ವಿರಾಜಪೇಟೆ;ನಾಗರಿಕರ ಸಮಸ್ಯೆಗೆ ಪರಿಹಾರದ ಬೇಡಿಕೆ: ಪ್ರತಿಭಟನೆಗೆ ಕರೆ ನೀಡಿದ ಹೋರಾಟ ಸಮಿತಿ

ವಿರಾಜಪೇಟೆ;ನಾಗರಿಕರ ಸಮಸ್ಯೆಗೆ ಪರಿಹಾರದ ಬೇಡಿಕೆ: ಪ್ರತಿಭಟನೆಗೆ ಕರೆ ನೀಡಿದ ಹೋರಾಟ ಸಮಿತಿ

ವಿರಾಜಪೇಟೆ,ಫೆ:24: ವಿರಾಜಪೇಟೆ ನಗರದಲ್ಲಿನ ನಾಗರಿಕರು ಸೇರಿದಂತೆ ಮಳಿಗೆ, ಕಟ್ಟಡ ಮಾಲೀಕರುಗಳಿಗೆ ಪುರಸಭೆಯ ಮುಖ್ಯಧಿಕಾರಿ ಮತ್ತು ಕಾಂಗ್ರೆಸ್ ಪಕ್ಷ ಕೆಲವು ಸದಸ್ಯರುಗಳು ಬೆದರಿಕೆ ಒಡ್ಡುತ್ತಿದ್ದಾರೆ,ಕಾನೂನು ಪರಿಪಾಲನೆ ಮಾಡದೆ, ಸರ್ಕಾರದಿಂದ ಬಿಡುಗಡೆಗೊಂಡಿರುವ ಅನುದಾನಗಳ ಬಗ್ಗೆ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ನಾಗರಿಕ ಸಮಿತಿ ಮತ್ತು ಸಾರ್ವಜನಿಕ ಕಾರ್ಯಕರ್ತರ ಕೂಟದ ಸಂಯುಕ್ತ ಹೋರಾಟ ಸಮಿತಿ ವಿರಾಜಪೇಟೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಂಡಿದೆ.

ನಾಗರಿಕ ಸಮಿತಿ ಮತ್ತು ಸಾರ್ವಜನಿಕ ಕಾರ್ಯಕರ್ತರ ಕೂಟದ ಸಂಯುಕ್ತ ಹೋರಾಟ ಸಮಿತಿ ವಿರಾಜಪೇಟೆ. ವತಿಯಿಂದ ಹೋರಾಟ ಸಮಿತಿಯ ಕಛೇರಿಯಲ್ಲಿ ಪುರಸಭೆ ವ್ಯಾಪ್ತಿಯ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಪುರಸಭೆಯ ವಿರುದ್ದ ಪ್ರತಿಭಟನೆ ಮತ್ತು ಹಕ್ಕೊತ್ತಾಯ ಕಾರ್ಯಕ್ರಮ ಬಗ್ಗೆ ಪತ್ರಿಕಾಗೋಷ್ಟಿ ಕರೆಯಲಾಗಿತ್ತು.

ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ನಾಗರಿಕ ಸಮಿತಿ ಸಂಚಾಲಕರಾದ ಡಾ. ಇ.ಆರ್. ದುರ್ಗಾಪ್ರಸಾದ್ ಅವರು, ನಗರದಲ್ಲಿ ಈಗಾಗಲೇ ನಡೆಯುತ್ತಿರುವ ರಸ್ತೆ ಅಗಲೀಕರಣ ಬಗ್ಗೆ ಸ್ವತಂತ್ರ ಪೂರ್ವದಲ್ಲಿ ನಿರ್ಮಾಣವಾಗಿರುವ ಕಟ್ಟಡ, ಮನೆ ಮತ್ತು ನಿವೇಶನದಲ್ಲಿ ನೆಲೆಸಿರುವ ನಿವಾಸಿಗಳಿಗೆ ಪರಿಹಾರ ನೀಡುವುದು ಸರ್ಕಾರದ ಕರ್ತವ್ಯವಾಗಬೇಕು. ಇಲ್ಲಿ ಪರಿಹಾರ ಒದಗಿಸದೆ ಪುರಸಭೆಯ ಮುಖ್ಯಧಿಕಾರಿಗಳು ಮತ್ತು ಮಾಜಿ ಕಾಂಗ್ರೆಸ್ ಪಕ್ಷದ ಸದಸ್ಯರುಗಳು ದರ್ಪದಿಂದ ಒತ್ತಡ‌ಪೂರ್ವಕವಾಗಿ ಕೆಡವುತ್ತೇವೆ ಎಂದು ಹೇಳುವುದು ಖಂಡನೀಯ ಎಂದು ಆರೋಪಿಸಿದರು.

ನಗರದ ಅಭಿವೃದ್ದಿಗೆ ನಮ್ಮ ಯಾವುದೇ ವಿರೋಧವಿಲ್ಲ ಬದಲಿಗೆ ನಾಗರಿಕರಿಗೆ ಮತ್ತು ಕಟ್ಟಡ ಮಾಲೀಕರು ಹಾಗೂ ವರ್ತಕರಿಗೆ ತೊಂದರೆ ನೀಡದೆ ಅಭಿವೃದ್ದಿಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು. ಹಲವಾರು ಬಾರಿ ಪುರಸಭೆ ಮತ್ತು ಈ ಹಿಂದಿನ ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿಗಳಿಗೆ ನಾಗರಿಕ ಸಮಸ್ಯೆಗಳ ಅರ್ಜಿ ಸಲ್ಲಿಸಿದರು ಅರ್ಜಿಯನ್ನು ತಿರಸ್ಕರಿಸಿ ಯಾವುದೇ ಕ್ರಮಕ್ಕೆ ಮುಂದಾಗಿರುವುದಿಲ್ಲ. ಮುಖ್ಯಧಿಕಾರಿಗಳ ಕಾನೂನುಬಾಹಿರ ವರ್ತನೆಯನ್ನು ವಿರೋಧಿಸಿ ಮತ್ತು ವಿರಾಜಪೇಟೆ ನಗರದ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಪುರಸಭೆ ಕಛೇರಿ ಮುಂದೆ ಹಕ್ಕೊತ್ತಾಯ ಕಾರ್ಯಕ್ರಮ ಸಂಘಟಿಸಲು ಸಂಯುಕ್ತ ಹೋರಾಟ ಸಮಿತಿ ತೀರ್ಮಾನಿಸಿದೆ ಎಂದು ಹೇಳಿದರು.

ಹೋರಾಟ ಸಮಿತಿಯ ಪ್ರಮುಖರು ವಕೀಲರಾದ ಕೆ.ವಿ. ಸುನೀಲ್ ಅವರು ಮಾತನಾಡಿ ಅಭಿವೃದ್ದಿ ಹೆಸರಿನಲ್ಲಿ ದ್ವಿಮುಖ ಧೋರಣೆ ತಪ್ಪು, ನಾಗರಿಕರ ಹಕ್ಕುಗಳ ಬಗ್ಗೆ ತಿಳುವಳಿಕೆ ಹೊಂದಬೇಕು. ನಾಗರಿಕರ ಮೇಲೆ ಹಣಬಲ ತೋಲ್ಬಲದಿಂದ ಬೆದರಿಕೆ ದರ್ಪದಿಂದ ನಿವೇಶನ ಕಸಿದುಕೊಳ್ಳುತ್ತೇವೆ ಎಂದು ಹೇಳುವುದು ಕಾನೂನಿಗೆ ವಿರುದ್ಧವಾಗಿದೆ.ಮುಖ್ಯ ರಸ್ತೆಯ ಅಭಿವೃದ್ದಿ ಕೆಲಸಗಳ ಯೋಜನೆಯ ಸಂಪೂರ್ಣ ವಿವರಗಳನ್ನು ಜನರ ಮುಂದೆ ಮಂಡಿಸಬೇಕು.ಮಾರುಕಟ್ಟೆಯ ಮಳಿಗೆಗಳನ್ನು ನಿಯಮ ಪ್ರಕಾರ ವಿತರಣೆ ಮಾಡಿರುವುದಿಲ್ಲ,ನಾಗರಿಕರು ಎದುರಿಸುತ್ತಿರುವ 18 ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲು ರಾಜಕೀಯ ರಹಿತ ಹೋರಾಟ ಸಮಿತಿಯು ಹಕ್ಕೊತ್ತಾಯ ಪ್ರತಿಭಟಣೆಗೆ ಮುಂದಾಗಿದೆ ಎಂದರು.

ಮಾಳೇಟಿರ ಕಾಳಯ್ಯ ಅವರು ಮಾತನಾಡಿ ನಗರದ ಅಭಿವೃದ್ದಿಗೆ ನಮ್ಮ ವಿರೋದವಿಲ್ಲ, ಆದರೆ ಅಭಿವೃದ್ದಿ ಹೆಸರಿನಲ್ಲಿ ಪುರಸಭೆಯಲ್ಲಿ ಈ ಹಿಂದಿದ್ದ ಆಡಳಿತ ಮತ್ತು ವಿರೋಶ ಪಕ್ಷದ ಕೆಲವು ಸದಸ್ಯರು ವ್ಯಾಪಕ ಭ್ರಷ್ಟಾಚರ ಮಾಡಿರುತ್ತಾರೆ ಎಂದು ಆರೋಪಿಸಿದರು. ನಾಗರಿಕರಿಗೆ ಪಾರದರ್ಶಕ ಆಡಳಿತ ನೀಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಸಂಯುಕ್ತ ಹೋರಾಟ ಸಮಿತಿಯು ಪ್ರತಿಭಟನೆಗೆ ಮುಂದಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ನಾಗರಿಕ ಸಮಿತಿಯ ಸಹ ಸದಸ್ಯರಾದ ಪಿ.ಕೆ. ಅಬ್ದುಲ್ ರೆಹೆಮಾನ್, ಎನ್.ಕೆ. ಅಬ್ದುಲ್ ಶರೀಫ್ ಅವರು ಹಾಜರಿದ್ದರು.

ವರದಿ; ಕಿಶೋರ್ ಕುಮಾರ್ ಶೆಟ್ಟಿ