ವರದಕ್ಷಿಣೆಗಾಗಿ ನಾಲ್ಕು ತಿಂಗಳ ಗರ್ಭಿಣಿ ಹತ್ಯೆ: ಕುಟುಂಬಕ್ಕೆ ತಿಳಿಸದೆ ಅತ್ತೆ–ಮಾವಂದಿರಿಂದ ರಹಸ್ಯ ಅಂತ್ಯಸಂಸ್ಕಾರ

ವರದಕ್ಷಿಣೆಗಾಗಿ ನಾಲ್ಕು ತಿಂಗಳ ಗರ್ಭಿಣಿ ಹತ್ಯೆ: ಕುಟುಂಬಕ್ಕೆ ತಿಳಿಸದೆ ಅತ್ತೆ–ಮಾವಂದಿರಿಂದ ರಹಸ್ಯ ಅಂತ್ಯಸಂಸ್ಕಾರ
Photo credit: TV09 (ಫೋಟೋ: ಗುಡಿಯಾ)

ಜೈಪುರ, ಜ.5: ವರದಕ್ಷಿಣೆಗಾಗಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಯುವತಿಯನ್ನು ಅತ್ತೆ–ಮಾವಂದಿರು ಕೊಲೆ ಮಾಡಿ, ಕುಟುಂಬದವರಿಗೆ ತಿಳಿಸದೆ ರಹಸ್ಯವಾಗಿ ಅಂತ್ಯಸಂಸ್ಕಾರ ನಡೆಸಿದ ಘಟನೆ ರಾಜಸ್ಥಾನದ ಧೋಲ್ಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಂತ್ರಸ್ತೆಯ ಪತಿಯನ್ನು ಬಂಧಿಸಿದ್ದು, ಇತರ ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಮೃತಳನ್ನು ಗುಡಿಯಾ (24) ಎಂದು ಗುರುತಿಸಲಾಗಿದೆ. ಇಂಚಾಪುರ ಗ್ರಾಮದ ನಿವಾಸಿ ಪಂಕಜ್ ಠಾಕೂರ್ ಅವರೊಂದಿಗೆ ಆಕೆಗೆ ಮೇ 28, 2025ರಂದು ವಿವಾಹವಾಗಿತ್ತು. ಶನಿವಾರ ಅತ್ತೆಯ ಮನೆಯಲ್ಲಿ ಗುಡಿಯಾಳನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಆರೋಪಿಗಳು ಶವವನ್ನು ಸಗಣಿಯಿಂದ ನಿರ್ಮಿಸಿದ ಚಿತೆಯ ಮೇಲೆ ಇರಿಸಿ, ಕುಟುಂಬದ ಅನುಮತಿ ಇಲ್ಲದೆ ಅಂತ್ಯಸಂಸ್ಕಾರ ನಡೆಸಿದ್ದಾರೆ.

ಗುಡಿಯಾಳ ಅಕ್ಕ ನೀಡಿದ ಮಾಹಿತಿಯ ಮೇರೆಗೆ ಈ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿದ ಕುಟುಂಬದವರು ಗ್ರಾಮಕ್ಕೆ ಧಾವಿಸಿದಾಗ, ಚಿತೆ ಇನ್ನೂ ಉರಿಯುತ್ತಿರುವುದನ್ನು ಕಂಡಿದ್ದಾರೆ. ಅವರು ಬೆಂಕಿಯನ್ನು ನೀರಿನಿಂದ ನಂದಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ತಂಡ ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿದ್ದು, ಡಿಎನ್‌ಎ ಪರೀಕ್ಷೆಗೆ ಅಗತ್ಯವಾದ ಮಾದರಿಗಳನ್ನು ಸಂಗ್ರಹಿಸಲಾಗಿದೆ.

ಮನೆಯೊಳಗೆ ರಕ್ತದ ಕಲೆಗಳು ಪತ್ತೆಯಾಗಿದ್ದು, ಕೊಡಲಿ, ಸನಿಕೆ, ಕೋಲು ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಯ ಪತಿ ಪಂಕಜ್ ಠಾಕೂರ್ ಅವರನ್ನು ಬಂಧಿಸಲಾಗಿದೆ. ಅತ್ತೆ–ಮಾವಂದಿರು ಸೇರಿದಂತೆ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಸಂತ್ರಸ್ತೆಯ ತಂದೆ ದೇವೇಂದ್ರ ಸಿಂಗ್ ಪರ್ಮಾರ್ ನೀಡಿದ ದೂರಿನ ಪ್ರಕಾರ, ಮದುವೆ ಸಂದರ್ಭದಲ್ಲಿ 15 ಲಕ್ಷ ರೂ. ನಗದು, ಬೈಕ್, ಗೃಹೋಪಯೋಗಿ ವಸ್ತುಗಳು ಹಾಗೂ ಆಭರಣಗಳನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಇದಾದರೂ ತೃಪ್ತರಾಗದ ಆರೋಪಿಗಳು ಕಾರು, ಚಿನ್ನದ ಸರ ಹಾಗೂ ಎಮ್ಮೆ ಸೇರಿದಂತೆ ಹೆಚ್ಚುವರಿ ವರದಕ್ಷಿಣೆಗೆ ಒತ್ತಾಯಿಸಿ, ಗುಡಿಯಾಳಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.