ವಿದ್ಯಾರ್ಥಿನಿಯರಿಗೆ 'ಐ ಲವ್ ಯು ಬೇಬಿ' ಎಂದು ಸಂದೇಶ ಕಳುಹಿಸಿದ್ದ ಸ್ವಾಮಿ ಬಂಧನ

ವಿದ್ಯಾರ್ಥಿನಿಯರಿಗೆ 'ಐ ಲವ್ ಯು ಬೇಬಿ' ಎಂದು ಸಂದೇಶ ಕಳುಹಿಸಿದ್ದ ಸ್ವಾಮಿ ಬಂಧನ
Photo credit: NDTV

ನವದೆಹಲಿ: ದೆಹಲಿಯ ವಸಂತ್ ಕುಂಜ್‌ನ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ ಸಂಸ್ಥೆಯ ನಿರ್ದೇಶಕ ಹಾಗೂ ಸ್ವಯಂ ಘೋಷಿತ ‘ದೇವಮಾನವ’ ಸ್ವಾಮಿ ಚೈತನ್ಯಾನಂದ ಸರಸ್ವತಿ ಅಲಿಯಾಸ್ ಪಾರ್ಥ ಸಾರಥಿಯನ್ನು ಆಗ್ರಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕಳೆದ 50 ದಿನಗಳಿಂದ ಪರಾರಿಯಾಗಿದ್ದ ಚೈತನ್ಯಾನಂದನನ್ನು, ಆಗ್ರಾದ ತಾಜ್‌ಗಂಜ್ ಪ್ರದೇಶದ ಒಂದು ಹೋಟೆಲ್‌ನಲ್ಲಿ ಬೆಳಗಿನ ಜಾವ 3.30ಕ್ಕೆ ಪೊಲೀಸರು ವಶಕ್ಕೆ ಪಡೆದರು.

 ಸಂಸ್ಥೆಯ 17 ಮಹಿಳಾ ವಿದ್ಯಾರ್ಥಿನಿಯರು ಆತನ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದರು. ಅಶ್ಲೀಲ ಸಂದೇಶ ಕಳುಹಿಸುವುದು, ದೈಹಿಕ ಸಂಪರ್ಕಕ್ಕೆ ಪ್ರಯತ್ನಿಸುವುದು, ಉಚಿತ ವಿದೇಶ ಪ್ರವಾಸದ ಆಮಿಷ ಒಡ್ಡುವುದು ಸೇರಿದಂತೆ ಹಲವು ಆರೋಪಗಳು ಹೊರಬಿದ್ದಿವೆ. ಜೊತೆಗೆ ಮಹಿಳಾ ಹಾಸ್ಟೆಲ್‌ನಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದ್ದಾನೆ ಎಂಬ ಸಂಗತಿಯೂ ಬೆಳಕಿಗೆ ಬಂದಿದೆ.

 ಪ್ರಕರಣ ಬಹಿರಂಗವಾದ ತಕ್ಷಣವೇ, ಶೃಂಗೇರಿ ಮಠದ ಆಶ್ರಮದ ಆಡಳಿತ ಮಂಡಳಿ ಚೈತನ್ಯಾನಂದನನ್ನು ಹುದ್ದೆಯಿಂದ ವಜಾಗೊಳಿಸಿತು. ಶಾರದಾ ಪೀಠದ ಶಾಖೆಯಾಗಿರುವ ಈ ಸಂಸ್ಥೆ, ಆತನ ವರ್ತನೆಯನ್ನು “ಅನುಚಿತ”ವೆಂದು ಖಂಡಿಸಿದೆ.

ಒಡಿಶಾದ ಮೂಲದ ಚೈತನ್ಯಾನಂದ, ತಾನು 28 ಪುಸ್ತಕಗಳು ಮತ್ತು 143 ಸಂಶೋಧನಾ ಲೇಖನಗಳನ್ನು ರಚಿಸಿದ್ದೇನೆಂದು ಹೇಳಿಕೊಂಡಿದ್ದಾನೆ. ತನ್ನ ಕೃತಿಗಳಿಗೆ ಆಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಮುನ್ನುಡಿ ಬರೆದಿದ್ದಾರೆ, ಯುಎನ್ ಮಾಜಿ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಮೆಚ್ಚುಗೆಯ ಸಂದೇಶ ನೀಡಿದ್ದಾರೆ ಎಂದು ಪ್ರಚಾರ ಮಾಡಲಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಚುನಾವಣಾ ಪ್ರಚಾರದ ವೇಳೆ ಅವರ Transforming Personality ಕೃತಿಯನ್ನು ಉಲ್ಲೇಖಿಸಿದ್ದಾರೆ ಎಂದು ಸ್ವಾಮಿಯ ಪ್ರೊಫೈಲ್ ತಿಳಿಸಿದೆ.