ನಾನು ನಿಮ್ಮ ಮಗನಿದ್ದಂತೆ: ವೀಡಿಯೊ ಕರೆ ಮೂಲಕ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ ನಟ ವಿಜಯ್

ನಾನು ನಿಮ್ಮ ಮಗನಿದ್ದಂತೆ: ವೀಡಿಯೊ ಕರೆ ಮೂಲಕ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ ನಟ ವಿಜಯ್
Photo credit: PTI

ಚೆನ್ನೈ, ಅ.7: ಕರೂರಿನ ಕಾಲ್ತುಳಿತ ದುರಂತದಲ್ಲಿ ಜೀವ ಕಳೆದುಕೊಂಡ ಕುಟುಂಬದವರೊಂದಿಗೆ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ವಿಜಯ್ ಅವರು ವಾಟ್ಸ್‌ ಆಪ್ ವೀಡಿಯೊ ಕರೆ ಮೂಲಕ ಮಾತನಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಕುಟುಂಬಗಳಿಗೆ ಎಲ್ಲ ರೀತಿಯ ಸಹಾಯ ಮತ್ತು ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.

ಸೆಪ್ಟೆಂಬರ್ 27ರಂದು ಕರೂರಿನಲ್ಲಿ ವಿಜಯ್ ನೇತೃತ್ವದಲ್ಲಿ ನಡೆದ ಟಿವಿಕೆ ಪಕ್ಷದ ರ‍್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟಿದ್ದರು. ಈ ಘಟನೆಯ ನಂತರ ವಿಜಯ್ ಅವರು ನೇರವಾಗಿ ಸ್ಥಳಕ್ಕೆ ಭೇಟಿ ನೀಡದಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗೆ ವ್ಯಕ್ತವಾಗಿತ್ತು. ಅವರಿಗೆ ಸ್ಥಳಕ್ಕೆ ಭೇಟಿ ನೀಡಲು ಆಡಳಿತದಿಂದ ಅನುಮತಿ ಲಭಿಸಿರಲಿಲ್ಲ ಎನ್ನಲಾಗಿದೆ.

ಸಂತ್ರಸ್ತ ಕುಟುಂಬದ ಸದಸ್ಯರೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, “ವಿಜಯ್ ಅವರು ನನ್ನ ಅಳಿಯನಿಗೆ ಕರೆ ಮಾಡಿ ದುರಂತದ ಕುರಿತು ವಿಷಾದ ವ್ಯಕ್ತಪಡಿಸಿ, ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು,” ಎಂದು ಹೇಳಿದ್ದಾರೆ.

 ಮತ್ತೊಂದು ವೀಡಿಯೊ ಕರೆಯಲ್ಲಿ ವಿಜಯ್ ಅವರು ಮಹಿಳೆಯೊಬ್ಬರೊಂದಿಗೆ ಮಾತನಾಡಿ, “ನಾನು ನಿಮ್ಮ ಮಗನಂತೆ ಇದ್ದೇನೆ, ಧೈರ್ಯವಾಗಿರಿ,” ಎಂದು ಸಾಂತ್ವನ ನೀಡಿದ್ದಾರೆ.

 ಇದೇ ವೇಳೆ, ವಿಜಯ್ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೂರಿಗೆ ತೆರಳಿ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ಅಗತ್ಯ ನೆರವು ಒದಗಿಸಲು ಸೂಚಿಸಿದ್ದಾರೆ. ವಿಜಯ್ ಅವರ ಈ ಮಾನವೀಯ ನಡೆ ಅಭಿಮಾನಿಗಳು ಮತ್ತು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.