ಬೆಂಗಳೂರು ವಿದ್ಯಾರ್ಥಿನಿ ಹತ್ಯೆ ಪ್ರಕರಣ: ತಿರುಪತಿಯಲ್ಲಿ ಮುಡಿಕೊಟ್ಟು ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಬಂಧನ
ಬೆಂಗಳೂರು: ನಗರದ ತಮ್ಮೇನಹಳ್ಳಿಯಲ್ಲಿ ಬಿಬಿಎಂ ವಿದ್ಯಾರ್ಥಿನಿ ದೇವಿಶ್ರೀ ಹತ್ಯೆ ಪ್ರಕರಣದಲ್ಲಿ ಆಕೆಯ ಸ್ನೇಹಿತ ಪ್ರೇಮ್ ವರ್ಧನ್ ನನ್ನು ಬಂಧಿಸಲಾಗಿದೆ. ಕೊಲೆ ಮಾಡಿದ ನಂತರ ತಿರುಪತಿಗೆ ತೆರಳಿ ಮುಡಿ ಕೊಟ್ಟು ಗುರುತು ಮರೆಮಾಡಲು ಆರೋಪಿಯು ಯತ್ನಿಸಿದ್ದಾನೆ ಎಂದು ತನಿಖೆಯಿಂದ ಬಹಿರಂಗವಾಗಿದೆ.
ಆಂಧ್ರ ಮೂಲದ ದೇವಿಶ್ರೀ (21) ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದರು. ಭಾನುವಾರ ಬೆಳಿಗ್ಗೆ ತಂದೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದ ಆಕೆ ನಂತರ ಕರೆ ಸ್ವೀಕರಿಸದಿದ್ದರಿಂದ ಪೋಷಕರಲ್ಲಿ ಅನುಮಾನ ಮೂಡಿತ್ತು. ಸ್ನೇಹಿತೆಯೊಂದಿಗೆ ಸಂಪರ್ಕಿಸಿ ಮಾಹಿತಿ ಪಡೆದ ಪೋಷಕರು ರೂಮಿಗೆ ತೆರಳಿದಾಗ ಯುವತಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದಳು.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ದೇವಿಶ್ರೀ ಮತ್ತು ಪ್ರೇಮ್ ವರ್ಧನ್ ದ್ವಿತಿಯ ಪಿಯುಸಿ ವರೆಗೆ ಒಂದೇ ಕಾಲೇಜಿನಲ್ಲಿ ಓದಿದ್ದವರು. ಇಬ್ಬರೂ ಆಂಧ್ರ ಮೂಲದವರೇ ಆಗಿದ್ದು, ಆಪ್ತತೆ ಪ್ರೇಮಕ್ಕೆ ತಿರುಗಿತ್ತು. ಬೆಂಗಳೂರಿಗೆ ಬಂದ ಬಳಿಕ ದೇವಿಶ್ರೀ ಮತ್ತೊಬ್ಬ ಯುವಕನೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಪ್ರೇಮ್ ಜಗಳವಾಡಿದ್ದನೆನ್ನಲಾಗಿದೆ.
ಭಾನುವಾರ ದೇವಿಶ್ರೀ ಸ್ನೇಹಿತೆಯ ರೂಮ್ಗೆ ಬಂದಿದ್ದಾಗ ಅಲ್ಲಿಗೆ ಭೇಟಿ ನೀಡಿದ ಪ್ರೇಮ್ ವರ್ಧನ್ ವಾಗ್ವಾದ ಮಾಡಿದ್ದ. ಬಳಿಕ ಯುವತಿಯನ್ನು ಹತ್ಯೆಗೈದಿದ್ದಾನೆ. ಬಳಿಕ ಮೆಟ್ರೋ ಮೂಲಕ ಮೆಜೆಸ್ಟಿಕ್ ಬಂದು ಅಲ್ಲಿಂದ ತಿರುಪತಿಗೆ ತೆರಳಿದನು. ತಿರುಪತಿಯಲ್ಲಿ ಮುಡಿ ಕೊಡುವ ಮೂಲಕ ಪೊಲೀಸರಿಗೆ ತಪ್ಪಿಸಿಕೊಳ್ಳಲು ಯತ್ನಿಸಿದರೂ, ತನಿಖಾ ತಂಡ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದೆ ಎಂದು ತಿಳಿದು ಬಂದಿದೆ.