ವಿಶ್ವ ಆದಿಮಸಂಜಾತರ ಹಕ್ಕುಗಳ ದಿನ : ಸಿಎನ್‌ಸಿಯಿಂದ ಸತ್ಯಾಗ್ರಹ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

Aug 9, 2026 - 22:36
 0  2
ವಿಶ್ವ ಆದಿಮಸಂಜಾತರ ಹಕ್ಕುಗಳ ದಿನ : ಸಿಎನ್‌ಸಿಯಿಂದ ಸತ್ಯಾಗ್ರಹ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಮಡಿಕೇರಿ ಆ.9 : ವಿಶ್ವ ಆದಿಮಸಂಜಾತರ ಹಕ್ಕುಗಳ ದಿನವಾದ ಇಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ನಡೆಸಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವ ಮಣ್ಣಿನ ಆದಿಮಸಂಜಾತ ಏಕ-ಜನಾಂಗೀಯ ಪ್ರಕೃತಿ ಆರಾಧಕ (ಅನಿಮಿಸ್ಟಿಕ್) ಜನಾಂಗ ಕೊಡವರ ಪರವಾದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಭಾರತ ಸರಕಾರ, ಕರ್ನಾಟಕ ಸರಕಾರ ಮತ್ತು ವಿಶ್ವಸಂಸ್ಥೆಗೆ ಸಲ್ಲಿಸಿದರು.

"ಕೊಡವರ ಭೂ-ರಾಜಕೀಯ ಸ್ವಾಯತ್ತತೆಯ ಶೋಧ," ಆದಿಮಸಂಜಾತ ಕೊಡವರಿಗೆ ಸ್ವಯಂ-ಆಡಳಿತ ಮತ್ತು ಆಂತರಿಕ ರಾಜಕೀಯ ಸ್ವಯಂ-ನಿರ್ಣಯದ ಹಕ್ಕುಗಳು, ಆದಿಮಸಂಜಾತ ಮಾನ್ಯತೆಯೊಂದಿಗೆ ವಿಶಿಷ್ಟ ಜನಾಂಗೀಯ ಸಮುದಾಯವಾಗಿ ಕೊಡವರಿಗೆ ಸಾಂವಿಧಾನಿಕ ವಿಶೇಷ ಖಾತರಿ ನೀಡಬೇಕು ಎಂದು ಒತ್ತಾಯಿಸಿದರು.

ಈ ಜೀವಮಂಡಲ ಸೃಷ್ಟಿಯ ಕಾಲದಿಂದಲೂ ಕೊಡವ ಮಾತೃಭೂಮಿ ಕೊಡವಲ್ಯಾಂಡ್ ಅಸ್ತಿತ್ವದಲ್ಲಿದೆ. ಮಾನವ ಜನಾಂಗದ ಮೂಲದಿಂದಲೂ ಕೊಡವ ಜನಾಂಗದ ವಂಶಾವಳಿಯು ಏಕ-ಜನಾಂಗೀಯ ಪ್ರಕೃತಿ ಆರಾಧನೆಯ ನಂಬಿಕೆಯಾಗಿ ವಿಕಸನಗೊಂಡಿದೆ. ನಮ್ಮ ವಂಶಾವಳಿಯು ಜಂಟಿಯಾಗಿ ಮನೆತನಗಳಾಗಿ (ಕ್ಲಾನ್‌ಗಳು) ವಿಂಗಡಿಸಲ್ಪಟ್ಟಿದೆ. ಪ್ರತಿಯೊಂದು ಮನೆತನವೂ ಪೂರ್ವಜರನ್ನು ಕುಲದೇವರೆಂದು ಪೂಜಿಸುತ್ತದೆ. ದಿವ್ಯ ತೀರ್ಥ, ಜೀವದಾಯಿನಿ ಕಾವೇರಿಯು ನಮ್ಮ ತೀರ್ಥಕ್ಷೇತ್ರವಾಗಿದೆ.

ಕೊಡವರ ಆಧ್ಯಾತ್ಮಿಕ ಜೀವನಚಕ್ರವು ಕಾರಣವ (ಪೂರ್ವಜರು), ಆಯುಧಗಳು (ಸಂಪ್ರದಾಯಿಕ ಕೋವಿ-ತೋಕ್), ಪವಿತ್ರ ಮಂದ್ (ದೇವನನೆಲೆ), ಪವಿತ್ರ ದೇವರಕಾಡು, ಭೂಮಿ ತಾಯಿ, ಕಾವೇರಿ, ಕೊಡವ ನರಮೇಧ ದುರಂತ, ಕೊಡವ ಯುದ್ಧ ಸ್ಮಾರಕ, ಬೇಟೆ ಗುಣಗಳು ಮತ್ತು ಯೋಧತ್ವದ ಸುತ್ತ ಸುತ್ತುತ್ತದೆ. ವಿಶಿಷ್ಟ ಸಾಮಾಜಿಕ ವ್ಯವಸ್ಥೆ, ನಮ್ಮ ಮಾತೃಭಾಷೆ ಕೊಡವ ತಕ್, ಆಚಾರ-ವಿಚಾರಗಳು, ಜಾನಪದ ಕಾನೂನು ವ್ಯವಸ್ಥೆಗಳು ನಮ್ಮ ಸಂಸ್ಥಾಪನೆಯಾಗಿದೆ. ಕೊಡವರಲ್ಲಿ "ಸಪ್ತಪದಿ" ಆಚರಣೆಯಿಲ್ಲ. ಇದು ಜಗತ್ತಿನಾದ್ಯಂತ ಮಾನವ ಸಮಾಜಗಳಲ್ಲಿ ಕಂಡುಬರುವ ಅತ್ಯಂತ ಅಪರೂಪದ ಆಚರಣೆಯಾಗಿದೆ - ಜತೆಗೆ ಸಾಂಪ್ರದಾಯಿಕ ವೈದ್ಯಕೀಯ ಮತ್ತು ಜನಾಂಗೀಯ ಕೃಷಿ ಪದ್ಧತಿ ಇದೆ.

ಕೊಡವರು ಪಶ್ಚಿಮ ಘಟ್ಟಗಳ ರಮಣೀಯ ಪರ್ವತ ಶ್ರೇಣಿ, ವಂಶಪಾರಂಪರ್ಯ ಜಮೀನುಗಳು, ಜಲಪಾತಗಳು, ಸಾಂಪ್ರದಾಯಿಕ ನೀರು ಸರಬರಾಜು ಮೂಲಗಳು, ನದಿಗಳು, ಹಳ್ಳಗಳು, ಜೀವವೈವಿಧ್ಯ, ಸಸ್ಯ ಮತ್ತು ಪ್ರಾಣಿಸಂಕುಲ, ಕಾಡುಪ್ರಾಣಿಗಳು, ಪಕ್ಷಿಗಳ ಕಲರವ, ಭೋರ್ಗರೆಯುವ ಮಳೆ, ಕಾಳಿಂಗ ಸರ್ಪಗಳು, ಜಿಗಣೆಗಳು, ಗ್ರಾಮೀಣ ಕಾಡುಗಳು ಮತ್ತು ಗುಡ್ಡಗಾಡು ಪ್ರದೇಶಗಳ ನಡುವೆ ಅತ್ಯಂತ ಪ್ರಾಚೀನ ಆದಿಮಸಂಜಾತ ಜನಾಂಗೀಯ ಗುಂಪಾಗಿ ಈ ಪವಿತ್ರ ಭೂಮಿಯಲ್ಲಿ ವಾಸಿಸುತ್ತಿದ್ದಾರೆ.

ಒಮ್ಮೆ ನಮ್ಮ ಪ್ರೀತಿಯ ಮಾತೃಭೂಮಿ ಕೊಡವಲ್ಯಾಂಡ್ ಒಂದು ರಾಷ್ಟ್ರ ರಾಜ್ಯವಾಗಿ, ರಾಜ್ಯವಾಗಿ, ಬ್ರಿಟಿಷ್ ಸಂರಕ್ಷಿತ ಪ್ರದೇಶವಾಗಿ, ಪ್ರಾಂತ್ಯವಾಗಿ ಮತ್ತು ನಂತರ 1956 ರಲ್ಲಿ ರಾಜ್ಯ ಪುನಾರಚನೆ ಕಾಯ್ದೆ ಜಾರಿಗೆ ಬರುವವರೆಗೆ "ಸಿ" (ಅ) ರಾಜ್ಯವಾಗಿ ಅಸ್ತಿತ್ವದಲ್ಲಿತ್ತು. ಕೊಡವರು ಜಾತಿಯೂ ಅಲ್ಲ, ಧರ್ಮವೂ ಅಲ್ಲ. ಈ ಮಹತ್ವವನ್ನು ಪರಿಗಣಿಸಿ, 1871-72 ರಿಂದ 1941ರ ರಾಷ್ಟ್ರೀಯ ಜನಗಣತಿಯವರೆಗೆ ಕೊಡವರನ್ನು ಪ್ರತ್ಯೇಕ ಜನಾಂಗೀಯ ಸಮುದಾಯವೆಂದು ನಮೂದಿಸಲಾಗಿತ್ತು. ಅದರ ನಂತರ, ಇಲ್ಲಿಯವರೆಗೆ ನಮ್ಮನ್ನು ದೊಡ್ಡ ಸಮುದಾಯದೊಂದಿಗೆ ವಿಲೀನಗೊಳಿಸಲಾಗಿದೆ, ಇದು ಕೊಡವರ ಭವಿಷ್ಯ, ಅದೃಷ್ಟ, ಅಸ್ತಿತ್ವ ಮತ್ತು ಗುರುತಿಗೆ ಮಾರಕವಾಗಿ ಪರಿಣಮಿಸಿದೆ.

ಒಂದು ರೀತಿಯಲ್ಲಿ ನಾವು 1956 ರಲ್ಲಿ ನಮ್ಮ ಮಾತೃಭೂಮಿಯನ್ನು ಕಳೆದುಕೊಂಡೆವು; ಇನ್ನೊಂದು ರೀತಿಯಲ್ಲಿ 1941 ರ ಜನಗಣತಿಯಲ್ಲಿ ನಮ್ಮ ಜನಾಂಗೀಯ ಗುರುತನ್ನು ಕಳೆದುಕೊಂಡೆವು. ಇದು ನಮಗೆ ಆದ "ದ್ವಿಮುಖ ಗುರುತಿನ ನಷ್ಟ" ಎಂದು ಎನ್.ಯು.ನಾಚಪ್ಪ ತಿಳಿಸಿದರು.

ಸತ್ಯಾಗ್ರಹದಲ್ಲಿ ಚೋಳಪಂಡ ಜ್ಯೋತಿ ನಾಣಯ್ಯ, ಅಳಮಂಡ ಜೈ ಗಣಪತಿ, ಪಟ್ಟಮಾಡ ಕುಶ, ಅಜ್ಜಿಕುಟ್ಟೀರ ಲೋಕೇಶ್, ಮಂದಪಂಡ ಮನೋಜ್ ಮಂದಣ್ಣ, ಕಿರಿಯಮಾಡ ಶೆರಿನ್, ಅರೆಯಡ ಗಿರೀಶ್, ಅರೆಯಡ ಸಾವನ್ ಕೊಡವ, ಚೋಳಪಂಡ ನಾಣಯ್ಯ, ತೋಲಂಡ ಸೋಮಯ್ಯ, ನಂದಿನೆರವಂಡ ವಿಜು, ಮಣವಟ್ಟಿರ ಚಿಣ್ಣಪ್ಪ, ನಂದಿನೆರವಂಡ ಅಪ್ಪಯ್ಯ, ಮಣವಟ್ಟಿರ ಸ್ವರೂಪ್, ನಂದಿನೆರವಂಡ ಅಯ್ಯಣ್ಣ, ಮಣವಟ್ಟಿರ ನಂದ, ಪಾಲೆಕಂಡ ಪ್ರಧಾನ್ ಪೂಣಚ್ಚ, ಐತಿಚಂಡ ಪೂವಣ್ಣ, ಅಚ್ಚಕಾಳೇರ ನವೀನ್ ಮೊಣ್ಣಪ್ಪ ಹಾಗೂ ಕೂಪದಿರ ಸಾಬು ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0