ಗೋಣಿಕೊಪ್ಪ:ಶಾಸಕ ಎ.ಎಸ್ ಪೊನ್ನಣ್ಣ ಅವರಿಗೆ ಸಚಿವ ನೀಡುವಂತೆ ಒತ್ತಾಯಿಸಿ ಪೌರ ಕಾರ್ಮಿಕರ ಸಂಘಟನೆ ಮೆರವಣಿಗೆ
ಗೋಣಿಕೊಪ್ಪ : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಪೌರ ಕಾರ್ಮಿಕರ ಸಂಘಟನೆ ಮೆರವಣಿಗೆ ನಡೆಸುವ ಮೂಲಕ ಒತ್ತಾಯಿಸಿದರು.
ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೂಕಿನ ಪೌರಕಾರ್ಮಿಕರ ಸಂಘಟನೆ ಪೊನ್ನಣ್ಣ ಅವರ ಭಾವಚಿತ್ರವನ್ನು ಪ್ರದರ್ಶಿಸಿ, ದೀನ, ದಲಿತ ನೊಂದವರ ಪರ ಧ್ವನಿಯಾಗಿರುವ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಘೋಷಣೆಗಳನ್ನು ಹಾಕಿದರು. ಗೋಣಿಕೊಪ್ಪದ ಪಾಲಿಬೆಟ್ಟ ತಿರುವಿನಿಂದ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿದ ಪೌರಕಾರ್ಮಿಕರು ಬಸ್ ನಿಲ್ದಾಣದಲ್ಲಿ ಮಾನವ ಸರಪಣಿ ರಚಿಸಿ ಪೊನ್ನಣ ಅವರ ಸೇವೆಯನ್ನು ಶ್ಲಾಘಿಸಿದರು.
ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು, ಪೊನ್ನಣ್ಣ ಅವರನ್ನು ವಿಶೇಷವಾಗಿ ಪರಿಗಣಿಸಿ, ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯದ ಮನವಿಯನ್ನು ಸಲ್ಲಿಸಿದರು. ರಾಜ್ಯ ಪೌರಕಾರ್ಮಿಕರ ಸಂಘದ ಅಧ್ಯಕ್ಷ ರಾಜು ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ಕುಮಾರ್ ಮುಂದಾಳತ್ವದಲ್ಲಿ ಮೆರವಣಿಗೆ ನಡೆಯಿತು.
ಸಮಾಜದ ತಳವರ್ಗದವರ ಬಗ್ಗೆ ವಿಶೇಷವಾದ ಕಾಳಜಿ ಹೊಂದಿರುವ ಶಾಸಕರು ಸಚಿವರಾದರೆ, ಬಡವರು, ಶ್ರಮಿಕ ಜೀವಿಗಳು ಪೌರಕಾರ್ಮಿಕರಿಗೆ ಸೂಕ್ತ ಸವಲತ್ತುಗಳನ್ನು ಒದಗಿಸಿಕೊಡುವ ನ್ಯಾಯ ಬದ್ಧ ಸೇವೆಯನ್ನು ಮುಂದುವರಿಸುತ್ತಾರೆ. ಈ ಬೆಳವಣಿಗೆ ಅಭಿವೃದ್ಧಿಗೂ ಅನುಕೂಲಕರವಾಗಲಿದೆ. ಇಂತಹ ಪ್ರಾಮಾಣಿಕ ರಾಜಕಾರಣಿಯನ್ನು ಸಚಿವ ಸ್ಥಾನಕೇರಿಸುವ ಮೂಲಕ ಈ ನಾಡಿಗೆ ವಿಶೇಷ ಕೊಡುಗೆಯನ್ನು ಕಾಂಗ್ರೆಸ್ ಸರ್ಕಾರ ನೀಡಬೇಕು ಎಂದು ಮನವಿ ಮಾಡಿದರು. ತಾಲೂಕಿನ ಪೌರ ಕಾರ್ಮಿಕರು ಹಾಜರಿದ್ದರು.