ಸೋಮವಾರಪೇಟೆ; ಆಂಜನೇಯ ದೇವಾಲಯದಲ್ಲಿ ರಾಮನವಮಿ ಅಂಗವಾಗಿ ವಿಶೇಷ ಪೂಜೆ
ಸೋಮವಾರಪೇಟೆ:- ಪಟ್ಟಣದ ಆಂಜನೇಯ ದೇವಾಲಯದಲ್ಲಿ ರಾಮನವಮಿ ಅಂಗವಾಗಿ ವಿಶೇಷ ಪೂಜೆ ನಡೆಯಿತು. ರಾಮನವಮಿಗಾಗಿ ಇಡೀ ಪಟ್ಟಣ ಕೇಸರಿಮಯವಾಗಿದೆ,ಎಲ್ಲಾ ವೃತ್ತಗಳು ಕೇಸರಿ ಬಂಟಿಂಗ್ ಹಾಗೂ ದ್ವಜಗಳಿಂದ ರಾರಾಜಿಸುತ್ತಿವೆ. ಇಂದು ಬೆಳಗಿನಿಂದಲೇ ಪಟ್ಟಣದ ದೇವಾಲಯಗಳಲ್ಲಿ ವಿವಿಧ ಶೇಷ ಪೂಜೆಗಳು ನಡೆದವು.
ಆಂಜನೇಯ ದೇವಾಲಯದಲ್ಲಿ ದೇವಾಲಯ ಸಮಿತಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ದೇವಾಲಯದ ಪ್ರದಾನ ಅರ್ಚಕರಾದ ನಂಜುಂಡೇಶ್ವರ ರವರ ಪುರೋಹಿತ್ವದಲ್ಲಿ ಅಭಿಷೇಕ,ಅರ್ಚನೆ ಮಹಾಮಂಗಳಾರತಿ ನಡೆಯಿತು. ದೇವಾಲಯಕ್ಕೆ ಆಗಮಿಸಿದ ನೂರಾರು ಭಕ್ತರಿಗೆ ಕೋಸಂಬರಿ,ಪಾನಕ,ಮಜ್ಜಿಗೆ ವಿತರಿಸಲಾಯಿತು.
ಮತ್ತೊಂದೆಡೆ ರಾಮನವಮಿ ಆಚರಣಾ ಸಮಿತಿ ವತಿಯಿಂದ ಶ್ರೀ ರಾಮದೇವರಿಗೆ ವಿಶೇಷ ಪೂಜೆಯೊಂದಿಗೆ ನೆರೆದಿದ್ದ ಭಕ್ತರಿಗೆ ಬೆಳಿಗ್ಗೆ ತಿಂಡಿ ಹಾಗೂ ಮದ್ಯಾಹ್ನ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ರಾಮನವಮಿ ಅಂಗವಾಗಿ ಸಂಜೆ ವಿವಿಧ ಗ್ರಾಮೀಣ ಭಾಗಗಳಿಂದ 12 ಸ್ತಬ್ಧ ಚಿತ್ರಗಳು ಜನಪದ ಕಲಾತಂಡಗಳಾದ ಡೊಳ್ಳು,ನಂದಿ,ವೀರಗಾಸೆ,ಚಂಡೆ,ಸುಗ್ಗಿ ಕುಣಿತದೊಂದಿಗೆ ಶ್ರೀರಾಮ ದೇವರ ಬೃಹತ್ ಶೋಭಾಯಾತ್ರೆ ನಡೆಯಲಿದೆ. ನಮ್ಮಲ್ಲಿರುವ ಜನಪದ ಕಲೆಗಳು ಉಳಿಯಬೇಕು ಹಾಗೂ ಬೆಳೆಸಬೇಕು ಆದ್ದರಿಂದ ನಾವು ಕಳೆದ ಹನ್ನೊಂದು ವರ್ಷಗಳಿಂದ ರಾಮನವಮಿಯಲ್ಲಿ ಜನಪದ ಕಲೆಗಳಿಗೆ ಅವಕಾಶ ನೀಡುತ್ತಿದ್ದೇವೆ ಎಂದು ರಾಮನವಮಿ ಆಚರಣಾ ಸಮಿತಿ ಅಧ್ಯಕ್ಷ ಸುಭಾಷ್ ತಿಮ್ಮಯ್ಯ ತಿಳಿಸಿದರು.
ಈ ಸಂದರ್ಭ ಆಂಜನೇಯ ದೇವಾಲಯ ಸಮಿತಿ ಅಧ್ಯಕ್ಷ ಸಿ. ಪಿ. ಗೋಪಾಲ್,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ಎಲ್.ಸೀತಾರಾಮ್,ಕಾರ್ಯದರ್ಶಿ ನಂದಕುಮಾರ್,ರಾಘವ,ಸಿ.ಸಿ.ನಂದ,ದರ್ಶನ್,ಗಣೇಶ, ರಮೇಶ್,ಹಾಲಪ್ಪ ಸೇರಿದಂತೆ ವಿವಿಧ ಸಮಿತಿಗಳ ಸದಸ್ಯರು ಹಾಜರಿದ್ದರು.
