ಸ್ನೇಹಿತೆಯ ರೂಮಿಗೆ ಕರೆದುಕೊಂಡು ಹೋಗಿ ವಿದ್ಯಾರ್ಥಿನಿಯ ಕೊ*ಲೆ!
ಬೆಂಗಳೂರು: ನಗರದ ಉತ್ತರ ತಾಲ್ಲೂಕಿನ ತಮ್ಮೇನಹಳ್ಳಿಯಲ್ಲಿ ಬಿಬಿಎ ವಿದ್ಯಾರ್ಥಿನಿಯೊಬ್ಬಳನ್ನು ಕ್ರೂರವಾಗಿ ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದೆ. ದೇವಿಶ್ರೀ (21) ಕೊಲೆಯಾದ ಯುವತಿ ಎಂದು ತಿಳಿದು ಬಂದಿದೆ.
ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯ ಬಿಕ್ಕಿಂವರೀಪಲ್ಲಿ ಗ್ರಾಮದ ಮೂಲದ ದೇವಿಶ್ರೀ, ಕಳೆದ ಮೂರು ವರ್ಷಗಳಿಂದ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಭಾನುವಾರ ಬೆಳಿಗ್ಗೆ ದೇವಿಶ್ರೀ ತನ್ನ ಪರಿಚಿತ ಪ್ರೇಮ್ ವರ್ಧನ್ ಜೊತೆ ಸ್ನೇಹಿತೆ ರೂಮಿಗೆ ತೆರಳಿದ್ದಳು. ರಾತ್ರಿ ಅವಳು ಮನೆಗೆ ಮರಳದ ಕಾರಣ ಕುಟುಂಬಸ್ಥರಿಗೆ ಶಂಕೆ ಮೂಡಿದ್ದು, ಸೋಮವಾರ ಬೆಳಗ್ಗೆ ಆಕೆಯ ಮೃತದೇಹ ಪತ್ತೆಯಾಗುವ ಮೂಲಕ ಕೊಲೆ ಬೆಳಕಿಗೆ ಬಂದಿದೆ.
ಕೃತ್ಯ ಎಸಗಿ ಪರಾರಿಯಾಗಿರುವ ಪ್ರೇಮ್ ವರ್ಧನ್ ಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಮೃತ ದೇವಿಶ್ರೀ ರೆಡ್ಡಪ್ಪ–ಜಗದಂಭ ದಂಪತಿಯ ಚಿಕ್ಕ ಮಗಳು. ಉತ್ತಮ ವಿದ್ಯಾಭ್ಯಾಸಕ್ಕೆ ಆಕೆಯನ್ನು ಬೆಂಗಳೂರಿಗೆ ಕಳುಹಿಸಿದ್ದ ಕುಟುಂಬ ಈಗ ಆಘಾತದಲ್ಲಿ ಮುಳುಗಿದೆ. “ಭಾನುವಾರ ಬೆಳಗ್ಗೆ 11 ಗಂಟೆಗೆ ತಂದೆಯೊಂದಿಗೆ ಮಾತಾಡಿದ್ದಳು. ನಂತರ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಸ್ನೇಹಿತೆಯ ರೂಮಿಗೆ ಹೋಗಿದ್ದಾಳೆ ಎಂದೇ ತಿಳಿದುಬಂದಿತ್ತು. ಏನಾಗಿದೆ ನಮಗೆ ತಿಳಿಯದು. ಮಗಳಿಗೆ ನ್ಯಾಯ ಬೇಕು,” ಎಂದು ದೇವಿಶ್ರೀಯ ದೊಡ್ಡಮ್ಮ ಬೇಸರ ವ್ಯಕ್ತಪಡಿಸಿದರು.
ಯುವತಿಯ ಕೊಲೆಗೆ ನಿಖರ ಕಾರಣವೇನು? ಪ್ರೇಮ್ ವರ್ಧನ್ ಪೂರ್ವನಿಯೋಜಿತವಾಗಿ ಕರೆದುಕೊಂಡು ಹೋಗಿದ್ದನಾ? ಇಬ್ಬರ ನಡುವೆ ಏನಾದರೂ ವೈಮನಸ್ಸು ಇತ್ತೇ? ಎಂಬ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.