ಗೋಣಿಕೊಪ್ಪ; ಮಹಾತ್ಮ ಗಾಂಧಿ ನರೇಗಾ ಬಚಾವೋ ಸಂಗ್ರಮ;ಐದು ಕಿಲೋಮೀಟರ್ ಕಾಲ್ನಡಿಗೆ ಜಾಥಾ
ಗೋಣಿಕೊಪ್ಪ: ಮಹಾತ್ಮ ಗಾಂಧಿ ನರೇಗಾ ಬಚಾವೋ ಸಂಗ್ರಮಕ್ಕೆ ೭೫೦೦ಕ್ಕೂ ಹೆಚ್ಚು ಹೆಜ್ಜೆಗಳನ್ನಾಕುವ ಮೂಲಕ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಐದು ಕಿಲೋಮೀಟರ್ ಕಾಲ್ನಡಿಗೆ ಜಾಥ ನಡೆಸಿದರು.
ಗೋಣಿಕೊಪ್ಪ ಉಮಾಮಹೇಶ್ವರಿ ದೇವಸ್ಥಾನದಿಂದ ಪೊನ್ನಂಪೇಟೆ ಗಾಂಧಿ ಪ್ರತಿಮೆ ವರೆಗೆ ಪಾದಯಾತ್ರೆ ಸಾಗಿ ಬಂದಿತ್ತು.
ಸಾವಿರಾರು ಕಾರ್ಯಕರ್ತರು ಮನರೇಗಾ ಯೋಜನೆ ಹೆಸರು ಬದಲಾವಣೆಯ ಕೇಂದ್ರ ಸರ್ಕಾರದ ನಡೆಯ ಪ್ರಶ್ನಿಸಿ, ಘೋಷಣೆಗಳು ಹಾಕಿ ವಿರೋಧಿಸಿದರು.
ಪಾದಯಾತ್ರೆಯಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ರಸ್ತೆಯ ಉದ್ದಕ್ಕೂ ಕುಡಿಯುವ ನೀರು, ಮಜ್ಜಿಗೆ, ತಂಪುಪಾನೀಯ, ಪಾಯಸ, ವಡೆ ವಿತರಿಸಲಾಯಿತು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್ ಪೊನ್ನಣ್ಣ ಅವರ ಮುಂದಾಳತ್ವದಲ್ಲಿ ಕಾಲ್ನಡಿಗೆ ಜಾತ ಸಾಗಿ ಬಂದಿತ್ತು.
ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕೆ.ಪಿ.ಸಿ.ಸಿ ವಕ್ತಾರ ಎಂ. ಲಕ್ಷ್ಮಣ, ರಾಜ್ಯ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಕಾರ್ಯದರ್ಶಿ, ಶಾಂತೆಯಂಡ ವೀಣಾ ಅಚ್ಚಯ್ಯ, ಪ್ರಮುಖರುಗಳಾದ ಆಪಟ್ಟೀರ ಟಾಟು ಮೊಣ್ಣಪ್ಪ, ಕುಲ್ಲಚಂಡ ಪ್ರಮೋದ್ ಗಣಪತಿ, ಕೊಲ್ಲೀರ ಬೋಪಣ್ಣ, ಚಂದ್ರಕಲಾ, ಮಿದೇರಿರ ನವೀನ್, ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಗಫೂರ್ ಇದ್ದರು.
ನಂತರ ಪೊನ್ನಂಪೇಟೆ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಾಥಕ್ಕೆ ಸಮಾಪ್ತಿ ಮಾಡಲಾಯಿತು.
ಈ ಸಂದರ್ಭ ಮಾತನಾಡಿದ ಶಾಸಕ ಎ.ಎಸ್ ಪೊನ್ನಣ್ಣ, ಭಾರತ ದೇಶವನ್ನು ಪ್ರಪಂಚದಲ್ಲೇ ಗುರುತಿಸುವಂತೆ ಮಾಡಿದ ಮಹಾತ್ಮನ ಹೆಸರನ್ನ ಕಾಯ್ದೆಯಿಂದ ಕಿತ್ತೊಗೆಯುವ ಕಾರಣಕ್ಕೆ ಸ್ಪಷ್ಟತೆಯನ್ನು ಕೊಡಿ ಎಂದು ಕಾನೂನಾತ್ಮಕವಾದ ಪ್ರಶ್ನೆಗಳನ್ನು ಕೇಂದ್ರ ಸರ್ಕಾರಕ್ಕೆ ಕೇಳಿದರೆ ಯಾವುದೇ ಉತ್ತರ ನೀಡುತ್ತಿಲ್ಲ. ಇದಕ್ಕೆ ವಿರೋಧವಾಗಿ ಭಾವನಾತ್ಮಕವಾದ, ದ್ವೇಷ ಆಧಾರಿತವಾದ, ಪ್ರಜಾತಂಕಕಾರಿಯಾದ ರಾಜಕಾರಣವನ್ನ ಮಾಡುತ್ತಿದ್ದಾರೆ.
ನರೇಗಾ ಕಾನೂನು ತಿದ್ದುಪಡಿಯಿಂದ ರೈತರ ಗ್ರಾಮೀಣ ಜನರ ದಲಿತರ ಕೂಲಿ ಕಾರ್ಮಿಕರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕುವ ಪ್ರಯತ್ನ ಸಾಗುತ್ತಿದೆ.
ಭಾರತದ ಸ್ವಾತಂತ್ರ್ಯಕ್ಕಾಗಿ ೧೭ ವರ್ಷಗಳ ಕಾಲ ಕಾರಗೃಹ ಶಿಕ್ಷೆಯನ್ನು ಅನುಭವಿಸಿದ ಗಾಂಧೀಜಿ ಹೆಸರನ್ನು ಕೇಂದ್ರ ಸರ್ಕಾರ ಮರೆತು ಹೋಗುತ್ತಿದೆ ಎಂಬುದೇ ವಿಪರ್ಯಾಸ. ಇಂತಹ ಬೆಳವಣಿಗೆಗೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆತಂಕಕಾರಿಯಾಗಿದೆ ಎಂದು ಹೇಳಿದರು.
ಭಾರತವನ್ನು ತಿಳಿಯಬೇಕಾದರೆ ಭಾರತದ ಗ್ರಾಮಗಳನ್ನ ನೋಡಬೇಕು ಎಂಬ ಗಾಂಧಿ ಕಲ್ಪನೆಯನ್ನು ಮುಂದಾಲೋಚನೆಯ ಮೂಲಕ ೨೦೦೫ರಲ್ಲಿ ಜಾರಿಗೆ ತಂದ ನರೇಗಾ ಯೋಜನೆ ಕಳೆದ ೨೦ ವರ್ಷಗಳಿಂದ ಗ್ರಾಮೀಣ ಜನರಿಗೆ ಉದ್ಯೋಗ ಸೃಷ್ಟಿ ಮಾಡಿದೆ. ಆದರೆ ಇಂದು ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಬಹುದೊಟ್ಟ ಹೊರೆಯನ್ನು ಹಾಕಿ ಯೋಜನೆ ಅನುಷ್ಠಾನವಾಗದಂತೆ ನೋಡಿಕೊಳ್ಳುವ ಪ್ರಯತ್ನ ಸಾಗುತ್ತಿದೆ.
ಹಿಂದೆ ಕೇಂದ್ರ ಸರಕಾರ ಶೇಕಡ ೯೦ರಷ್ಟು ಮತ್ತು ರಾಜ್ಯ ಸರ್ಕಾರ ೧೦ರಷ್ಟು ಒದಗಿಸುತ್ತಿತ್ತು. ಇದೀಗ ರಾಜ್ಯ ಸರ್ಕಾರ ೪೦ರಷ್ಟು ಅನುದಾನ ಒದಗಿಸುವಂತೆ ಕಾನೂನು ತಿದ್ದುಪಡಿ ಮಾಡಲಾಗಿದೆ. ಇದೊಂದು ಮರಣ ಶಾಸನದಂತಾಗಿದೆ ಎಂದು ಹೇಳಿದರು.
ಯಾವುದೇ ರಾಜ್ಯ ಸರ್ಕಾರದ ಜೊತೆ ಚರ್ಚೆ ಮಾಡದೆ ಏಕಾಏಕಿ ಕಾನೂನು ಜಾರಿ ಮಾಡುವ ಮೂಲಕ ಸಂವಿಧಾನ ವಿರೋಧ ಚಟುವಟಿಕೆಯನ್ನು ಕೇಂದ್ರ ಸರ್ಕಾರ ಅನುಸರಿಸಿದೆ ಇದು ಮಹಾತ್ಮನ ತತ್ವ, ಸಿದ್ಧಾಂತ ನಡೆಗಳಿಗೆ ವಿರೋಧದ ವ್ಯವಸ್ಥೆಯಾಗಿದೆ. ಈ ವಿಚಾರವನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ ಎಂದು ಹೇಳಿದರು.