ಒಂದೇ ಕುಟುಂಬದ ನಾಲ್ವರ ಮೃತ್ಯು ಪ್ರಕರಣಕ್ಕೆ ತಿರುವು; ಕಲ್ಲಂಗಡಿ ಹಣ್ಣಿನಲ್ಲಿ ಏನಿತ್ತು ಗೊತ್ತೇ!

ಒಂದೇ ಕುಟುಂಬದ ನಾಲ್ವರ ಮೃತ್ಯು ಪ್ರಕರಣಕ್ಕೆ ತಿರುವು;  ಕಲ್ಲಂಗಡಿ ಹಣ್ಣಿನಲ್ಲಿ ಏನಿತ್ತು ಗೊತ್ತೇ!
Photo credit: NDTV

ಮುಂಬೈ ಮೇ 7: ಮುಂಬೈನ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದ್ದು, ಅವರು ಸೇವಿಸಿದ್ದ ಕಲ್ಲಂಗಡಿ ಹಣ್ಣಿನಲ್ಲಿ ಇಲಿ ಪಾಷಾಣ ಮಿಶ್ರಣವಾಗಿದ್ದ ಸಂಗತಿ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

ಮೃತರ ದೇಹದ ಅಂಗಾಂಗಗಳಲ್ಲಿ ಹಾಗೂ ಕಲ್ಲಂಗಡಿ ಹಣ್ಣಿನ ತುಂಡುಗಳಲ್ಲಿ ಇಲಿ ಪಾಷಾಣ ತಯಾರಿಕೆಯಲ್ಲಿ ಬಳಸುವ ವಿಷಕಾರಿ ರಾಸಾಯನಿಕ 'ಝಿಂಕ್ ಫಾಸ್ಪೆಟ್' ಕುರುಹುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಬ್ದುಲ್ಲಾ ದೊಕಾಡಿಯಾ (45), ಅವರ ಪತ್ನಿ ನಸೀನ್ (35) ಹಾಗೂ ಪುತ್ರಿಯರಾದ ಝನಾಬ್ (13) ಮತ್ತು ಆಯೇಷಾ (16) ಮೃತಪಟ್ಟವರು. ಕುಟುಂಬವು ತಮ್ಮ ನಿವಾಸದಲ್ಲಿ ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಊಟದ ಬಳಿಕ ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದರು.

 ಬೆಳಗಿನ ಜಾವ ಸುಮಾರು 5 ಗಂಟೆ ವೇಳೆಗೆ ಕುಟುಂಬದ ಸದಸ್ಯರಲ್ಲಿ ತೀವ್ರ ವಾಂತಿ ಹಾಗೂ ಭೇದಿಯ ಲಕ್ಷಣಗಳು ಕಾಣಿಸಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ನಾಲ್ವರೂ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

 ಮರಣೋತ್ತರ ಪರೀಕ್ಷೆಯ ವೇಳೆ ಮೃತರ ಅಂಗಾಂಗಗಳಲ್ಲಿ ಹಸಿರು ಬಣ್ಣದ ಕಲೆಗಳು ಪತ್ತೆಯಾಗಿದ್ದು, ಇದು ವಿಷಪ್ರಾಶನದ ಪ್ರಮುಖ ಲಕ್ಷಣವೆಂದು ವೈದ್ಯರು ಹೇಳಿದ್ದಾರೆ. ಬಳಿಕ ನಡೆಸಿದ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಮೃತರ ದೇಹದಲ್ಲಿ ಝಿಂಕ್ ಫಾಸ್ಟೈಟ್ ಅಂಶಗಳು ಪತ್ತೆಯಾಗಿವೆ.

ಕುಟುಂಬ ಸೇವಿಸಿದ್ದ ಕಲ್ಲಂಗಡಿ ಹಣ್ಣಿನ ಮಾದರಿಗಳಲ್ಲಿಯೂ ಇದೇ ವಿಷಕಾರಿ ರಾಸಾಯನಿಕದ ಕುರುಹುಗಳು ಪತ್ತೆಯಾಗಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.

 ಮೃತರು ವಿಷ ಮಿಶ್ರಿತ ಕಲ್ಲಂಗಡಿಯನ್ನು ಆಕಸ್ಮಿಕವಾಗಿ ಸೇವಿಸಿದ್ದಾರೆಯೊ ಅಥವಾ ಉದ್ದೇಶಪೂರ್ವಕವಾಗಿ ಸೇವಿಸಿದ್ದಾರೆಯೊ ಎಂಬ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.