ಫೆಬ್ರವರಿ 09ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ
ಮಡಿಕೇರಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ತಂದಿರುವ ನಿಯಮಗಳಿಗೆ ಸುಪ್ರೀಂಕೋರ್ಟ್ ನೀಡಿರುವ ತಡೆಯಾಜ್ಞೆ ತೆರವುಗೊಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಫೆ.9ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅಂದು ಬೆಳಗ್ಗೆ ೧೧.೩೦ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಎಂದು ಸಮಿತಿಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎನ್.ಆರ್.ದೇವರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಜಿಸಿ ತಂದಿರುವ ನಿಯಮ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹೊರಡಿಸಬೇಕು. ಎಸ್ಸಿ/ಎಸ್ಟಿ ಸಮುದಾಯದ ವಿದ್ಯಾರ್ಥಿಗಳು ನಿರ್ಭಯವಾದ ಶೈಕ್ಷಣಿಕ ವಾತಾವರಣ ವಿವಿಗಳಲ್ಲಿ ನಿರ್ಮಿಸಬೇಕಾದರೆ ರಾಜ್ಯ ಮತ್ತು ಕೇಂದ್ರ ಸರ್ಕಾರ ರೋಹಿತ್ ವೇಮುಲ್ ಕಾಯ್ದೆ ಕಡ್ಡಾಯವಾಗಿ ಜಾರಿ ಮಾಡಬೇಕು. ಇಂದಿನ ವಿವಿಗಳು ಶೈಕ್ಷಣಿಕ ವಾತಾವರಣ ಕೋಮುವಾದಿಕರಣಕ್ಕೆ ಒಳಗಾಗಿವೆ.
ಜಾತಿವಾದಿ ಅಹಂಕಾರ ನಾಶಮಾಡದ ಹೊರತು ಭಾರತದ ವಿವಿಗಳಿಗೆ ಮತ್ತು ದಲಿತ ಹಿಂದುಳಿದ, ಬುಡಕಟ್ಟು ಸಮುದಾಯಗಳಿಗೆ ಭವಿಷ್ಯವಿಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಹರೀಶ್ ಕುಮಾರ್, ಪ್ರಮುಖರಾದ ಭಾಗ್ಯ, ನೂತನ್ ಇದ್ದರು.