ಮಗಳ ವಿಚಾರದಲ್ಲಿ ಜಗಳ: ಮನೆಮಾಲೀಕರ ಹೆಬ್ಬೆರಳು ಕಚ್ಚಿ ತುಂಡರಿಸಿದ ಬಾಡಿಗೆಗಿದ್ದ ಮಹಿಳೆ!
ಶಿಬ್ಪುರ (ಹೌರಾ), ಡಿ.05: ಮಗಳ ವಿಷಯವಾಗಿ ತಲೆದೋರಿದ ವಾಗ್ವಾದ ಉಗ್ರಗೊಂಡ ಪರಿಣಾಮ, ಬಾಡಿಗೆಗಿದ್ದ ಮಹಿಳೆಯೊಬ್ಬರು ಮನೆಮಾಲೀಕರ ಹೆಬ್ಬೆರಳನ್ನು ಕಚ್ಚಿ ತುಂಡರಿಸಿದ ಘಟನೆ ಇಲ್ಲಿ ನಡೆದಿದೆ.
ರಝಿಯಾ ಖಾತೂನ್ ಮೂರಂತಸ್ತಿನ ಮನೆಯಲ್ಲಿ ಕೆಲವು ವರ್ಷಗಳಿಂದ ಬಾಡಿಗೆಗೆ ವಾಸವಿದ್ದಳು. ಮಾಲೀಕರಾಗಿದ್ದ ಕೈನತ್ ಜಾನ್ ಹಾಗೂ ಬಾಡಿಗೆಗಿದ್ದ ರಝಿಯಾ ಕುಟುಂಬದ ನಡುವೆ ಆಗಾಗ ಕಲಹಗಳು ನಡೆಯುತ್ತಿದ್ದವು. ಮಂಗಳವಾರ ಮಧ್ಯಾಹ್ನ ಕೈನತ್ ಅವರ ಮಗಳು ಟೆರೇಸ್ನಲ್ಲಿ ಆಟವಾಡುತ್ತಿದ್ದಾಗ, ಮನೆಗೆ ನುಗ್ಗಿದ ರಝಿಯಾ, “ನಿನ್ನ ಮಗಳು ನನ್ನ ಮೇಲೆ ಹಲ್ಲೆ ಮಾಡಿದ್ದಾಳೆ” ಎಂದು ಆರೋಪಿಸಿ ಕೈನತ್ ಹಾಗೂ ಕುಟುಂಬದವರ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಗದ್ದಲದ ನಡುವೆ ಆರೋಪಿ ರಝಿಯಾ, ಕೈನತ್ ಅವರ ಬಲಗೈ ಹೆಬ್ಬೆರಳನ್ನು ಹಲ್ಲಿನಿಂದ ಕಚ್ಚಿ ಸುಮಾರು ಎರಡು ನಿಮಿಷಗಳ ಕಾಲ ಹಿಡಿದಿದ್ದಳು ಪೊಲೀಸರು ತಿಳಿಸಿದ್ದಾರೆ. ಆರೋಪಿ ರಝಿಯಾ ಕೈ ಬೆರಳು ಕಚ್ಚಿ ಬಿಡುವಷ್ಟರಲ್ಲಿ ಹೆಬ್ಬೆರಳು ಸಂಪೂರ್ಣವಾಗಿ ತುಂಡಾಗಿತ್ತು ಎಂದು ಕೈನತ್ ಜಾನ್ ತಿಳಿಸಿದ್ದಾರೆ.
ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ವೈದ್ಯರು ಮರುಜೋಡಿಸಲು ಮಾಡಿದ ಪ್ರಯತ್ನ ವಿಫಲವಾಗಿದೆ. ಕೈನತ್ ಅವರನ್ನು ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ರಜಿಯಾ ಖಾತೂನ್ ವಿರುದ್ಧ ಎಫ್ಐಆರ್ ದಾಖಲಿಸಿರುವ ಪೊಲೀಸರು, ಘಟನೆ ಬಳಿಕ ಪರಾರಿಯಾಗಿರುವ ಆಕೆಯ ಪತ್ತೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.