ಕೂಡಿಗೆಯ ಡಯಟ್ ಸಂಸ್ಥೆಯಲ್ಲಿ ಗಣತಂತ್ರದ ಸಂಭ್ರಮ; ದೇಶದ ಅಭಿವೃದ್ಧಿಗೆ ಶ್ರಮಿಸುವುದು ಎಲ್ಲರ‌ ಕರ್ತವ್ಯ: ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್

ಕೂಡಿಗೆಯ  ಡಯಟ್ ಸಂಸ್ಥೆಯಲ್ಲಿ ಗಣತಂತ್ರದ ಸಂಭ್ರಮ; ದೇಶದ ಅಭಿವೃದ್ಧಿಗೆ  ಶ್ರಮಿಸುವುದು  ಎಲ್ಲರ‌ ಕರ್ತವ್ಯ: ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್

ಕುಶಾಲನಗರ, ಜ.26 : ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ( ಡಯಟ್ ) ಯಲ್ಲಿ ಸೋಮವಾರ 77 ನೇ ಗಣರಾಜ್ಯೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಮೊದಲಿಗೆ ಧ್ವಜಾರೋಹಣ ನೆರವೇರಿಸಿ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಗಣರಾಜ್ಯೋತ್ಸವದ ಸಂದೇಶ ನೀಡಿದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ( ಅಭಿವೃದ್ಧಿ ) ರೂ ಆದ ಡಯಟ್ ಸಂಸ್ಥೆಯ ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ , ಇಡೀ ವಿಶ್ವಕ್ಕೆ ಮಾದರಿಯಾದ ನಮ್ಮ ದೇಶದ ಸಂವಿಧಾನವು ಧರ್ಮಗ್ರಂಥವಿದ್ದಂತೆ. ಸಂವಿಧಾನ ಕೇವಲ ಸ್ಮರಣೆಯಲ್ಲ; ಇದು ದೇಶದ ಪುನಶ್ಚೇತನದ ಶಕ್ತಿಯಾಗಿದೆ ಎಂದು ಬಣ್ಣಿಸಿದರು.

 ಸಂವಿಧಾನವು ಪ್ರಜಾಪ್ರಭುತ್ವದ ಆದರ್ಶ, ನ್ಯಾಯಾಂಗ ವ್ಯವಸ್ಥೆಯ ಅಡಿಪಾಯ, ರಾಷ್ಟ್ರದ ಪ್ರಗತಿಯ ಮೂಲವಾಗಿದೆ. ಶಿಕ್ಷಣದ ಮೂಲಕ ಭವಿಷ್ಯ ನಿರ್ಮಿಸುವುದು ಎಲ್ಲರ ಹೊಣೆ’ ಎಂದು ಹೇಳಿದರು. ವಿಶ್ವದಲ್ಲೇ ಗಟ್ಟಿಯಾದ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತ ದೇಶವು ವೈವಿಧ್ಯತೆಯಲ್ಲಿ ಏಕತೆಯನ್ನು ಹಿಡಿದಿದೆ. ದೇಶದ ಹೊಣೆಗಾರಿಕೆ ಅರಿತ ನಾವುಗಳು ದೇಶದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ರಾಮಚಂದ್ರರಾಜೇ ಅರಸ್ ಹೇಳಿದರು.

ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಎನ್.ವಿ.ಸ್ವಾಮಿ, ಬಿ.ಎನ್.ಪುಷ್ಪ, ತತ್ವ ಹೇಮಂತ್ ಕುಮಾರ್, ಎಚ್.ಎಚ್.ಸತೀಶ್, ಉಪನ್ಯಾಸಕರಾದ ಕೆ.ಎಸ್.ನಳಿನಾಕ್ಷಿ, ವಿ.ವಿಜಯ್, ಲತಾ, ಜಗದೀಶ್, ಗಾಯತ್ತಿ ಮತ್ತಿತರರು ಇದ್ದರು. ಗಣರಾಜ್ಯೋತ್ಸವದ ಅಂಗವಾಗಿ ತರಬೇತಿ ಸಂಸ್ಥೆಯ ಡಿ.ಎಲ್.ಇಡಿ., ಪ್ರಶಿಕ್ಷಣಾರ್ಥಿಗಳಿಂದ ದೇಶಭಕ್ತಿ ಗಾಯನ ಏರ್ಪಡಿಸಲಾಗಿತ್ತು.