ ಗ್ರಾಹಕರು ತಮ್ಮ ಆಭರಣಗಳನ್ನು ವಾಪಸು ಪಡೆಯಲು ಬಂದಾಗ ಪ್ಯಾಕೆಟ್‌ ನಲ್ಲಿ ನಕಲಿ ಆಭರಣ ಸಿಕ್ಕಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಪರಿಶೀಲನೆ ವೇಳೆ ಶಾಖೆಯ 8 ಲಾಕರ್‌ ಗಳಲ್ಲಿ ಇಟ್ಟಿದ್ದ 26 ಪ್ಯಾಕೆಟ್‌ ನಲ್ಲಿರುವ ಚಿನ್ನ ನಕಲಿ ಎಂದು ಪತ್ತೆಯಾಗಿದೆ. ವಿಷಯ ಬಯಲಿಗೆ ಬಂದ ಕೂಡಲೇ ಕಂಪೆನಿಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಶಾಖಾ ವ್ಯವಸ್ಥಾಪಕ ಚಂದ್ರಭನ್ ಕುಶ್ವಾಹ ಮತ್ತು ಸಹಾಯಕ ವ್ಯವಸ್ಥಾಪಕ ವಿಕಾಸ್ ಶರ್ಮಾ ಇವರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಇಬ್ಬರಿಗೂ ಲಾಕರ್ ಕೀಗಳ ತೆರೆಯಲು ಅವಕಾಶ ಇದ್ದ ಕಾರಣ ಪ್ರಕರಣದಲ್ಲಿ ಅವರ ಪಾತ್ರ ಪ್ರಮುಖವೆಂದು ಅಂದಾಜಿಸಲಾಗಿದೆ.

ನಗರ ಪೊಲೀಸ್ ಠಾಣೆಯ ಉಸ್ತುವಾರಿ ಯಶವಂತ್ ಗೋಯಲ್ ಅವರು, “ದೂರು ದಾಖಲಾಗಿದೆ. ಪ್ರಕರಣ ಅತ್ಯಂತ ಗಂಭೀರ ಸ್ವರೂಪದ್ದಾಗಿದೆ. ಆದರೆ ಇನ್ನೂ ತನಿಖೆ ಪ್ರಾರಂಭದ ಹಂತದಲ್ಲಿದೆ” ಎಂದು ತಿಳಿಸಿದ್ದಾರೆ.

ಘಟನೆ ಬಹಿರಂಗವಾದ ನಂತರ ಶಾಖೆಯ ಹೊರಗೆ ಜನಸಮೂಹ ಸೇರಿದ್ದು, ಗ್ರಾಹಕರಲ್ಲಿ ಆತಂಕ ಮತ್ತು ಅಸಮಾಧಾನ ಉಂಟಾಗಿದೆ.