ಕಾಫಿ ಕಳವು ಪ್ರಕರಣ: ಕೇವಲ ಎರಡು ಗಂಟೆಯಲ್ಲಿ ಮೂವರ ಬಂಧನ
ಮಡಿಕೇರಿ ಫೆ. 23: ಕಾಫಿ ಕಳವು ಪ್ರಕರಣದ ಬಗ್ಗೆ ದೂರು ದ್ದ ದಾಖಲಾದ 2 ಗಂಟೆಯಲ್ಲಿ ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಮಾಲು ಸಮೇತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರದಂದು ಸುಂಟಿಕೊಪ್ಪ ಸಮೀಪದ ಕಾನ್ಬೈಲ್ ಜಿ.ಜಿ. ರಾಜೇಂದ್ರಕುಮಾರ್ ಅವರ ತೋಟ ಕಾಫಿ ಕಣದಲ್ಲಿ ಇರಿಸಿದ್ದ 128 ಕೆ.ಜಿ ಚೆರಿ ಕಾಫಿ ಬೆಳಿಗ್ಗೆ 4 ಗಂಟೆಯ ವೇಳೆಯಲ್ಲಿ ಕಳ್ಳತನವಾಗಿತ್ತು. ಈ ಕುರಿತು ತೋಟದ ವ್ಯವಸ್ಥಾಪಕರು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಂತೆ ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ಎಂ.ಎ. ದಿಕ್ಷೀತ್, ಕೆ. ಮನೋಜ್ ಹಾಗೂ ವಿನೋದ್ ಕುಮಾರ್ ಅವರುಗಳನ್ನು ಮಾಲು ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳತನಕ್ಕೆ ಬಳಸಿದ ಕಾರು. ದ್ವಿಚಕ್ರ ವಾಹನವನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕುಶಾಲನಗರ ಡಿವೈಎಸ್ಪಿ ಚಂದ್ರಶೇಖರ್, ವೃತ್ತನಿರೀಕ್ಷಕ ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ . ಮೋಹನ್ರಾಜ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಎಸ್ಐ ಬಸಪ್ಪ, ಸಿಬ್ಬಂದಿಗಳಾದ ಪ್ರವೀಣ್, ಶಶಿಕುಮಾರ್, ಕಿರಣ್, ಪುನೀತ್, ಧನಲಕ್ಷ್ಮೀ ಸೇರಿದಂತೆ ಮತ್ತಿತರರು ಇದ್ದರು.