ಬಚ್ಚಲು ಮನೆ ಶುದ್ಧೀಕರಣಕ್ಕೆ ಇಟ್ಟಿದ್ದ ಆ್ಯಸಿಡ್ ಆಕಸ್ಮಿಕ ಸೇವನೆ: 2 ವರ್ಷದ ಬಾಲಕ ಸಾವು
ಲಕ್ನೋ (ಉತ್ತರ ಪ್ರದೇಶ): ಮನೆಯ ಸ್ನಾನಗೃಹದಲ್ಲಿ ಶುದ್ಧೀಕರಣಕ್ಕಾಗಿ ಇಡಲಾಗಿದ್ದ ಆ್ಯಸಿಡ್ ಅನ್ನು ಆಕಸ್ಮಿಕವಾಗಿ ಕುಡಿದ ಪರಿಣಾಮ ಎರಡು ವರ್ಷದ ಬಾಲಕ ಮೃತಪಟ್ಟಿರುವ ದುರ್ಘಟನೆ ಶನಿವಾರ ಇಲ್ಲಿ ನಡೆದಿದೆ.
ನಗರದ ಭಾರಾಪುರ್ ಪ್ರದೇಶದ ಭರತ್ ನಗರದಲ್ಲಿ ಈ ಘಟನೆ ನಡೆದಿದ್ದು, ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕನು ಸ್ನಾನಗೃಹದೊಳಗೆ ಹೋಗಿ ಅಲ್ಲಿ ಇಡಲಾಗಿದ್ದ ಆ್ಯಸಿಡ್ ಬಾಟಲಿಯನ್ನು ತೆಗೆದುಕೊಂಡು ಸೇವಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ್ಯಸಿಡ್ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡ ಮಗುವನ್ನು ಕುಟುಂಬದವರು ತಕ್ಷಣವೇ ನೆರೆಹೊರೆಯವರ ನೆರವಿನಿಂದ ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿ (KGMU) ಟ್ರಾಮಾ ಸೆಂಟರ್ಗೆ ದಾಖಲಿಸಿದರು. ವೈದ್ಯರು ಮಗುವಿನ ಜೀವ ಉಳಿಸಲು ಶ್ರಮಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಘಟನೆಯ ಕುರಿತು ಮಾತನಾಡಿದ ಪೊಲೀಸ್ ಅಧಿಕಾರಿ ಶಿವಾನಂದ್ ಮಿಶ್ರಾ, ಇದು ಸಂಪೂರ್ಣವಾಗಿ ಆಕಸ್ಮಿಕವಾಗಿ ಸಂಭವಿಸಿದ ಘಟನೆ ಎಂದು ತಿಳಿಸಿದರು.
ಮೃತ ಬಾಲಕನ ತಂದೆ ಜೈ ನಾರಾಯಣ್ ಕಶ್ಯಪ್ ಅವರು ಲಕ್ನೋ ಅಭಿವೃದ್ಧಿ ಪ್ರಾಧಿಕಾರದಲ್ಲಿ (LDA) ಕಂಪ್ಯೂಟರ್ ಆಪರೇಟರ್ ಆಗಿದ್ದಾರೆ ಎಂದು ತಿಳಿದು ಬಂದಿದೆ.