ಬೈಕಂಪಾಡಿಯಲ್ಲಿ ಕೇರಳ ಚಿನ್ನದ ವ್ಯಾಪಾರಿಯ ದರೋಡೆ ; ತಲೆಮರೆಸಿಕೊಂಡಿರುವ ಆರೋಪಿಗಳ ಫೋಟೋ ಬಿಡುಗಡೆ : ಕೊಡಗಿನ ಏಳು ಆರೋಪಿಗಳು
ಕೋವರ್ ಕೊಲ್ಲಿ ಇಂದ್ರೇಶ್
ಮಂಗಳೂರು, ಜುಲೈ 6: ಚಿನ್ನದ ವ್ಯಾಪಾರಿಯನ್ನು ದರೋಡೆಗೈದ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಆರೋಪಿಗಳ ಗುರುತು ಪತ್ತೆಹಚ್ಚಿದ್ದು ಬಂಧನಕ್ಕಾಗಿ ಕೇರಳ ಮತ್ತು ಕೊಡಗಿನಲ್ಲಿ ಬಲೆ ಬೀಸಿದ್ದಾರೆ. ಇದೇ ವೇಳೆ, ಕೃತ್ಯದಲ್ಲಿ ಭಾಗಿಯಾದ ನಟೋರಿಯಸ್ ಆರೋಪಿಗಳ ಫೋಟೋ ಬಿಡುಗಡೆ ಮಾಡಿದ್ದು ಇವರ ಪತ್ತೆಗಾಗಿ ಸಾರ್ವಜನಿಕರ ಸಹಾಯ ಯಾಚಿಸಿದ್ದಾರೆ.
ಪಾಂಡಿಚೇರಿ ಮೂಲದ ಶಿಬಿನ್ ಗಂಗಾಧರನ್ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗಿದ್ದು ಆತನದ್ದು ಸೇರಿ ಒಟ್ಟು 9 ಮಂದಿ ಆರೋಪಿಗಳ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಕೇರಳದ ವಿವಿಧ ಜಿಲ್ಲೆಗಳಿಗೆ ಸೇರಿದ ಶ್ರೀರಾಗ್, ಅತುಲ್, ಮಿಥುನ್ಲಾಲ್, ಅಜೀರ್ ತರಾಯಿಲ್, ವೈಶಾಕ್, ಅಸೀರ್ ಪಯ್ಯನ್ನೂರ್, ಪ್ರಣವ್, ವಿಜಿಲ್ ಅಂಜರಕಂಡಿ, ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಗ್ರಾಮದ ಎಂ ಎನ್ ಉಬೈದ್, ಹಾಕತ್ತೂರು ತೊಂಬತ್ತು ಮನೆ ಗ್ರಾಮದ ಮೊಯ್ದು ಅಬ್ಬಾಸ್ ಎಂಬಾತನ ಪುತ್ರ ಫಿರೋಜ್, ಪೊನ್ನಂಪೇಟೆ ಮಾಪಿಳ್ಳೆ ತೋಡು ನಿವಾಸಿ ಜಿಯಾದ್, ಬೇಗೂರು ಸಮೀಪದ ಚಿನಿವಾಡ ಗ್ರಾಮದ ಅಲೀರ ಜಮೀರ್ ಎಂಬವರು ಆರೋಪಿಗಳು ಎಂದು ಗುರುತಿಸಲಾಗಿದೆ.
ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿರುವ ಕಾರಣ ಆರೋಪಿಗಳ ಬಂಧನಕ್ಕೆ ಸಹರಿಸುವಂತೆ ಮಂಗಳೂರು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ, ಆರೋಪಿಗಳ ಬಗ್ಗೆ ಮಾಹಿತಿ ನೀಡುವವರಿಗೆ ಸೂಕ್ತ ಬಹುಮಾನ ನೀಡಲಾಗುವುದಲ್ಲದೆ ಅವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ.
ಕರ್ನಾಟಕ ಹಾಗೂ ಕೇರಳದಲ್ಲಿ ಆರೋಪಿಗಳ ಫೋಟೋ ಹಾಗೂ ಹೆಸರನ್ನು ಬಿಡುಗಡೆ ಮಾಡಲಾಗಿದ್ದು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಆರೋಪಿಗಳ ಫೋಸ್ಟರ್ ಅಂಟಿಸಲು ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಮಂಗಳೂರು ಪೊಲೀಸರು ಕೇರಳ, ತಮಿಳುನಾಡು ಹಾಗೂ ಕೊಡಗು ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು ಹಲವು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಆರೋಪಿಗಳ ಸುಳಿವು ಸಿಗದ ಕಾರಣ ಫೋಟೊ ಬಿಡುಗಡೆ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಒಟ್ಟು 16 ಆರೋಪಿಗಳನ್ನು ಪೋಲೀಸರು ಗುರುತಿಸಿದ್ದಾರೆ . ಇವರಲ್ಲಿ ಕೇರಳದವರು 9 ಜನ ಆರೋಪಿಗಳಿದ್ದು ಕೊಡಗಿನ 7 ಜನ ಆರೋಪಿಗಳಿದ್ದು ಈಗಾಗಲೇ ಕೇರಳದ ಓರ್ವ ಹಾಗೂ ಕೊಡಗಿನ ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತ ಮೂವರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಿ 10 ದಿನಗಳ ಪೋಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಬಂಧಿತರು ನೀಡಿರುವ ಸುಳಿವಿನ ಮೇರೆಗೆ ಉಳಿದ ಆರೋಪಿಗಳ ಗುರುತು ಪತ್ತೆ ಹಚ್ಚಲಾಗಿದೆ.
ಆರೋಪಿಗಳೆಲ್ಲರೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ವಿವಿಧ ಸ್ಥಳಗಳಲ್ಲಿ ಅಡಗಿಕೊಂಡಿದ್ದು ಮೂರು ಪೋಲೀಸ್ ತಂಡಗಳು ಮೂರೂ ರಾಜ್ಯಗಳಲ್ಲಿ ತೀವ್ರ ಕಾರ್ಯಾಚರಣೆ ನಡೆಸುತ್ತಿವೆ ಎಂದು ಪೋಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದರು. ಆರೋಪಿಗಳ ಬಂಧನಕ್ಕೆ ಕಾರಣವಾಗುವ ಖಚಿತ ಸುಳಿವು ನೀಡುವ ಸಾರ್ವಜನಿಕರಿಗೆ ಇಲಾಖೆಯ ವತಿಯಿಂದ ಸೂಕ್ತ ಬಹುಮಾನ ನೀಡಲಾಗುವುದಲ್ಲದೆ ಅವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಅವರು ತಿಳಿಸಿದರು.
ಕೇರಳದ ಕಣ್ಣೂರು ಪಯ್ಯನ್ನೂರು ಚಿನ್ನದ ವ್ಯಾಪಾರಿ ವಿಕಾಸ್ ಸುಬ್ಬರಾವ್ ಧನವಡೆ(44) ಅವರು ಪತ್ನಿ ಮತ್ತು ಮಗನೊಂದಿಗೆ ಮಹಾರಾಷ್ಟ್ರದ ಸಾಂಗ್ಲಿಗೆ ತೆರಳಿ ಮದುವೆ ಮುಗಿಸಿಕೊಂಡು ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬರುತ್ತಿದ್ದಾಗ ಜೂನ್ 29ರಂದು ನಸುಕಿನ 2.45ಕ್ಕೆ ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರು ಕಾರುಗಳಲ್ಲಿ ಬಂದ 10-12 ಮಂದಿ ಮುಸುಕುಧಾರಿಗಳು ಕಾರನ್ನು ಅಡ್ಟಗಟ್ಟಿ ವಿಕಾಸ್ ಅವರನ್ನು ಹೊರಗೆಳೆದು ಪತ್ನಿ ಮತ್ತು 14 ವರ್ಷದ ಮಗನನ್ನು ಕಾರು ಸಮೇತ ಅಪಹರಣ ಮಾಡಿದ್ದರು.
ಕೆಲವು ಕಿಲೊಮೀಟರ್ ದೂರ ಸಾಗಿದ ನಂತರ ಪತ್ನಿಯ ಬಳಿಯಿದ್ದ 180 ಗ್ರಾಮ್ ಚಿನ್ನದ ಆಭರಣ , 2 ಮೊಬೈಲ್ ಫೋನ್ ಮತ್ತು ₹ 3 ಲಕ್ಷದ ವಾಹನವನ್ನು ದರೋಡೆ ಮಾಡಿ ಅವರನ್ನು ಇಳಿಸಿ ಕಾರ್ ಸಹಿತ ಪರಾರಿ ಆಗಿದ್ದರು.
ದರೋಡೆ ಮಾಡಿದ ವಸ್ತುಗಳ ಒಟ್ಟು ಮೌಲ್ಯ 23.10 ಲಕ್ಷ ರೂಪಾಯಿಗಳೆಂದು ಪೋಲೀಸರು ಅಂದಾಜಿಸಿದ್ದರು. ಮರುದಿನ ದರೋಡೆ ಮಾಡಿದ್ದ ನಂಬರ್ ಪ್ಲೇಟ್ ಕಿತ್ತ ಕಾರು ಬಂಟ್ವಾಳ ತಾಲ್ಲೂಕು ಪಚ್ಚಿನಡ್ಕದಲ್ಲಿ ಪತ್ತೆಯಾಗಿತ್ತು. ವ್ಯಾಪಾರಿಯು ಮಹಾರಾಷ್ಟ್ರದಿಂದ ಅಪಾರ ಪ್ರಮಾಣದ ಚಿನ್ನವನ್ನು ಕಾರಿನಲ್ಲಿ ಕೇರಳಕ್ಕೆ ಸಾಗಿಸುತ್ತಿರಬಹುದೆಂಬ ಅಂದಾಜಿನಲ್ಲಿ ಆರೋಪಿಗಳು ಸಂಚು ರೂಪಿಸಿ ದರೋಡೆ ಮಾಡಿದ್ದರು.
ಪೋಲೀಸ್ ತನಿಖೆಯ ಪ್ರಕಾರ ಆರೋಪಿಗಳು ಕೆಲ ತಿಂಗಳುಗಳಿಂದಲೇ ಚಿನ್ನದ ವ್ಯಾಪಾರಿಯ ದರೋಡೆಗೆ ಸಂಚು ರೂಪಿಸಿದ್ದರು. ಆದರೆ ದರೋಡೆ ಯಶಸ್ವಿ ಆಗಿದ್ದರೂ ಇವರ ನಿರೀಕ್ಷೆಯಂತೆ ಕೆಜಿಗಟ್ಟಲೆ ಚಿನ್ನ ಸಿಕ್ಕಿರಲಿಲ್ಲ. ಒಟ್ಟು ದರೋಡೆಗೆ ನಾಲ್ಕು ವಾಹನಗಳನ್ನು ಬಳಸಿಕೊಂಡಿದ್ದು ಅದರಲ್ಲಿ ಒಂದು ಇನ್ನೋವಾ ಕ್ರಿಸ್ಟ ಕಾರನ್ನು ವಶಕ್ಕೆ ಪಡೆಯಲಾಗಿದೆ. ಪೋಲೀಸರು ತನಿಖೆ ಮುಂದುವರೆಸಿದ್ದಾರೆ.
What's Your Reaction?
Like
3
Dislike
0
Love
1
Funny
1
Angry
1
Sad
1
Wow
0

