ಚೆನ್ನಯ್ಯನಕೋಟೆ ಬಳಿ ಕಾಡಾನೆಗಳನ್ನು ಅರಣ್ಯಕ್ಕೆ ಹಿಮ್ಮೆಟ್ಟಿಸಿದ ಅರಣ್ಯ ಇಲಾಖೆ

ಚೆನ್ನಯ್ಯನಕೋಟೆ ಬಳಿ ಕಾಡಾನೆಗಳನ್ನು ಅರಣ್ಯಕ್ಕೆ ಹಿಮ್ಮೆಟ್ಟಿಸಿದ ಅರಣ್ಯ ಇಲಾಖೆ

ಸಿದ್ದಾಪುರ:-ಚೆನ್ನಯ್ಯನಕೋಟೆ ಗ್ರಾಮದ ಕ್ರೀಸ್ಟಾಲ್ ಎಸ್ಟೇಟ್ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಮೀರ ಗುಂಪಿನ ಏಳು ಕಾಡಾನೆಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಅಬ್ಬೂರು ಗೇಟ್ ಮೂಲಕ ದೇವಮಚ್ಚಿ ಮೀಸಲು ಅರಣ್ಯಕ್ಕೆ ಹಿಮ್ಮೆಟ್ಟಿಸಿದ್ದಾರೆ.

ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲಿ ವೃಷಿನಿ ಹಾಗೂ ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ ಅವರ ನಿರ್ದೇಶನದಲ್ಲಿ, ತಿತಿಮತಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು.

ತಿತಿಮತಿ ವಲಯ ಅರಣ್ಯಾಧಿಕಾರಿ ಗಂಗಾಧರ ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಶಶಿ ಪಿ.ಟಿ. ಅವರ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ಕೈಗೊಂಡು ಕಾಡಾನೆಗಳನ್ನು ಸುರಕ್ಷಿತವಾಗಿ ದೇವಮಚ್ಚಿ ಮೀಸಲು ಅರಣ್ಯದ ಕಡೆಗೆ ಹಿಮ್ಮೆಟ್ಟಿಸಿದರು.

 ಕಾರ್ಯಾಚರಣೆಯಲ್ಲಿ ಅರಣ್ಯ ಪಾಲಕ ರಾಜೇಶ್ ಚೆನ್ನಂಗಿ, ಆರ್‌ಆರ್‌ಟಿ ಸಿಬ್ಬಂದಿಗಳು, ವನ್ಯಜೀವಿ ವಲಯದ ಉಪ ವಲಯ ಅರಣ್ಯಾಧಿಕಾರಿ ಚನ್ನವೀರೇಶ್ ಹಾಗೂ ಸಿಬ್ಬಂದಿಗಳು, ತಿತಿಮತಿ ಇಟಿಎಫ್ ಉಪ ವಲಯ ಅರಣ್ಯಾಧಿಕಾರಿ ದೇವರಾಜ್ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

ರಾತ್ರಿ ವೇಳೆ ಕಾಡಾನೆಗಳು ಮತ್ತೆ ನಾಡಿಗೆ ನುಗ್ಗದಂತೆ ತಡೆಯುವ ಉದ್ದೇಶದಿಂದ ಅಬ್ಬೂರು ಗೇಟ್ ಹಾಗೂ ಚೆನ್ನಂಗಿ ಗೇಟ್ ಬಳಿ ಅರಣ್ಯ ಸಿಬ್ಬಂದಿಗಳನ್ನು ಪಹರೆ ಕಾಯುವ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ತಿತಿಮತಿ ವಲಯ ಅರಣ್ಯಾಧಿಕಾರಿ ಗಂಗಾಧರ ಮತ್ತು ಆನೆ ಸೌಕೂರು ವಲಯ ಅರಣ್ಯಾಧಿಕಾರಿ ದೇವರಾಜ್ ತಿಳಿಸಿದ್ದಾರೆ.