ಮಗುವಿನ ಗಾಯಕ್ಕೆ ಹೊಲಿಗೆ ಬದಲು ಫೆವಿಕ್ವಿಕ್! ವೈದ್ಯರ ನಿರ್ಲಕ್ಷ್ಯ ಆರೋಪ
ಮೀರತ್ (ಉತ್ತರ ಪ್ರದೇಶ), ನ.20: ತಲೆಗೆ ಗಾಯಗೊಂಡಿದ್ದ ಮಗುವಿಗೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಅಂಟಿಸಿ ‘ಚಿಕಿತ್ಸೆ’ ನೀಡಿದ ಖಾಸಗಿ ಆಸ್ಪತ್ರೆಯ ವೈದ್ಯರ ನಡೆ ಮೀರತ್ನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕುಟುಂಬಸ್ಥರ ದೂರು ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ವೈದ್ಯಕೀಯ ತನಿಖಾ ಸಮಿತಿಯನ್ನೂ ರಚಿಸಲಾಗಿದೆ. ವಿಷಯವನ್ನು ಪೋಷಕರು ಮುಖ್ಯಮಂತ್ರಿ ಕಚೇರಿಗೂ ತಲುಪಿದ್ದಾರೆ.
ಸರ್ದಾರ್ ಜಸ್ಪಿಂದರ್ ಸಿಂಗ್ ಅವರ ಬಾಲಕ ಮನೆಯಲ್ಲಿ ಆಟವಾಡುವಾಗ ತಲೆಯು ಮೇಜಿನ ತುದಿಗೆ ಬಡಿದು ರಕ್ತಸ್ರಾವವಾಗಿತ್ತು. ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದ ಪೋಷಕರು, ಅಲ್ಲಿ ವೈದ್ಯರು ಹೊಲಿಗೆ ಹಾಕುವ ಬದಲು ಕೇವಲ 5 ರೂ. ಬೆಲೆಯ ಫೆವಿಕ್ವಿಕ್ ಟ್ಯೂಬ್ ತಂದು ಗಾಯದ ಮೇಲೆ ಅಂಟಿಸಿದ್ದಾರೆ ಎಂದು ಆರೋಪಿಸಿದ್ದಾರೆ.
‘ಸ್ವಲ್ಪ ಹೊತ್ತಿನಲ್ಲೇ ನೋವು ಕಡಿಮೆಯಾಗುತ್ತದೆ’ ಎಂದು ವೈದ್ಯರು ಭರವಸೆ ನೀಡಿದರೂ, ಮಗು ರಾತ್ರಿ ಪೂರ್ತಿ ಅಳುತ್ತಲೇ ಇದ್ದಿತು. ನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ಮರುದಿನ ಬೆಳಿಗ್ಗೆ ಕುಟುಂಬಸ್ಥರು ಮಗುವನ್ನು ಇನ್ನೊಂದು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಗಾಯಕ್ಕೆ ಅಂಟಿಕೊಂಡಿದ್ದ ಗಮ್ ತೆಗೆಯಲು ವೈದ್ಯರು ಸುಮಾರು ಮೂರು ಗಂಟೆಗಳ ಕಾಲ ಶ್ರಮಿಸಿದ ನಂತರ, ನಾಲ್ಕು ಹೊಲಿಗೆ ಹಾಕಲಾಯಿತು.
ಗಾಯದ ಮೇಲೆ ಅಂಟಿಸಿದ್ದ ಫೆವಿಕ್ವಿಕ್ ಕಣ್ಣಿಗೆ ಹರಿದಿದ್ದರೆ ಗಂಭೀರ ಅಪಾಯ ಉಂಟಾಗಬಹುದಿತ್ತು ಎಂದು ವೈದ್ಯರು ಎಚ್ಚರಿಸಿದ್ದಾರೆ. “ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯದೇ ಇದ್ದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿತ್ತು” ಎಂದು ಕುಟುಂಬಸ್ಥರು ದೂರುದಲ್ಲಿ ತಿಳಿಸಿದ್ದಾರೆ.
ಘಟನೆಯ ಗಂಭೀರತೆಯನ್ನು ಮನಗಂಡ ಅಧಿಕಾರಿಗಳು ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.