ವಿರಾಜಪೇಟೆ; ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ ಮಹಾ ಶಿವರಾತ್ರಿ ಆಚರಣೆ
ವಿರಾಜಪೇಟೆ: ವಿರಾಜಪೇಟೆಯ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ ಮಹಾ ಶಿವರಾತ್ರಿಯ ಅಂಗವಾಗಿ ಮೀನುಪೇಟೆಯ ಚೈತನ್ಯ ಮಡಪ್ಪುರ ಶ್ರೀ ಮುತ್ತಪ್ಪ ದೇವಸ್ಥಾನದ ಆವರಣದಲ್ಲಿರುವ ಶ್ರೀ ಮುತ್ತಪ್ಪ ಕಲಾ ಮಂಟಪದಲ್ಲಿ ಮಹಾ ಮೃತ್ಯುಂಜಯ ಹೋಮ ಶ್ರದ್ದಾ ಭಕ್ತಿಯಿಂದ ನಡೆಯಿತು.
ಭಕ್ತಿಭಾವದಿಂದ ಸಾಮೂಹಿಕ ಮಹಾ ಮೃತ್ಯುಂಜಯ ಹೋಮ ಜರುಗಿತು. ಶಿವನಿಗೆ ಪ್ರಿಯವಾದ ಈ ಹೋಮದ ಮೂಲಕ ದೀರ್ಘಾಯುಷ್ಯ, ಆರೋಗ್ಯ ಮತ್ತು ರೋಗನಿವಾರಣೆಗೆ ಪ್ರಾರ್ಥಿಸಲಾಯಿತು.
ರುದ್ರಾಭಿಷೇಕ, ಮಂತ್ರ ಜಪದೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಆರೋಗ್ಯ ವೃದ್ಧಿ, ಆಯುಷ್ಯ ಹೆಚ್ಚಳ, ಮತ್ತು ಅಪಮೃತ್ಯು ದೋಷ ನಿವಾರಣೆಗಾಗಿ ಭಕ್ತರು ಪ್ರಾರ್ಥಿಸಿ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಲಾಯಿತು. ಹೋಮದಲ್ಲಿ ಚಿತಾಮೃತ (ಅಮೃತಬಳ್ಳಿ), ಅರಳಿ ಚಿಗುರು, ಎಳ್ಳು, ಹಾಲು, ತುಪ್ಪ ಇತ್ಯಾದಿ ಪೂಜಾ ದ್ರವ್ಯಗಳನ್ನು ಭಕ್ತರು ಸಮರ್ಪಿಸಿದರು.
ಈ ಕುರಿತು ಮಾತನಾಡಿದ ಮುತ್ತಪ್ಪ ಮಲಯಾಳಿ ಸಂಘದ ಅಧ್ಯಕ್ಷ ಸುಮೇಶ್ ಪಿ.ಜಿ. ಶ್ರೀ ಮುತ್ತಪ್ಪ ಮಲೆಯಾಳಂ ಸಂಘದ ವತಿಯಿಂದ ಮೊದಲ ಬಾರಿಗೆ ಶಿವರಾತ್ರಿ ಹಬ್ಬದ ಪ್ರಯುಕ್ತ ಈ ಹೋಮ ಹವನ ಕಾರ್ಯಕ್ರಮವನ್ನು ಹಮ್ಮಿಕೊಂಡು ನಾಡಿನ ಜನರಿಗೆ ಆರೋಗ್ಯ ಬಾಗ್ಯ ಸಿಗಲಿ ಎಂಬ ಉದ್ದೇಶದಿಂದ ನಡೆಸಿದ್ದೇವೆ ಮುಂದಿನ ವರ್ಷ ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ಶಿವನ ಜಾಗರಣೆ ಮತ್ತು ಭಜನೆ ಇತ್ಯಾದಿ ನಡೆಯಲಿದೆ ಎಂದು ತಿಳಿಸಿದರು.
ಮೃತ್ಯುಂಜಯ ಹೋಮವನ್ನು ಕೇರಳ ರಾಜ್ಯದ ಇರಟ್ಟಿಯ ನಾರಾಯಣ ಮತ್ತು ತಂಡ ಹಾಗೂ ವಿರಾಜಪೇಟೆಯ ಸಂಘದ ಸದಸ್ಯ ಶ್ರಿಜು ಅವರ ನೇತೃತ್ವದಲ್ಲಿ ನಡೆಯಿತು. ನೂರಾರು ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಶ್ರೀ ಮುತ್ತಪ್ಪ ಮಲಯಾಳಿ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.