ಪಾಲಿಬೆಟ್ಟ;ಬಾಡಿಗೆ ವಿಚಾರದಲ್ಲಿ ಆಟೋ ಚಾಲಕನ ಮೇಲೆ ಹಲ್ಲೆ ,ಚಾಕುವಿನಿಂದ ಇರಿಯಲು ಯತ್ನ

ಪಾಲಿಬೆಟ್ಟ;ಬಾಡಿಗೆ ವಿಚಾರದಲ್ಲಿ ಆಟೋ ಚಾಲಕನ ಮೇಲೆ ಹಲ್ಲೆ ,ಚಾಕುವಿನಿಂದ ಇರಿಯಲು ಯತ್ನ
ಆಟೋ

ಮಡಿಕೇರಿ: ಆಟೋ ಬಾಡಿಗೆ ವಿಚಾರದಲ್ಲಿ ಗಲಾಟೆ ಏರ್ಪಟ್ಟು ಚಾಲಕನ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿಯಲು ಯತ್ನಿಸಿದ ಘಟನೆ ಪಾಲಿಬೆಟ್ಟ ಬಳಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ, ಊರುಗುಪ್ಪೆ ನಿವಾಸಿ ಸೈಯದ್‌ ಅಲವಿ (37) ಎಂಬಾತನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

ತಾ. 7 ರಂದು ರಾತ್ರಿ ಗೋಣಿಕೊಪ್ಪದಿಂದ ರಾಜೀವನ್ ಎಂಬವರ ಆಟೋದಲ್ಲಿ ಪಾಲಿಬೆಟ್ಟಕ್ಕೆ ಪ್ರಯಾಣ ಬೆಳೆಸಿದ ಸೈಯದ್ ಅಲವಿ ಪಾಲಿಬೆಟ್ಟದ ಮೂಕ ಕಾಫಿ ತೋಟದ ಸಮೀಪ ಬಾಡಿಗೆ ವಿಚಾರದಲ್ಲಿ ಆಟೋ ಚಾಲಕನೊಂದಿಗೆ ಗಲಾಟೆ ಮಾಡಿ ಚಾಕುವಿನಿಂದ ಚುಚ್ಚಲು ಯತ್ನಿಸಿದ್ದಾನೆ.

 ಅಪಾಯ ಅರಿತ ಆಟೋ ಚಾಲಕ ರಾಜೀವನ್ ಕಾಫಿ ತೋಟದೊಳಗೆ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಸಂದರ್ಭ ಸೈಯದ್ ಅಲವಿ ಹಿಂಬಾಲಿಸಿಕೊಂಡು ಬಂದು ಆಟೋ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಳಿಕ ಅವರ ಮೇಲೆ - ಹಲ್ಲೆ ನಡೆಸಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ರಾಜೀವ್ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಆರೋಪಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.