ಸರ್ಕಾರ ಗ್ರಾ.ಪಂ.ಅಭಿವೃದ್ಧಿಗೆ ನೀಡಿರುವ ಅಧಿಕಾರ ಚಲಾಯಿಸಿ: ಡಿ.ಆರ್.ಪಾಟೀಲ

ಸರ್ಕಾರ ಗ್ರಾ.ಪಂ.ಅಭಿವೃದ್ಧಿಗೆ ನೀಡಿರುವ ಅಧಿಕಾರ ಚಲಾಯಿಸಿ: ಡಿ.ಆರ್.ಪಾಟೀಲ

ಮಡಿಕೇರಿ:- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು, ಆ ದಿಸೆಯಲ್ಲಿ ಗ್ರಾ.ಪಂ.ಗಳಿಗೆ ಸರ್ಕಾರ ಹೆಚ್ಚಿನ‌ ಅಧಿಕಾರ ನೀಡಿದ್ದು, ಅದನ್ನು ನಿಯಮಾನುಸಾರ ಬಳಸುವಂತಾಗಬೇಕು ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆಯ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಡಿ.ಆರ್.ಪಾಟೀಲ ಅವರು ತಿಳಿಸಿದ್ದಾರೆ. 

       ತಾಲ್ಲೂಕಿನ ಹೊದ್ದೂರು ಗ್ರಾ.ಪಂ.ಸಭಾಂಗಣದಲ್ಲಿ 2026-27 ನೇ ಸಾಲಿನ‌ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ತಯಾರಿ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು. 

         ಗ್ರಾ.ಪಂ.ಅಭಿವೃದ್ದಿಗೆ ಕಾನೂನಿನ ಅಧಿಕಾರ ಚಲಾಯಿಸಬೇಕು. ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು ಎಂದು ಅವರು ನುಡಿದರು. 

    ಪಂಚಾಯತ್ ರಾಜ್ ವ್ಯವಸ್ಥೆ ಬಲಿಷ್ಠವಾಗಿರಬೇಕು. ಆ ಮೂಲಕ ಗ್ರಾಮಗಳ ಅಭಿವೃದ್ಧಿ ಆಗಬೇಕು ಎಂದು ಡಿ.ಆರ್.ಪಾಟೀಲ ಅವರು ಹೇಳಿದರು. 

       ಜನರ ಪ್ರತಿನಿಧಿಗಳು ಜನರೇ ಆಗಿದ್ದಾರೆ. ಆದ್ದರಿಂದ ಸ್ಥಳೀಯವಾಗಿಯೇ ಶಾಲೆ, ಆಸ್ಪತ್ರೆ, ಅಂಗನವಾಡಿ ಮತ್ತಿತರ ಅಗತ್ಯ ಹುದ್ದೆಗಳ ನೇಮಕವೂ ಆಗಬೇಕು ಎಂದು ಸಲಹೆ ಮಾಡಿದರು. 

     ಕಾನೂನಿನ‌ ಅಧಿಕಾರ ಹಸ್ತಾಂತರ ಆಗಬೇಕು. ಗ್ರಾಮ ಸಭೆಯ ನಿರ್ಣಯವೇ ಅಂತಿಮ‌ ಆಗಬೇಕು. ಗ್ರಾಮ ಅಭಿವೃದ್ಧಿಗೆ ಸ್ಥಳೀಯರೇ ಚಿಂತಿಸಬೇಕು ಎಂದು ಡಿ.ಆರ್.ಪಾಟೀಲ ಅವರು ವಿವರಿಸಿದರು. 

     ಗ್ರಾಮ ಪಂಚಾಯತ್ ವ್ಯವಸ್ಥೆಯಲ್ಲಿ ಪಕ್ಷ ರಾಜಕಾರಣ ಇರುವುದಿಲ್ಲ, ಆದ್ದರಿಂದ ಗ್ರಾಮಸ್ಥರೇ ಎಲ್ಲಾ ಬಡಜನರ ಏಳ್ಗೆಯನ್ನು ಬಯಸಿ ಒಮ್ಮತದ ತೀರ್ಮಾನ‌ ತೆಗೆದುಕೊಳ್ಳಬಹುದಾಗಿದೆ ಎಂದರು. 

       ಗ್ರಾ.ಪಂ.ಗಳಿಗೆ ಇರುವ ಅಧಿಕಾರ ಮತ್ತು ಕಾನೂನಿನ ಬಗ್ಗೆ ಕೈಪಿಡಿ ಮುದ್ರಿಸಿ ನೀಡುವಂತಾಗಬೇಕು ಎಂದು ಡಿ.ಆರ್.ಪಾಟೀಲ ಅವರು ಸಲಹೆ ನೀಡಿದರು. 

       ಮಹಾತ್ಮ ಗಾಂಧಿಯವರ ಕನಸಿನ ರಾಮರಾಜ್ಯ ಮತ್ತು ರಾಜೀವ್ ಗಾಂಧಿ ಅವರ ಗ್ರಾಮೀಣಾಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಆಧುನಿಕ ತಂತ್ರಜ್ಞಾನದ ಆಶಯದೊಂದಿಗೆ ಗ್ರಾಮಗಳ ಅಭಿವೃದ್ಧಿ ಮತ್ತಷ್ಟು ಆಗಬೇಕು ಎಂದು ಒತ್ತಿ ಹೇಳಿದರು. 

    ಮುಂದೆ ಜುಲೈ ತಿಂಗಳಲ್ಲಿ ಹೊದ್ದೂರಿನಲ್ಲಿ ನಡೆಯುವ ಗ್ರಾಮ ಸಭೆಗೆ ಆಗಮಿಸಲಾಗುವುದು ಎಂದು ಡಿ.ಆರ್.ಪಾಟೀಲ ಅವರು ಹೇಳಿದರು. 

     ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ವಿಶೇಷ ಸಲಹೆಗಾರರಾದ ಕೆಂಪೇಗೌಡ ಅವರು ಮಾತನಾಡಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಚುನಾಯಿತ ಸರ್ಕಾರ ಇರಬೇಕು ಎಂಬುದು ಸರ್ಕಾರದ ಆಶಯವಾಗಿದ್ದು, ಆ ನಿಟ್ಟಿನಲ್ಲಿ ಸ್ಥಳೀಯ ಆಡಳಿತಕ್ಕೆ ವಿಶೇಷವಾದ ಅಧಿಕಾರ ನೀಡಲಾಗಿದೆ ಎಂದರು. 

     ಜನರ ನಿರೀಕ್ಷೆಗೆ ತಕ್ಕಂತೆ ಅಧಿಕಾರ ನಡೆಸಬೇಕು. ಪಂಚಾಯತ್ ಅಭಿವೃದ್ಧಿ ಸಂಬಂಧಿಸಿದಂತೆ ಎಲ್ಲಾ ಮತದಾರರಿಗೂ ಮಾಹಿತಿ ನೀಡಬೇಕು. ಫಲಾನುಭವಿಗಳ ಆಯ್ಕೆ ಮತ್ತು ಕ್ರೀಯಾ ಯೋಜನೆ ರೂಪಿಸುವುದು ಹಾಗೂ ವಾರ್ಡ್ ಸಭೆ ನಡೆಸುವುದು ಸೇರಿದಂತೆ ಪಂಚಾಯತ್ ರಾಜ್ ಆಶಯವನ್ನು ಅರಿತುಕೊಂಡು ಕೆಲಸ ಮಾಡಬೇಕು ಎಂದರು. 

       2027-28 ನೇ ಸಾಲಿನಲ್ಲಿ ಜನರ ಯೋಜನೆಯಾಗಿ ರೂಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಂತನೆ ನಡೆಸಿದ್ದು, ಅದರಂತೆ ಜನರ ಭಾಗವಹಿಸುವಿಕೆ ಅತಿಮುಖ್ಯ ಎಂದು ಕೆಂಪೇಗೌಡ ಅವರು ವಿವರಿಸಿದರು.   

       ಗ್ರಾ.ಪಂ.ನಿಕಟಪೂರ್ವ ಸದಸ್ಯರಾದ ಮೊಣ್ಣಪ್ಪ‌ ಅವರು ಮಾತನಾಡಿ ಗ್ರಾ.ಪಂ.ಗಳಿಗೆ ಅನುದಾನ ಹೆಚ್ಚಿಸಬೇಕು ಎಂದು ಕೋರಿದರು.

    ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷರಾದ ಹಂಸ ಅವರು ಮಾತನಾಡಿ ಗ್ರಾಮೀಣ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ಆ ನಿಟ್ಟಿನಲ್ಲಿ ಸರ್ಕಾರ ಮತ್ತು ಸ್ಥಳೀಯ ಆಡಳಿತ ಸಮನ್ವಯತೆ ಮತ್ತು ದೂರದೃಷ್ಟಿಯಿಂದ ಕಾರ್ಯ ನಿರ್ವಹಣೆ ಅಗತ್ಯ ಎಂದರು.

       ಸ್ಥಳೀಯರೊಬ್ಬರು ಮಾತನಾಡಿ ವಸತಿ ಯೋಜನೆಯಡಿ ಸರ್ಕಾರದಿಂದ ನೀಡುವ ಅನುದಾನ ಸಾಲುವುದಿಲ್ಲ, ಆದ್ದರಿಂದ 5 ಲಕ್ಷ ರೂ ವರೆಗೆ ಹೆಚ್ಚಿಸಬೇಕು ಎಂದು ಅವರು ಕೋರಿದರು. 

        ಗ್ರಾ.ಪಂ.ಮಾಜಿ ಸದಸ್ಯರಾದ ಕುಸುಮಾವತಿ, ಹಮೀದ್, ಲಕ್ಷ್ಮಿ, ಜಿ.ಪಂ.ಸಹಾಯಕ ಕಾರ್ಯದರ್ಶಿ ಅಬ್ದುಲ್ ನಬಿ, ತಾ.ಪಂ.ಇಒ ಶೇಖರ್, ಆಡಳಿತಾಧಿಕಾರಿ ಪಿ.ಪಿ.ಕವಿತಾ, ಪಿಡಿಒ ವತ್ಸಲಾ, ಅಬ್ದುಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯರು ಇದ್ದರು.